ಬೆಂಗಳೂರು : ನಗರದ ಬಾಗಲೂರಿನಲ್ಲಿ ಯುವತಿಯ ವಿಚಾರವಾಗಿ ಯುವಕನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮಹಮ್ಮದ್ ರಫೀಕ್ ಎಂಬ ಯುವಕನನ್ನು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ ಆರೋಪಿಗಳು ಅಪಹರಿಸಿ ಖಾಲಿ ಜಾಗಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ಅಫಾನ್, ಶಾಹಿದ್, ಅರ್ಫಾತ್, ಮೋಸಿನ್ ಹಾಗೂ ಅಲಿ ಎಂಬವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಅಬ್ನಾನ್ ಮತ್ತು ಅಫ್ರೀದ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಹಿಂದೆ ಮಹಮ್ಮದ್ ರಫೀಕ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ಇಬ್ಬರ ಮಧ್ಯೆ ಬ್ರೇಕ್ ಅಪ್ ಆಗಿತ್ತು. ಬಳಿಕ ಆ ಯುವತಿ ಅಬ್ನಾನ್ ಜೊತೆ ಸಂಪರ್ಕದಲ್ಲಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಮದುವೆ ಸಮೀಪಿಸುತ್ತಿದ್ದ ವೇಳೆ ರಫೀಕ್ ಮತ್ತೆ ಯುವತಿಗೆ ಸಂಪರ್ಕ ಮಾಡಿದ್ದಾನೆ ಎನ್ನಲಾಗಿದೆ. ಇದೇ ವಿಚಾರವಾಗಿ ಮಾತನಾಡಲು ಹೋಗಿದ್ದ ಅಬ್ನಾನ್ಗೆ ರಫೀಕ್ ಹಲ್ಲೆ ಮಾಡಿ ಅವಮಾನಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಈ ವಿಚಾರವನ್ನು ಅಬ್ನಾನ್ ತನ್ನ ಗೆಳೆಯ ಅಫ್ರೀದ್ಗೆ ತಿಳಿಸಿದ್ದಾನೆ.
ಬಳಿಕ ಐದಾರು ಜನರನ್ನು ಕರೆದುಕೊಂಡು ಬಂದ ಗ್ಯಾಂಗ್ ದೇವನಹಳ್ಳಿ ಭಾಗದಲ್ಲಿ ಪ್ಲಾನ್ ಮಾಡಿ ರಫೀಕ್ನನ್ನು ಕಿಡ್ನಾಪ್ ಮಾಡಿದೆ. ನಂತರ ಬಾಗಲೂರಿನ ಖಾಲಿ ಜಾಗವೊಂದರಲ್ಲಿ ಇಟ್ಟುಕೊಂಡು ಹಲ್ಲೆ ನಡೆಸಿದ್ದು, ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿರುವ ಆರೋಪವೂ ಕೇಳಿಬಂದಿದೆ.
ಘಟನೆ ಬಳಿಕ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಲಾಗಿತ್ತು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಬಾಗಲೂರು ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!


















