ತುಮಕೂರು: ದಾರಿ ಬಿಡಿ ಎಂದಿದ್ದಕ್ಕೆ ಯೋಧನ (Soldier) ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಕೊರಟಗೆರೆ (Kortagere) ತಾಲೂಕಿನ ಬೈರೇನಹಳ್ಳಿ ಕ್ರಾಸ್ ಹತ್ತಿರ ನಡೆದಿದೆ. ಗೋವಿಂದರಾಜು (30) ಹಲ್ಲೆಗೊಳಗಾದ ಯೋಧ ಎನ್ನಲಾಗಿದೆ. ಭರತ್, ಪುನೀತ್, ಗೌರಿಶಂಕರ, ಶಿವಾ, ದಿಲೀಪ್ ಎಂಬುವವರು ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಎನ್ನಲಾಗಿದೆ.
ಗೋವಿಂದರಾಜು ಅವರು ಜಮ್ಮುಕಾಶ್ಮಿರದ ರಜೌರಿನಲ್ಲಿ ಭಾರತೀಯ ಭೂಸೇನೆ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯ ಮೇಲೆ ಊರಿಗೆ ಬಂದಿದ್ದು, ಬೈರೇನಹಳ್ಳಿ ಕ್ರಾಸ್ ಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ದಾರಿ ಮಧ್ಯೆ ನಿಂತಿದ್ದವರಿಗೆ ಯೋಧ ಗೋವಿಂದರಾಜು ದಾರಿ ಬಿಡುವಂತೆ ಕೋರಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿ ಐವರು ಮದ್ಯದ ಬಾಟಲಿಯಿಂದ ಗೋವಿಂದರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.