ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ಮರ ಕಡಿಯುವ ವಿಚಾರವಾಗಿ ಸಂಬಂಧಿಕರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ದೀಟೂರು ಗ್ರಾಮದ ಲಂಕೇಶ್ ಕೆ.ಬಿ (40) ಮೃತಪಟ್ಟ ವ್ಯಕ್ತಿಯಾಗಿದ್ದು, ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ಮೃತ ಲಂಕೇಶ್ ಹಾಗೂ ಅವರ ಮಾವ ಹನುಮಂತಪ್ಪ ನಡುವೆ ಹಳೇ ದ್ವೇಷವಿದ್ದ ಹಿನ್ನೆಲೆಯಲ್ಲಿ ಆಗಾಗ್ಗೆ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ. ಈ ನಡುವೆ ಲಂಕೇಶ್ ಅವರ ಮನೆ ಮುಂದೆ ಇದ್ದ ಜಾಲಿ ಮರವನ್ನು ಹನುಮಂತಪ್ಪ ಕಡಿದಿದ್ದಾನೆ. ಇದೇ ವಿಚಾರವಾಗಿ ಲಂಕೇಶ್ ಹಾಗೂ ಹನುಮಂತಪ್ಪ ಕುಟುಂಬಗಳ ನಡುವೆ ತೀವ್ರ ವಾಗ್ವಾದ ಆರಂಭವಾಗಿ ಬಳಿಕ ಜಗಳಕ್ಕೆ ತಿರುಗಿದೆ.
ಜಗಳ ವಿಕೋಪಕ್ಕೆ ತಿರುಗಿದ ವೇಳೆ ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಲಂಕೇಶ್ ಅವರ ಎದೆಗೆ ಕಲ್ಲು ಬಿದ್ದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಲಂಕೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಲಂಕೇಶ್ ಕುಟುಂಬಸ್ಥರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹನುಮಂತಪ್ಪ, ಅವರ ಪುತ್ರ ಪ್ರಕಾಶ್ ಸೇರಿದಂತೆ ನಾಲ್ವರು ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹನುಮಂತಪ್ಪ ಸೇರಿ ನಾಲ್ವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಟೀ ಕುಡಿಯಲು ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ; ಆರೋಪಿ ಬಂಧನ



















