ಕಠ್ಮಂಡು : ಹಾವಿನ ದ್ವೇಷ 12 ವರ್ಷ ಎಂಬ ಮಾತಿದೆ. ಆದರೆ, ಆನೆಯೂ ದ್ವೇಷ ಸಾಧಿಸುತ್ತದೆಯೇ? ಗೊತ್ತಿಲ್ಲ. ಆದರೆ, ನೇಪಾಳದಲ್ಲಿ ನಡೆದ ಅಚ್ಚರಿಯ ಹಾಗೂ ಕರುಣಾಜನಕ ಘಟನೆಯೊಂದು ಇಂಥ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಲ್ಲಿ ಭೀಕರ ನರಭಕ್ಷಕ ಕಾಡಾನೆಯೊಂದು ಒಂದೇ ಕುಟುಂಬದ ನಾಲ್ಕು ಜೀವಗಳನ್ನು ಬಲಿಪಡೆದಿದೆ. ಆನೆಯ ದಾಳಿಗೆ ಹೆದರಿ ಇಡೀ ಕುಟುಂಬವು ಹಳ್ಳಿಯನ್ನೇ ಬಿಟ್ಟು ಮೈಲಿಗಟ್ಟಲೆ ದೂರ ಹೋಗಿ ನೆಲೆಸಿದ್ದರೂ, ಅದೇ ಆನೆ 14 ವರ್ಷಗಳ ನಂತರ ಹುಡುಕಿಕೊಂಡು ಬಂದು ಕುಟುಂಬದ ಮತ್ತಿಬ್ಬರನ್ನು ಹತ್ಯೆ ಮಾಡಿದೆ. ಆದರೆ ಆ ಆನೆಗೆ ಈ ಕುಟುಂಬದ ಮೇಲೆ ಯಾಕಿಷ್ಟು ದ್ವೇಷ ಎಂಬುದು ಮಾತ್ರ ಗೊತ್ತಾಗಿಲ್ಲ.
ಶನಿಚರ ಬೋಟೆ ಎಂಬವರ ಕುಟುಂಬಕ್ಕೆ ಈ ಕಾಡಾನೆಯ ಕಾಟ 2012ರ ಡಿಸೆಂಬರ್ನಲ್ಲಿ ಆರಂಭವಾಗಿತ್ತು. ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಮಡಿ ಎಂಬ ಪಟ್ಟಣದಲ್ಲಿ ‘ಧುರ್ಬೆ’ ಹೆಸರಿನ ಈ ಮದಗಜ ಶನಿಚರ ಅವರ ಪೋಷಕರನ್ನು ತುಳಿದು ಕೊಂದಿತ್ತು. ಹೆತ್ತವರನ್ನು ಕಳೆದುಕೊಂಡ ಆಘಾತದಲ್ಲಿದ್ದ ಶನಿಚರ, ಆನೆಯ ಸಿಟ್ಟಿನಿಂದ ತಪ್ಪಿಸಿಕೊಳ್ಳಲು ತನ್ನ ಕುಟುಂಬದೊಂದಿಗೆ ಅಲ್ಲಿಂದ 9 ಮೈಲಿ ದೂರದಲ್ಲಿದ್ದ ರಪ್ತಿ ನದಿಯನ್ನು ದಾಟಿ ಜಗತ್ಪುರ ಎಂಬ ಪ್ರದೇಶದಲ್ಲಿ ನೆಲೆಸಿದ್ದರು. ಇಷ್ಟು ದೊಡ್ಡ ನದಿಯನ್ನು ದಾಟಿ ಆನೆ ಬರುವುದಿಲ್ಲ, ತಾವು ಸುರಕ್ಷಿತವಾಗಿದ್ದೇವೆ ಎಂದೇ ಈ ಕುಟುಂಬ ಇಷ್ಟು ವರ್ಷ ಭಾವಿಸಿತ್ತು.
