ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕ್ಲೋಸ್ ಆಗಿದ್ದ ಬಾರ್ ಮುಂದೆ ಗಲಾಟೆ ನಡೆಸಿ, ಪೊಲೀಸರ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದು, ಆತನನ್ನು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತನನ್ನು ಸಾಯಿಕುಮಾರ್ ರೆಡ್ಡಿ ಎಂದು ಗುರುತಿಸಲಾಗಿದೆ. ಆತ ಖಾಸಗಿ ಪಬ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.
ರಾತ್ರಿ ಗಸ್ತಿನಲ್ಲಿದ್ದ ಎಲೆಕ್ಟ್ರಾನಿಕ್ ಸಿಟಿಯ ASI ಹಾಗೂ ಪೊಲೀಸ್ ಸಿಬ್ಬಂದಿಗೆ, ಕ್ಲೋಸ್ ಆಗಿದ್ದ ಬಾರ್ ಮುಂದೆ ವ್ಯಕ್ತಿಯೊಬ್ಬ ಗಲಾಟೆ ಮಾಡುತ್ತಿದ್ದಾನೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸರು, ಶೆಟರ್ ಬಿದ್ದಿದ್ದ ಬಾರ್ ಮುಂದೆ ‘ಎಣ್ಣೆ’ಗಾಗಿ ಗಲಾಟೆ ಮಾಡುತ್ತಿದ್ದ ಸಾಯಿಕುಮಾರ್ ರೆಡ್ಡಿಯನ್ನು ಕಂಡಿದ್ದಾರೆ.
ಈ ವೇಳೆ ಆರೋಪಿ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದು, ಬಾರ್ನ ಕ್ಯಾಷಿಯರ್ ಹೊರಬಂದಾಗ ಅವನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಅಲ್ಲದೆ ಪೊಲೀಸರ ಮೇಲೂ ಕೈ ಎತ್ತಲು ಮುಂದಾದನು. ಪ್ರಾಥಮಿಕ ಮಾಹಿತಿಯ ಪ್ರಕಾರ, ತಾನು ಕೆಲಸ ಮಾಡುತ್ತಿದ್ದ ಪಬ್ನಲ್ಲಿ ಮದ್ಯ ದುಬಾರಿ ಎನ್ನುವ ಕಾರಣದಿಂದ, ಪಬ್ ಮುಚ್ಚಿದ ಬಳಿಕ ಸ್ಥಳೀಯ ಬಾರ್ ಬಳಿ ಮದ್ಯಕ್ಕಾಗಿ ಗಲಾಟೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಖಾಸಗಿ ಬಸ್, ಬೈಕ್ ಮಧ್ಯೆ ಡೆಡ್ಲಿ ಆಕ್ಸಿಡೆಂಟ್.. ಇಬ್ಬರು ಸಾವು



















