ಬೆಂಗಳೂರು: ದೇಶಾದ್ಯಂತ ಶಿಕ್ಷಣ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಬೃಹತ್ ಮಟ್ಟದಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿರುವ ಬೆನ್ನಲ್ಲೇ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ರಸ್ತುತ ವಿದ್ಯಮಾನಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ತಾವಿಟ್ಟ ನಂಬಿಕೆ ಹಾಗೂ ವಹಿಸಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂಬ ಅಸಹಾಯಕ ಅಥವಾ ನಿರಾಸೆಯ ಭಾವನೆ ಯುವಜನತೆಯಲ್ಲಿ ಯಾವುದೇ ಕಾರಣಕ್ಕೂ ಮೂಡಬಾರದು ಎಂದು ಹೇಳುವ ಮೂಲಕ ಪಾರದರ್ಶಕ ಮತ್ತು ಅರ್ಹತೆ ಆಧಾರಿತ ವ್ಯವಸ್ಥೆಯ ಪರವಾಗಿ ಅವರು ದನಿ ಎತ್ತಿದ್ದಾರೆ. ನೇರವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸದಿದ್ದರೂ, ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಾಮಾಣಿಕತೆ ಮತ್ತು ಮೆರಿಟ್ನ ಮಹತ್ವವನ್ನು ಸಚಿನ್ ಒತ್ತಿ ಹೇಳಿದ್ದಾರೆ.
ತಂದೆಯ ಕಿವಿಮಾತು ಸ್ಮರಿಸಿದ ಮಾಸ್ಟರ್ ಬ್ಲಾಸ್ಟರ್
ನ್ಯಾಯಯುತ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಸಚಿನ್, ಪ್ರಾಧ್ಯಾಪಕರಾಗಿದ್ದ ತಮ್ಮ ತಂದೆ ರಮೇಶ್ ತೆಂಡೂಲ್ಕರ್ ಅವರ ಕಿವಿಮಾತನ್ನು ಸ್ಮರಿಸಿದ್ದಾರೆ. ತಮ್ಮ ತಂದೆಯವರು ಕೇವಲ ಶಿಕ್ಷಕರಾಗಿರದೆ ಅನೇಕ ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು ಎಂಬುದನ್ನು ನೆನಪಿಸಿಕೊಂಡಿರುವ ಅವರು, ತಮ್ಮ ಎಳೆಯ ವಯಸ್ಸಿನಲ್ಲೇ ತಂದೆ ಕಲಿಸಿದ ಪ್ರಮುಖ ಪಾಠವೊಂದನ್ನು ಉಲ್ಲೇಖಿಸಿದ್ದಾರೆ. ‘ನಾವು ಸೋಲನ್ನು ಒಪ್ಪಿಕೊಳ್ಳಬಹುದು, ಆದರೆ ವಂಚನೆಯನ್ನಲ್ಲ. ಬದುಕಿನಲ್ಲಿ ಯಶಸ್ಸಿಗಾಗಿ ಎಂದಿಗೂ ಅಡ್ಡದಾರಿಗಳನ್ನು ಹಿಡಿಯಬಾರದು’ ಎಂದು ತಿಳಿಸಿದ್ದಾರೆ.