ಮತ್ತೆ ಹುಡುಕಿಕೊಂಡು ಬಂದ ಯಮಸ್ವರೂಪಿ ಆನೆ
ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ಇತ್ತೀಚೆಗೆ ಜಗತ್ಪುರದಲ್ಲಿರುವ ಶನಿಚರ ಅವರ ಮನೆಗೆ ನುಗ್ಗಿದ ಅದೇ ಧುರ್ಬೆ ಆನೆ, ಅವರ 25 ವರ್ಷದ ಸೊಸೆ ಆಶಿಕಾ ಬೋಟೆ ಮತ್ತು ಕೇವಲ 4 ವರ್ಷದ ಮೊಮ್ಮಗ ಭರತ್ ಬೋಟೆಯನ್ನು ಅತ್ಯಂತ ಕ್ರೂರವಾಗಿ ತುಳಿದು ಕೊಂದಿದೆ. “ದೊಡ್ಡ ನದಿಯನ್ನು ದಾಟಿ ಬಂದರೆ ನಾವು ಬದುಕಿಕೊಳ್ಳಬಹುದು ಎಂದುಕೊಂಡಿದ್ದೆವು. ಆದರೆ ಇಷ್ಟು ವರ್ಷಗಳ ನಂತರವೂ ಅದೇ ಆನೆ ನಮ್ಮನ್ನು ಹುಡುಕಿಕೊಂಡು ಬಂದು ನನ್ನ ಸೊಸೆ ಮತ್ತು ಪುಟ್ಟ ಮೊಮ್ಮಗನನ್ನು ಕಸಿದುಕೊಂಡಿದೆ. ನಮಗೆ ಇನ್ನು ಓಡಿಹೋಗಲು ಎಲ್ಲೂ ಜಾಗವೇ ಉಳಿದಿಲ್ಲ” ಎಂದು ಶನಿಚರ ಬೋಟೆ ಕಣ್ಣೀರು ಹಾಕಿದ್ದಾರೆ.
25 ಜನರನ್ನು ಬಲಿ ಪಡೆದ ಆನೆಗೆ ವಿಕಿಪೀಡಿಯಾ ಪುಟ!
ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳ ಪ್ರಕಾರ, ಈ ಧುರ್ಬೆ ಆನೆ ನೇಪಾಳದ ಅತ್ಯಂತ ಅಪಾಯಕಾರಿ ಆನೆಯಾಗಿದ್ದು, 2010ರಿಂದ ಇದುವರೆಗೆ ಬರೋಬ್ಬರಿ 25 ಜನರನ್ನು ಕೊಂದಿರುವುದು ಅಧಿಕೃತವಾಗಿ ದೃಢಪಟ್ಟಿದೆ. ಇದರ ಕ್ರೌರ್ಯದ ಇತಿಹಾಸ ಎಷ್ಟಿದೆಯೆಂದರೆ, ಈ ಆನೆಯ ಹೆಸರಿನಲ್ಲಿ ಪ್ರತ್ಯೇಕ ವಿಕಿಪೀಡಿಯಾ ಪುಟವೇ ಸೃಷ್ಟಿಯಾಗಿದೆ. ವನ್ಯಜೀವಿ ಇಲಾಖೆಯು ಈ ಆನೆಯ ಚಲನವಲನದ ಮೇಲೆ ನಿಗಾ ಇಡಲು 2016ರಲ್ಲಿ ರೇಡಿಯೋ ಕಾಲರ್ ಅಳವಡಿಸಿತ್ತು. ಅದು ನಿಷ್ಕ್ರಿಯಗೊಂಡಾಗ 2020 ಹಾಗೂ 2023ರಲ್ಲಿ ಹೊಸ ಟ್ರ್ಯಾಕಿಂಗ್ ಕಾಲರ್ಗಳನ್ನು ಅಳವಡಿಸಲಾಗಿದ್ದರೂ ಸಹ, ಈ ಭೀಕರ ದಾಳಿಯನ್ನು ತಡೆಯಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ : ಹಲ್ಲು ಚಿಕಿತ್ಸೆ, MA ಪರೀಕ್ಷೆ ನೆಪ : ಶ್ರದ್ಧಾ ವಾಕರ್ ಕೊಲೆ ಕೇಸ್ ವಿಚಾರಣೆ ವಿಳಂಬಕ್ಕೆ ಅಫ್ತಾಬ್ ನಾನಾ ತಂತ್ರ!


















