ಚಂಡೀಗಢ : ಪಂಜಾಬ್ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾದಕ ದ್ರವ್ಯ (ಡ್ರಗ್ಸ್) ಹಾವಳಿಯ ವಿರುದ್ಧ ಧ್ವನಿ ಎತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಸಂಗ್ರೂರ್ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗುಲ್ಜಾರ್ ಸಿಂಗ್ ಎಂದು ಗುರುತಿಸಲಾಗಿದ್ದು, ಸಾವಿಗೂ ಮುನ್ನ ಅವರು ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಆಪ್) ಸರ್ಕಾರದ ಸಚಿವರು ಮತ್ತು ಪೊಲೀಸರ ವಿರುದ್ಧ ಮಾಡಿರುವ ಗಂಭೀರ ಆರೋಪಗಳು ಈಗ ರಾಜ್ಯಾದ್ಯಂತ ಭಾರಿ ರಾಜಕೀಯ ಸಂಚಲನ ಮೂಡಿಸಿವೆ.
ಆಪ್ ಸಚಿವ ಹರ್ಪಾಲ್ ಸಿಂಗ್ ಚೀಮಾ ವಿರುದ್ಧ ಆರೋಪ
ವಿಷ ಸೇವಿಸಿದ ನಂತರ ತೀವ್ರ ಯಾತನೆಯಿಂದ ನರಳುತ್ತಿದ್ದ ಗುಲ್ಜಾರ್ ಸಿಂಗ್, ಸಾವನ್ನಪ್ಪುವ ಮೊದಲು ನೀಡಿದ ಹೇಳಿಕೆಯ ವಿಡಿಯೋ ತುಣುಕುಗಳು ಹೊರಬಂದಿವೆ. ಗ್ರಾಮಕ್ಕೆ ಭೇಟಿ ನೀಡಿದ್ದ ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರನ್ನು ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ನಿಯಂತ್ರಣದ ಬಗ್ಗೆ ಗುಲ್ಜಾರ್ ಪ್ರಶ್ನಿಸಿದ್ದರು. ಈ ಘಟನೆಯ ನಂತರ, ಸಚಿವರನ್ನು ಪ್ರಶ್ನಿಸಿದ್ದಕ್ಕಾಗಿ ಪೊಲೀಸರು ಮತ್ತು ಸ್ಥಳೀಯ ಸರಪಂಚ್ ತಮ್ಮ ಮೇಲೆ ತೀವ್ರ ಒತ್ತಡ ಹೇರಿ, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಬೆದರಿಕೆ ಹಾಕಿದ್ದರೆಂದು ಮೃತರು ಆರೋಪಿಸಿದ್ದಾರೆ. “ನನ್ನ ಮಗ ಡ್ರಗ್ಸ್ ಚಟಕ್ಕೆ ಬಿದ್ದಿದ್ದಾನೆ, ಅದನ್ನು ಬಿಡಿಸಲು ಮನೆ ಮಾರಿಕೊಂಡರೂ ಪರಿಸ್ಥಿತಿ ಬದಲಾಗಲಿಲ್ಲ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಕೊನೆಯಾಗಿಲ್ಲ. ನನ್ನ ಸಾವಿಗೆ ಸಚಿವ ಚೀಮಾ ಮತ್ತು ಸರಪಂಚ್ ಅವರೇ ಕಾರಣ” ಎಂದು ಗುಲ್ಜಾರ್ ಸಿಂಗ್ ಕೊನೆಯ ಕ್ಷಣಗಳಲ್ಲಿ ನೋವು ತೋಡಿಕೊಂಡಿದ್ದಾರೆ.
ಸಚಿವರ ರಾಜೀನಾಮೆಗೆ ವಿಪಕ್ಷ ಆಗ್ರಹ
ಈ ಘಟನೆ ಬಯಲಾಗುತ್ತಿದ್ದಂತೆ ಪಂಜಾಬ್ನ ಪ್ರತಿಪಕ್ಷಗಳು ಆಪ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ನಾಯಕರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಂಜಾಬ್ ಸರ್ಕಾರವು ಕೋಟ್ಯಂತರ ರೂಪಾಯಿ ಜಾಹೀರಾತು ನೀಡಿ ಡ್ರಗ್ಸ್ ಮುಕ್ತ ರಾಜ್ಯ ಎಂದು ಪ್ರಚಾರ ಮಾಡುತ್ತಿದೆ, ಆದರೆ ನಿಜವಾದ ಪರಿಸ್ಥಿತಿ ಭಿನ್ನವಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ನಾಯಕ ರವ್ನೀತ್ ಸಿಂಗ್ ಬಿಟ್ಟು ಆಗ್ರಹಿಸಿದ್ದಾರೆ.
ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ
ಇತ್ತೀಚಿನ ದಿನಗಳಲ್ಲಿ ಪಂಜಾಬ್ನಲ್ಲಿ ಡ್ರಗ್ಸ್ ಸಮಸ್ಯೆಯನ್ನು ಎತ್ತಿಹಿಡಿಯುವ ಸಾರ್ವಜನಿಕರ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂಬ ಆರೋಪಗಳು ಬಲವಾಗುತ್ತಿವೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಡ್ರಗ್ಸ್ ವಿರುದ್ಧ ಪ್ರತಿಭಟಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ಚಿತ್ರಹಿಂಸೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇತ್ತೀಚಿನ ಸರ್ಕಾರಿ ದತ್ತಾಂಶಗಳ ಪ್ರಕಾರ, ರಾಜ್ಯದ ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2024 ರಲ್ಲಿ 9,577 ರಷ್ಟಿದ್ದ ದಾಖಲಾತಿಗಳು 2025 ರ ವೇಳೆಗೆ 25,290ಕ್ಕೆ ಏರಿಕೆಯಾಗಿದ್ದು, ಶೇಕಡಾ 164 ರಷ್ಟು ಹೆಚ್ಚಳ ಕಂಡಿದೆ. ಈ ವರ್ಷದಲ್ಲೂ ಜುಲೈ ತಿಂಗಳ ವೇಳೆಗೆ 14,000ಕ್ಕೂ ಹೆಚ್ಚು ಜನರು ಚಿಕಿತ್ಸೆಗೆ ದಾಖಲಾಗಿದ್ದು, ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಎಷ್ಟು ಭೀಕರವಾಗಿದೆ ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ : ತಿಂಗಳೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗೋದಿಲ್ಲ ರೇಷನ್ : ಮೊದಲು ಇಲ್ಲಿ ಗಮನ ಕೊಡಿ



