ಸಮಾಜದ ಮುಂದಿರುವ ಬೃಹತ್ ಜವಾಬ್ದಾರಿ
ಒಂದು ಸಮಾಜವಾಗಿ ನಾವು ಎಂತಹ ಆದರ್ಶಗಳನ್ನು ನಿರ್ಮಿಸುತ್ತಿದ್ದೇವೆ ಎಂಬುದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಕೇವಲ ಫಲಿತಾಂಶಗಳಿಗೆ ಮಾತ್ರ ಆದ್ಯತೆ ನೀಡುವ ಸಮಾಜವು ಸಹಜವಾಗಿಯೇ ಅರ್ಹತೆಯನ್ನು ಬದಿಗೊತ್ತಿ ಕುತಂತ್ರ ಹಾಗೂ ಅಡ್ಡದಾರಿಗಳನ್ನು ಹುಡುಕುವಂತೆ ಪ್ರೇರೇಪಿಸುತ್ತದೆ. ಇಂದು ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆತಿಲ್ಲ ಎಂಬ ನಿರಾಸೆಯಲ್ಲಿದ್ದಾರೆ, ಅವರ ಈ ನೋವನ್ನು ಅರ್ಥೈಸಿಕೊಳ್ಳಬಹುದು ಎಂದಿದ್ದಾರೆ. ಅವರು ಭವಿಷ್ಯದಲ್ಲಿ ಮತ್ತೆಂದೂ ಈ ರೀತಿಯ ವಾತಾವರಣವನ್ನು ಎದುರಿಸದಂತೆ ನೋಡಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಪೋಷಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿಗಳು ಮಾತ್ರವಲ್ಲದೆ ಇಡೀ ಸಮಾಜವು ಯುವ ಸಮೂಹವನ್ನು ಸದಾ ಉಲ್ಲಾಸದಿಂದ ಮತ್ತು ಪ್ರೇರೇಪಣೆಯಿಂದ ಇಡುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಶ್ರಮಕ್ಕೆ ಪ್ರತಿಫಲ ಹಾಗೂ ಪ್ರಾಮಾಣಿಕತೆಗೆ ಮನ್ನಣೆ ಸಿಗುವ ಸಂಸ್ಕೃತಿಯನ್ನು ಬೆಳೆಸಬೇಕು ಎಂಬುದು ಅವರ ಆಶಯವಾಗಿದೆ.
ತೀವ್ರಗೊಂಡಿರುವ ಪ್ರತಿಭಟನೆ ಹಾಗೂ ಹಿನ್ನೆಲೆ
ಶಿಕ್ಷಣ ವ್ಯವಸ್ಥೆಯಲ್ಲಿನ ಈ ಭಾರೀ ಅವ್ಯವಸ್ಥೆಗಳ ವಿರುದ್ಧ ಪ್ರಸ್ತುತ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದಲ್ಲಿ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದು, ಘಟನೆಗೆ ಹೊಣೆ ಹೊರುವಂತೆ ಹಾಗೂ ಕೇಂದ್ರ ಶಿಕ್ಷಣ ಸಚಿವರನ್ನು ವಜಾಗೊಳಿಸುವಂತೆ ಪಟ್ಟು ಹಿಡಿಯಲಾಗಿದೆ. ಇದೇ ವೇಳೆ ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂರುವ ಮೂಲಕ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. ಅವರ ಆರೋಗ್ಯ ಹದಗೆಟ್ಟ ಕಾರಣ ದೆಹಲಿ ಹೈಕೋರ್ಟ್ ಮೊರೆ ಹೋದ ಬಳಿಕ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಜುಲೈ ಇಪ್ಪತ್ತರಂದು ಸಾವಿರಾರು ವಿದ್ಯಾರ್ಥಿಗಳು ಸಂಸತ್ತಿನತ್ತ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಲು ಯತ್ನಿಸಿದಾಗ, ದೆಹಲಿ ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದರು. ಈ ಎಲ್ಲಾ ಬಿಕ್ಕಟ್ಟುಗಳ ನಡುವೆ ಪ್ರತಿಕ್ರಿಯೆ ನೀಡಿರುವ ಸಚಿನ್ ತೆಂಡೂಲ್ಕರ್, ಯುವಭಾರತದ ಕನಸುಗಳೇ ದೇಶದ ಸಾಧನೆಗೆ ಇಂಧನವಿದ್ದಂತೆ, ಹಿಗಾಗಿ ಅರ್ಹತೆಗೆ ಜಯ ಸಿಗುವ ಪರಿಹಾರಗಳನ್ನು ಕಂಡುಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.


















