ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಗುರುವಾರದಿಂದ ಜಾರಿಗೆ ಬರಲಿದ್ದು, ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ.
ನಾಳೆ ಯೂನಸ್ ನೇತೃತ್ವದ ಸರ್ಕಾರ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಹೇಳಿದ್ದಾರೆ. ಮಧ್ಯಂತರ ಸರ್ಕಾರವು ಗುರುವಾರ ರಾತ್ರಿ 8 ಗಂಟೆಗೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಸಲಹಾ ಮಂಡಳಿಯು 15 ಸದಸ್ಯರನ್ನು ಹೊಂದಿರಲಿದೆ. 84 ವರ್ಷದ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ ಅವರನ್ನು ಮಂಗಳವಾರ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. ಶೇಖ್ ಹಸೀನಾ ಅವರ ಉದ್ಯೋಗಗಳಲ್ಲಿ ವಿವಾದಾತ್ಮಕ ಕೋಟಾ ವ್ಯವಸ್ಥೆಯ ವಿರುದ್ಧ ಮಾರಣಾಂತಿಕ ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ರಾಜೀನಾಮೆ ನೀಡಿ ಶೇಖ್ ಹಸೀನಾ ದೇಶ ತೊರೆದಿದ್ದಾರೆ.
ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ, ಯುವಕರ ಚಳವಳಿ ನಡೆಯುತ್ತಿತ್ತು. ಶೇಖ್ ಹಸೀನಾ ಅವರ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಿದ್ದಕ್ಕೆ ಹಿಂಸಾಚಾರದ ಪ್ರತಿಭಟನೆ ನಡೆದಿದ್ದವು. ಪ್ರೃತಿಭಟನೆಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ತಿಭಟನೆಗಳು ಹೆಚ್ಚಾದಂತೆ, ಅವಾಮಿ ಲೀಗ್ ಸರ್ಕಾರ ಅದನ್ನು ತನ್ನ ಅಧಿಕಾರ ಬಳಸಿ ಹತ್ತಿಕ್ಕಲು ಪ್ರಯತ್ನಿಸಿತು. ಶೇಖ್ ಹಸೀನಾ ಆ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಅವರ ಕೆಲವು ಹೇಳಿಕೆಗಳು ಜನರಲ್ಲಿ ತೀವ್ರ ಆಕ್ರೋಶ ಉಂಟುಮಾಡಿತು. ಮೊದಲು ಉದ್ಯೋಗಗಳಲ್ಲಿ ಮೀಸಲಾತಿ ಕೋಟಾದ ವಿರುದ್ಧ ಚಳುವಳಿ ಪ್ರಾರಂಭವಾಯಿತು. ನಂತರ ಅದು ಶೇಖ್ ಹಸೀನಾ ಸರ್ಕಾರದ ವಿರುದ್ಧ ವ್ಯಾಪಕ ಕೋಪಕ್ಕೆ ತಿರುಗಿತು. ಹೀಗಾಗಿ ಹಿಂಸಾಚಾರ ಹೆಚ್ಚಾಯಿತು. ಹಸೀನಾ ದೇಶವನ್ನೇ ಬಿಟ್ಟು ಹೋಗುವಂತಾಯಿತು.