ಕೋಲ್ಕತ್ತಾ: ಹೊಸ ಹೊಸ ರೈಲುಗಳು, ತಂತ್ರಜ್ಞಾನದ ಮೂಲಕ ಭಾರತವು ಸಂಚಾರ ವ್ಯವಸ್ಥೆಯಲ್ಲಿ ಮೈಲುಗಲ್ಲು ಸಾಧಿಸುತ್ತಿದ್ದರೆ, ಮತ್ತೊಂದೆಡೆ ಕಿಡಿಗೇಡಿಗಳ ಸಣ್ಣತನ ಎಲ್ಲವನ್ನೂ ನೀರಿನಲ್ಲಿ ಹೋಮ ಮಾಡುತ್ತಿದೆ. ಭಾರತೀಯ ರೈಲ್ವೆಯ ಅತ್ಯಾಧುನಿಕ ತಂತ್ರಜ್ಞಾನದ ಮೈಲಿಗಲ್ಲು ಎನ್ನಲಾದ ‘ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್’ ರೈಲು ಆರಂಭವಾದ ಕೆಲವೇ ಗಂಟೆಗಳಲ್ಲಿ ಪ್ರಯಾಣಿಕರ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಹೌರಾ ಮತ್ತು ಗುವಾಹಟಿ ನಡುವಿನ ಮೊದಲ ಪ್ರಯಾಣದ ವೇಳೆ ರೈಲಿನ ಒಳಭಾಗದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಸ ಮತ್ತು ಆಹಾರದ ತ್ಯಾಜ್ಯ ಬಿದ್ದಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಉದ್ಘಾಟನಾ ಓಟದಲ್ಲೇ ವಿರೂಪಗೊಂಡ ಬೋಗಿಗಳು
ಶನಿವಾರವಷ್ಟೇ ಹೌರಾ ಮತ್ತು ಕಾಮಾಖ್ಯ (ಗುವಾಹಟಿ) ನಡುವೆ ಈ ಹೈಟೆಕ್ ಸ್ಲೀಪರ್ ರೈಲಿಗೆ ಚಾಲನೆ ನೀಡಲಾಗಿತ್ತು. ಆದರೆ, ಮಾಲ್ಡಾ ಸಮೀಪ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ ವೀಡಿಯೊದಲ್ಲಿ ರೈಲಿನ ಬೋಗಿಯೊಳಗೆ ಪ್ಲಾಸ್ಟಿಕ್ ಪ್ಯಾಕೆಟ್ಗಳು, ಚಮಚಗಳು ಮತ್ತು ಉಳಿದ ಆಹಾರದ ತುಣುಕುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ರೈಲನ್ನು ನಾಗರಿಕರು ಬಳಸಿಕೊಳ್ಳುವ ರೀತಿಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು, “ನಮಗೆ ಸೌಲಭ್ಯಗಳು ಬೇಕು, ಆದರೆ ಅದನ್ನು ಕಾಪಾಡುವ ಕನಿಷ್ಠ ಪ್ರಜ್ಞೆಯಿಲ್ಲ” ಎಂದು ಕಿಡಿಕಾರಿದ್ದಾರೆ.
ರೈಲ್ವೆ ಇಲಾಖೆಯ ಸ್ಪಷ್ಟನೆ ಏನು?
ವೈರಲ್ ವೀಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು, “ರೈಲ್ವೆ ವ್ಯವಸ್ಥೆಯು ಸಾರ್ವಜನಿಕ ಆಸ್ತಿಯಾಗಿದ್ದು, ಅದರ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ” ಎಂದು ಹೇಳಿದ್ದಾರೆ. ಇಂತಹ ಸಂದರ್ಭಗಳಲ್ಲಿ ತಕ್ಷಣವೇ ಸ್ವಚ್ಛಗೊಳಿಸಲು ರೈಲಿನಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿ ಲಭ್ಯವಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನು ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅನೇಕರು, ಜಪಾನ್ ಮತ್ತು ಯುರೋಪ್ ರಾಷ್ಟ್ರಗಳ ಮಾದರಿಯಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ‘ನಾಗರಿಕ ಪ್ರಜ್ಞೆ’ಯ ಬಗ್ಗೆ ಪಠ್ಯಕ್ರಮ ಅಳವಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಂದೇ ಭಾರತ್ ಸರಣಿಯಲ್ಲೇ ಮೊದಲ ಸ್ಲೀಪರ್ ಆವೃತ್ತಿಯಾದ ಈ ರೈಲು, ಹೌರಾ ಮತ್ತು ಕಾಮಾಖ್ಯ ನಡುವಿನ 958 ಕಿಲೋಮೀಟರ್ ದೂರವನ್ನು ಅತ್ಯಂತ ವೇಗವಾಗಿ ಕ್ರಮಿಸಲಿದೆ. ರಾತ್ರಿ ಪ್ರಯಾಣಕ್ಕೆ ಇದು ಹೆಚ್ಚು ಆರಾಮದಾಯಕವಾಗಿದ್ದು, ಮೂರನೇ ದರ್ಜೆಯ ಹವಾನಿಯಂತ್ರಿತ (3AC) ಬೋಗಿಯ ಪ್ರಯಾಣ ದರವನ್ನು ಸುಮಾರು 2,299 ರೂ. ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪವಿತ್ರಾ ಗೌಡಗೆ ಇಲ್ಲ ಮನೆ ಊಟದ ಭ್ಯಾಗ್ಯ | ಸೆಷನ್ಸ್ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆ!



















