ನವದೆಹಲಿ : ದೇಶದ ಮೂಲೆ ಮೂಲೆಗಳಿಂದ ಶಿಕ್ಷಣ ಮತ್ತು ಉದ್ಯೋಗದ ಕನಸು ಹೊತ್ತು ಕೋಟ್ಯಂತರ ವಿದ್ಯಾರ್ಥಿಗಳು ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ಮಹಾನಗರಗಳಿಗೆ ಧಾವಿಸುತ್ತಾರೆ. ಆದರೆ, ಅವರಿಗೆ ಸುರಕ್ಷಿತ ವಸತಿ ಸಿಗುವುದು ಇಂದಿಗೂ ಒಂದು ದೊಡ್ಡ ಸವಾಲು. ಇತ್ತೀಚೆಗೆ ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ಐದು ಮಹಡಿಯ ಖಾಸಗಿ ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡ ಧ್ವಂಸಗೊಂಡು ಏಳು ಜೀವಗಳು ಬಲಿಯಾಗಿವೆ. ಈ ದುರಂತವು, ದೇಶದ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ, ಅಸುರಕ್ಷಿತ ಪಿಜಿಗಳು ಹಾಗೂ ಖಾಸಗಿ ಹಾಸ್ಟೆಲ್ಗಳ ಕರಾಳ ಮತ್ತು ಭೀಕರ ಮುಖವನ್ನು ಜಗಜ್ಜಾಹೀರುಗೊಳಿಸಿದೆ.
ಅನಧಿಕೃತ ನಿರ್ಮಾಣ ಮತ್ತು ಸುರಕ್ಷತಾ ಲೋಪಗಳು
ದುರಂತಕ್ಕೀಡಾದ ಕಟ್ಟಡದ ನಿರ್ಮಾಣದಲ್ಲಿ ಗಂಭೀರ ಭದ್ರತಾ ಲೋಪಗಳಿದ್ದವು. ತಳಮಹಡಿಯಲ್ಲಿ ಯಾವುದೇ ಪಿಲ್ಲರ್ ಹಾಗೂ ಬೀಮ್ಗಳ ಆಸರೆಯೇ ಇಲ್ಲದೆ ಇದನ್ನು ನಿರ್ಮಿಸಲಾಗಿತ್ತು. ಕಾಲಕ್ರಮೇಣ ನಿಯಮಗಳನ್ನು ಗಾಳಿಗೆ ತೂರಿ ಒಂದೊಂದೇ ಮಹಡಿಗಳನ್ನು ಹೆಚ್ಚಿಸುತ್ತಾ ಹೋಗಲಾಗಿತ್ತು. ಮೂಲತಃ 1970ರ ದಶಕದಲ್ಲಿ ಪುನರ್ವಸತಿ ಯೋಜನೆಯಡಿ ಕೇವಲ ‘ಗ್ರೌಂಡ್ + 1’ ಮಹಡಿಗೆ ಮಾತ್ರ ಅನುಮತಿ ಇದ್ದ ಜಾಗದಲ್ಲಿ, ನೆಲಮಹಡಿ ಸೇರಿ ನಾಲ್ಕು ಮಹಡಿಗಳನ್ನು ಅಕ್ರಮವಾಗಿ ಎಬ್ಬಿಸಲಾಗಿತ್ತು.
ಬಾಯ್ಸ್ ಹಾಸ್ಟೆಲ್ ಆಗಿ ಬಳಕೆಯಾಗುತ್ತಿದ್ದ ಈ ಕಟ್ಟಡಕ್ಕೆ ಯಾವುದೇ ಅಧಿಕೃತ ಅನುಮೋದಿತ ನಕ್ಷೆಯೂ ಇರಲಿಲ್ಲ. ತಳಮಹಡಿಯಲ್ಲಿ ಯಾವುದೇ ಪಿಲ್ಲರ್ ಹಾಗೂ ಬೀಮ್ಗಳ ಬಲವಿಲ್ಲದೆ ನಿರ್ಮಿಸಲಾಗಿದ್ದ ಈ ಹಳೆಯ ಕಟ್ಟಡದ ನೆಲಮಹಡಿಯಲ್ಲಿ ನೀರು ತುಂಬಿಕೊಂಡು, ರಿಪೇರಿ ಕೆಲಸ ನಡೆಯುತ್ತಿದ್ದಾಗ ಈ ಭೀಕರ ದುರಂತ ಸಂಭವಿಸಿದೆ. ಸಮೀಕ್ಷೆಗಳ ಪ್ರಕಾರ, ಸತ್ಯನಿಕೇತನದಂತಹ ಪ್ರದೇಶಗಳಲ್ಲಿರುವ 300ರಷ್ಟು ಮನೆಗಳ ಪೈಕಿ 200ಕ್ಕೂ ಹೆಚ್ಚು ಮನೆಗಳು ಕಾನೂನುಬಾಹಿರವಾಗಿ ವಾಣಿಜ್ಯ ಪಿಜಿಗಳಾಗಿ ಮಾರ್ಪಟ್ಟಿವೆ. ಕಿರಿದಾದ ಗಲ್ಲಿಗಳು, ಆವರ್ತನವಿಲ್ಲದ ಗಾಳಿ-ಬೆಳಕು, ಮತ್ತು ಅಗ್ನಿಶಾಮಕ ಉಪಕರಣಗಳ ಕೊರತೆಯ ನಡುವೆಯೇ ನೂರಾರು ವಿದ್ಯಾರ್ಥಿಗಳು ಸಣ್ಣ ಕೊಠಡಿಗಳಲ್ಲಿ ಕಷ್ಟಪಟ್ಟು ಜೀವನ ನಡೆಸಬೇಕಾಗಿದೆ.
