ಲಂಡನ್ : ‘ಹಿಂದೂ ರಾಷ್ಟ್ರ’ ಎಂದರೆ ಅದು ಕೇವಲ ಒಂದು ನಿರ್ದಿಷ್ಟ ಆಡಳಿತ, ರಾಜಕೀಯ ಅಧಿಕಾರ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ. ಬದಲಿಗೆ ಭಾರತದ ವೈವಿಧ್ಯತೆಯನ್ನು ಏಕತೆಯಿಂದ ಬೆಸೆಯುವ ಸಾಂಸ್ಕೃತಿಕ ಮತ್ತು ಸನಾತನ ಪರಿಕಲ್ಪನೆಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ. ಲಂಡನ್ನಲ್ಲಿ ನಡೆದ ‘ಏಕತೆಯ ಸಂಭ್ರಮ’ (Celebration of Oneness) ಜಾಗತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಮುಂದಿನ 20 ವರ್ಷಗಳ ಕಾರ್ಯಯೋಜನೆ ಮತ್ತು ಹಿಂದೂ ಸಮಾಜವನ್ನು ಸಂಘಟಿಸುವ ಪ್ರಮುಖ ಗುರಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವೈವಿಧ್ಯತೆಯೇ ನೈಸರ್ಗಿಕ, ಏಕತೆಯೇ ಸತ್ಯ
ಹಿಂದೂ ರಾಷ್ಟ್ರದ ಕಲ್ಪನೆಯ ಕುರಿತು ಸುದೀರ್ಘವಾಗಿ ಮಾತನಾಡಿದ ಮೋಹನ್ ಭಾಗವತ್, “ದೇಶದಲ್ಲಿ ವೈವಿಧ್ಯತೆ ಎನ್ನುವುದು ನೈಸರ್ಗಿಕವಾದದ್ದು. ಏಕತೆಯೇ ಅಂತಿಮ ಸತ್ಯ. ಏಕತೆಯನ್ನು ಸಾಧಿಸಲು ಕಡ್ಡಾಯವಾಗಿ ‘ಸಮಾನತೆ’ ಅಥವಾ ‘ಏಕರೂಪತೆ’ಯ ಅಗತ್ಯವಿಲ್ಲ” ಎಂದು ಪ್ರತಿಪಾದಿಸಿದರು. ಪ್ರತಿಯೊಬ್ಬರ ಆಚಾರ-ವಿಚಾರಗಳು, ಆರಾಧನಾ ಪದ್ಧತಿಗಳು ಬೇರೆಯಾಗಿದ್ದರೂ, ಮೂಲಭೂತ ಏಕತೆಯ ಭಾವನೆಯ ಮೂಲಕ ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳುವುದೇ ಹಿಂದೂ ಚಿಂತನೆಯ ದಾರಿಯಾಗಿದೆ ಎಂದು ಅವರು ವಿವರಿಸಿದರು.
ಹಿಂದೂ ಎಂದರೆ ನಿರ್ದಿಷ್ಟ ಧರ್ಮವಲ್ಲ, ಜಾಗತಿಕ ಬದ್ಧತೆ
ಹಿಂದೂ ಎನ್ನುವುದು ಕೇವಲ ಒಂದು ಧರ್ಮವಲ್ಲ, ಅದು ಜಾಗತಿಕವಾಗಿ ಸ್ವೀಕರಿಸಲ್ಪಟ್ಟ ಬದುಕಿನ ದೃಷ್ಟಿಕೋನವಾಗಿದೆ ಎಂದ ಭಾಗವತ್, ಯಾವುದೇ ಒಂದು ಹಾದಿ ಮಾತ್ರವೇ ಸರಿ ಎಂದು ಹಿಂದೂ ಧರ್ಮ ಎಂದಿಗೂ ಹಠ ಹಿಡಿಯುವುದಿಲ್ಲ ಅಥವಾ ಇತರರನ್ನು ಮತಾಂತರಗೊಳಿಸಲು ಒತ್ತಾಯಿಸುವುದಿಲ್ಲ ಎಂದರು. ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಸಾಂಸ್ಕೃತಿಕವಾಗಿ ಹಿಂದೂಗಳಾಗಿದ್ದರೂ, ಅವರು ವಾಸಿಸುವ ಮತ್ತು ಕರ್ತವ್ಯ ನಿರ್ವಹಿಸುವ ದೇಶಕ್ಕೆ (ಕರ್ಮಭೂಮಿಗೆ) ಸಂಪೂರ್ಣ ನಿಷ್ಠೆ ಹೊಂದಿರಬೇಕು. ತಾಯ್ನಾಡಿನ ಗೌರವ ಹೆಚ್ಚಿಸುವ ಜತೆಗೆ ತಾವು ವಾಸಿಸುವ ದೇಶಕ್ಕೂ ಪ್ರಾಮಾಣಿಕರಾಗಿರಬೇಕು ಎಂಬುದು ಹಿಂದುತ್ವದ ತತ್ವವಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ಪೀಳಿಗೆಗೆ ಮಾರ್ಗದರ್ಶನ
ಸಂಘದ ಶತಮಾನೋತ್ಸವದ ಈ ಅವಧಿಯಲ್ಲಿ ಮುಂದಿನ ಪೀಳಿಗೆಯ ಪಾತ್ರದ ಕುರಿತು ಮಾತನಾಡಿದ ಅವರು, ಈಗಾಗಲೇ ಐದು ಪೀಳಿಗೆಗಳು ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡಿವೆ. ಏಳನೇ ಪೀಳಿಗೆ ಬರುವಷ್ಟರಲ್ಲಿ ಸಂಘಟಿತ ಹಾಗೂ ಸ್ವಾವಲಂಬಿ ಹಿಂದೂ ಸಮಾಜದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ಕರೆ ನೀಡಿದರು. ಸಂಘವು ದೇಶದ ಪ್ರಗತಿಯ ಏಕೈಕ ಗುತ್ತಿಗೆದಾರನಲ್ಲ, ಬದಲಿಗೆ ಸಮಾಜವೇ ತನ್ನ ಸಾಮರ್ಥ್ಯದಿಂದ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ವಾತಾವರಣವನ್ನು ನಿರ್ಮಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದೂ ಹೇಳಿದರು.
ಇದನ್ನೂ ಓದಿ : ನಟಿ ತ್ರಿಷಾ ಕುರಿತು ದ್ವಂದ್ವಾರ್ಥದ ಹೇಳಿಕೆ : ಉದಯನಿಧಿಗೆ ಸಿಎಂ ವಿಜಯ್ ಪರೋಕ್ಷ ಎಚ್ಚರಿಕೆ


















