ಬೆಂಗಳೂರು: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವಾಗಿ 6 ವರ್ಷಗಳು ಕಳೆದರೂ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳ್ಳದಿರುವುದು ಬೇಸರದ ಸಂಗತಿ. ಆರೋಪ-ಪ್ರತ್ಯಾರೋಪ ಮಾಡುತ್ತ ಕಾಲಹರಣ ಮಾಡದೆ ಆದಷ್ಟು ಬೇಗ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವ ಮೂಲಕ ಈ ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಿಎಂ ಭದ್ರಾ ಮೇಲ್ದಂಡೆ ಯೋಜನೆಯ ಹಣಕಾಸಿನ ನವೀಕೃತ ಮಾಹಿತಿಯನ್ನು ತಕ್ಷಣ ಕೇಂದ್ರಕ್ಕೆ ಕಳುಹಿಸಿ, ಅದರ ಪಾಲಿನ 5,300 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ಒತ್ತಡ ಹೇರಬೇಕು. ಮಹದಾಯಿ ನ್ಯಾಯಾಧೀಕರಣದಿಂದ 2018ರ ಆಗಸ್ಟ್ 14 ರಂದು ತೀರ್ಪು ಪ್ರಕಟವಾಗಿದೆ. ತೀರ್ಪಿನಲ್ಲಿ 13.42 ಟಿಎಂಸಿ ನೀರು ರಾಜ್ಯಕ್ಕೆ ಹಂಚಿಕೆಯಾಗಿದ್ದು, ಕಳಸಾ- 1.72 ಟಿಎಂಸಿ, ಬಂಡೂರಿ ನಾಲಾದಿಂದ 2.18 ಟಿಎಂಸಿ ನೀರು ಹಂಚಿಕೆ ಆಗಿದೆ.
ಕಳಸಾ ನಾಲಾಗೆ ಕಣಕುಂಬಿ ಬಳಿ ಈಗಾಗಲೇ 5 ಕಿ.ಮೀ. ಟನಲ್ ನಿರ್ಮಾಣ ಮಾಡಲಾಗಿದೆ. ಕಳಸಾ ನೀರು ಬಳಕೆಗೆ ಕಳಸಾ, ಹಲತಾರ ಡ್ಯಾಂ ನಿರ್ಮಾಣದ ಅವಶ್ಯಕತೆ ಇದೆ. ಡ್ಯಾಂ ನಿರ್ಮಾಣದ ಜಮೀನು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ಸಿಕ್ಕಿಲ್ಲ. ಗೋವಾ ಸರ್ಕಾರ ಪರಿಸರದ ನೆಪವೊಡ್ಡಿ ಪದೆ ಪದೇ ಅಡ್ಡಿ ಮಾಡುತ್ತಿದೆ. ಕೂಡಲೇ ಈ ಸಮಸ್ಯೆ ಬಗೆಹರಿಸಲು ಯತ್ನಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
10 ವರ್ಷಗಳಿಂದ ಮೋದಿ ಸರ್ಕಾರವಿದೆ. ಗೋವಾದಲ್ಲಿಯೂ ಬಿಜೆಪಿ ಸರ್ಕಾರವಿದೆ. ಕಳೆದ ಬಾರಿ ರಾಜ್ಯದಿಂದ 25 ಬಿಜೆಪಿ ಸಂಸದರಿದ್ದರು. ಈ ಬಾರಿಯೂ 16 ಸಂಸದರಿದ್ದಾರೆ. ಬಿಜೆಪಿಯು ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿದೆ. ಮಹದಾಯಿ ಯೋಜನೆ ಅನುಷ್ಠಾನಗೊಳ್ಳದಿರುವುದು ಬಿಜೆಪಿ ಪಕ್ಷದ ಬದ್ಧತೆಯನ್ನು ಹೇಳುತ್ತದೆ. ಆದರೆ ಈಗ ರಾಜಕೀಯ ಕೆಸರೆರಚಾಟ ಮಾಡುತ್ತ ಕೂರುವ ಸಮಯವಲ್ಲ. ಸರ್ವಪಕ್ಷ ನಿಯೋಗದ ಮೂಲಕ ಕೇಂದ್ರದ ಮುಂದೆ ರಾಜ್ಯದ ಶಕ್ತಿ ಪ್ರದರ್ಶನವಾಗಬೇಕಿದೆ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.