ಷರತ್ತುಗಳ ಹೆಸರಿನಲ್ಲಿ ಶೋಷಣೆ
ಇನ್ನೊಂದೆಡೆ ದುರಂತದ ನಂತರ ಬೆಳಕಿಗೆ ಬಂದ ಪಿಜಿ ಬಾಡಿಗೆ ಒಪ್ಪಂದದ ಪ್ರತಿಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ. ಅಗ್ನಿ ಅವಘಡ, ಕಟ್ಟಡ ಕುಸಿತ ಅಥವಾ ಯಾವುದೇ ನೈಸರ್ಗಿಕ ವಿಕೋಪಗಳಿಂದ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿದರೆ “ಸಂಸ್ಥೆಯು ಯಾವುದೇ ಪರಿಹಾರ ನೀಡಲು ಬದ್ಧವಾಗಿಲ್ಲ ಮತ್ತು ಅದಕ್ಕೆ ಸಂಸ್ಥೆಯ ಮಾಲಿಕರು ಜವಾಬ್ದಾರರಲ್ಲ” ಎಂಬ ಅಮಾನವೀಯ ನಿಯಮಗಳನ್ನು ಒಪ್ಪಂದದಲ್ಲಿ ಸೇರಿಸಲಾಗಿತ್ತು. ಸಣ್ಣ ಕೊಠಡಿಗಳಿಗೆ ತಿಂಗಳಿಗೆ 9,000 ರೂಪಾಯಿಗಳಿಂದ 20,000ರೂಪಾಯಿವರೆಗೆ ಬಾಡಿಗೆ ವಸೂಲಿ ಮಾಡುವ ಮಾಲೀಕರು, ವಿದ್ಯಾರ್ಥಿಗಳ ಕನಿಷ್ಠ ಸುರಕ್ಷತೆಯ ಹೊಣೆ ಹೊರಲು ಹಿಂಜರಿಯುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.
ವಿಶ್ವವಿದ್ಯಾಲಯಗಳಲ್ಲಿ ಹಾಸ್ಟೆಲ್ ಅಭಾವ
ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ಪ್ರಕಾರ, ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 4.5 ಕೋಟಿಗೆ ಏರಿಕೆಯಾಗಿದೆ. ದೆಹಲಿ, ಕೋಟಾ, ಬೆಂಗಳೂರು, ಪುಣೆ, ಇಂದೋರ್, ಪಾಟ್ನಾಗಳಂತಹ ಶೈಕ್ಷಣಿಕ ಹಬ್ಗಳಿಗೆ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವಲಸೆ ಬರುತ್ತಿದ್ದಾರೆ. ಆದರೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸೀಟುಗಳಿಗೆ ತಕ್ಕಂತೆ ಹಾಸ್ಟೆಲ್ ವಸತಿ ಸೌಕರ್ಯಗಳಿಲ್ಲ. ಉದಾಹರಣೆಗೆ, ದೆಹಲಿ ವಿಶ್ವವಿದ್ಯಾಲಯದ ಶೇಕಡಾ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊರರಾಜ್ಯಗಳಿಂದ ಬರುತ್ತಾರಾದರೂ, ವಿಶ್ವವಿದ್ಯಾಲಯದ ಬಳಿ ಲಭ್ಯವಿರುವ ಹಾಸ್ಟೆಲ್ ಸೀಟುಗಳ ಸಂಖ್ಯೆ ಕೇವಲ 4,000 ದಷ್ಟಿದೆ.
ಖಾಸಗಿ ವಲಯದ ಮಾರುಕಟ್ಟೆ ವರದಿಗಳ ಪ್ರಕಾರ, ದೇಶದಲ್ಲಿ ಸುಮಾರು 1.20 ಕೋಟಿ ವಿದ್ಯಾರ್ಥಿಗಳಿಗೆ ವಸತಿಯ ಅಗತ್ಯವಿದ್ದರೆ, ಕಾಲೇಜು ಹಾಸ್ಟೆಲ್ಗಳು ಕೇವಲ 40 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಆಶ್ರಯ ನೀಡಬಲ್ಲವು. ಅಂದರೆ ಶೇಕಡಾ 60 ರಿಂದ 65 ರಷ್ಟು ವಿದ್ಯಾರ್ಥಿಗಳಿಗೆ ಸರ್ಕಾರಿ ಅಥವಾ ಅಧಿಕೃತ ಹಾಸ್ಟೆಲ್ ಲಭ್ಯವಿಲ್ಲ. ಈ ಬೃಹತ್ ಕೊರತೆಯೇ ನಗರಗಳಲ್ಲಿ ಅನಧಿಕೃತ ಪಿಜಿ ಮಾಫಿಯಾ ಬೆಳೆಯಲು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಕಳಪೆ ಆಹಾರ, ಜನಾಂಗೀಯ ಅಥವಾ ಆರ್ಥಿಕ ತಾರತಮ್ಯ ಮತ್ತು ಮೂಲಭೂತ ನೈರ್ಮಲ್ಯದ ಅಭಾವಗಳು ಪಿಜಿಗಳಲ್ಲಿ ಸಾಮಾನ್ಯ ಸಂಗತಿಯಾಗಿವೆ.
