ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಈ ಮಧ್ಯೆ ನಗರದಲ್ಲಿ ಅನ್ಯಕೋಮಿನ ಯುವಕನೊಬ್ಬ ಪ್ರೀತ್ಸೆ..ಪ್ರೀತ್ಸೆ..ಎಂದು ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಅಫ್ತಾಬ್ ಹಲ್ಲೆ ಮಾಡಿರುವ ಆರೋಪಿ. ಕೇಶ್ವಾಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿ ಅಫ್ತಾಬ್ ನನ್ನ ವಿಚಾರಣೆ ಮಾಡಿದ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.
ಸಂತ್ರಸ್ತ ಯುವತಿಗೆ ಅಫ್ತಾಬ್ ಪರಿಚಯಸ್ಥ. ಸ್ನೇಹ ಇದ್ದ ವೇಳೆ ಯುವತಿಗೆ ಕೆಲವು ಉಡುಗೊರೆಗಳನ್ನು ನೀಡಿದ್ದಾನೆ. ಹೀಗೆ ಗಿಫ್ಟ್ ಕೊಡಿಸುವ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಹಲ್ಲೆಗೊಳಗಾಗಿರುವ ಸಂತ್ರಸ್ತೆ ಮಾಹಿತಿ ನೀಡಿದ್ದು, ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಫ್ತಾಬ್ ನನಗೆ ಎರಡು ವರ್ಷದಿಂದ ಪರಿಚಯ. ಅಫ್ತಾಬ್ ಮತ್ತು ನನ್ನ ನಡುವೆ ಸ್ನೇಹವಿತ್ತು.
ಆದರೆ, ಆತ ನನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ನನ್ನ ಹುಟ್ಟು ಹಾಗೂ ರಂಜಾನ್ ದಿನ ಬಲವಂತವಾಗಿ ನನಗೆ ಉಡುಗೊರೆ ನೀಡಿದ್ದಾನೆ. ನೇಹಾ ಪ್ರಕರಣದ ನಂತರ ಸ್ನೇಹ ಕಡಿದುಕೊಳ್ಳಲು ನಿರ್ಧರಿಸಿದ್ದೆ. ಆದರೆ, ಆತ ನನಗೆ ಕರೆ ಮಾಡಿ ಹಣ್ಣಿನ ಅಂಗಡಿ ಬಳಿ ಬರಲು ತಿಳಿಸಿದ್ದ. ಅಫ್ತಾಬ್ ಅಂಗಡಿ ಹತ್ತಿರ ಹೋಗಿ ಆತನ ಗಿಫ್ಟ್ ಮರಳಿ ನೀಡಲು ಮುಂದಾದೆ. ಆತ ಗಿಫ್ಟ್ ಸುಟ್ಟು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಅಫ್ತಾಬ್ ನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.