ಪೋಷಕರು ಗಮನಿಸಬೇಕಾದ ಅಂಶಗಳೇನು?
ಭಾರತದಲ್ಲಿ ಖಾಸಗಿ ಪಿಜಿಗಳನ್ನು ನಿಯಂತ್ರಿಸಲು ಯಾವುದೇ ಏಕೀಕೃತ ರಾಷ್ಟ್ರೀಯ ಪ್ರಾಧಿಕಾರವಿಲ್ಲ. ಸ್ಥಳೀಯ ಪಾಲಿಕೆಗಳು, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಅಗ್ನಿಶಾಮಕ ಠಾಣೆಗಳ ನಡುವೆ ಸಮನ್ವಯದ ಕೊರತೆಯಿದ್ದು, ಕಟ್ಟಡಗಳ ಸುರಕ್ಷತೆಯನ್ನು ಪರಿಶೀಲಿಸುವ ಯಾವುದೇ ನಿಖರ ವ್ಯವಸ್ಥೆಯಿಲ್ಲ. ಈ ಹಿನ್ನೆಲೆಯಲ್ಲಿ, ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಬಾಡಿಗೆ ಮತ್ತು ಆಹಾರ ವ್ಯವಸ್ಥೆಯನ್ನು ಮಾತ್ರ ನೋಡದೆ, ಕೆಲವೊಂದು ಸುರಕ್ಷತಾ ಅಂಶಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕಾಗಿದೆ:
- ಕಟ್ಟಡಕ್ಕೆ ಅಧಿಕೃತ ಸ್ಥಳೀಯ ಆಡಳಿತದ ಅನುಮೋದನೆ ಇದೆಯೇ?
- ಅಗ್ನಿಶಾಮಕ ಇಲಾಖೆಯಿಂದ ಸುರಕ್ಷತಾ ಪ್ರಮಾಣಪತ್ರ (NOC) ಪಡೆದಿದೆಯೇ?
- ತುರ್ತು ಸಂದರ್ಭದಲ್ಲಿ ಹೊರಹೋಗಲು ಪ್ರತ್ಯೇಕ ತುರ್ತು ನಿರ್ಗಮನ (Emergency Exit) ದಾರಿ ಇದೆಯೇ?
- ಕಟ್ಟಡದಲ್ಲಿ ಅನುಮತಿಗಿಂತ ಹೆಚ್ಚು ಮಹಡಿಗಳನ್ನು ಅಥವಾ ವಿದ್ಯಾರ್ಥಿಗಳನ್ನು ತುಂಬಿಸಲಾಗಿದೆಯೇ?
ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ
ಸತ್ಯನಿಕೇತನ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್, ದೆಹಲಿ ಮಹಾನಗರ ಪಾಲಿಕೆ ಹಾಗೂ ದೆಹಲಿ ವಿಶ್ವವಿದ್ಯಾಲಯದ ವೈಫಲ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ನಗರದಾದ್ಯಂತ ಇರುವ ಎಲ್ಲಾ ಪಿಜಿ ಕಟ್ಟಡಗಳ ತುರ್ತು ರಚನಾತ್ಮಕ ಆಡಿಟ್ ನಡೆಸಲು ಆದೇಶಿಸಿದೆ. ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ಅವರ ಸುರಕ್ಷತೆಯಲ್ಲಿ ಚೆಲ್ಲಾಟವಾಡುವ ಪಿಜಿ ಮಾಲೀಕರು ಹಾಗೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿದೆ. ಶಿಕ್ಷಣದ ಕನಸು ಹೊತ್ತು ಬರುವ ಯುವಜನತೆಗೆ ಸುರಕ್ಷಿತ ವಸತಿ ಕಲ್ಪಿಸುವುದು ಕೇವಲ ವ್ಯಾವಹಾರಿಕ ವಿಚಾರವಾಗದೇ, ಸರ್ಕಾರದ ತುರ್ತು ಆದ್ಯತೆಯಾಗಬೇಕಿದೆ.
ಇದನ್ನೂ ಓದಿ : ಸರ್ಕಾರದ ESICಯಲ್ಲಿ 58 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : 2.48 ಲಕ್ಷ ರೂಪಾಯಿ ಸಂಬಳ


















