ಕಲಬುರಗಿ : ಜಿಲ್ಲೆಯಲ್ಲಿ ಭಾರತೀಯ ನರ್ಸಿಂಗ್ ಕೌನ್ಸಿಲ್ (INC) ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ನಿಯಮಗಳನ್ನು ಉಲ್ಲಂಘಿಸಿ ಅಗತ್ಯ ಮೂಲಸೌಕರ್ಯ, ಬೋಧನಾ ಸಿಬ್ಬಂದಿ ಹಾಗೂ ಆಸ್ಪತ್ರೆ ಸೌಲಭ್ಯಗಳಿಲ್ಲದೆ ಕೆಲವು ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜುಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ (DME) ದೂರು ಸಲ್ಲಿಸಿದ್ದು, ಜಂಟಿ ತನಿಖೆ ನಡೆಸಿ ತಪ್ಪಿತಸ್ಥ ಸಂಸ್ಥೆಗಳ ಮಾನ್ಯತೆ ರದ್ದುಪಡಿಸುವಂತೆ ಹಾಗೂ ಸಂಬಂಧಪಟ್ಟ ಸಂಸ್ಥೆ, ಟ್ರಸ್ಟ್ಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಹಾಗೂ ಇಲಾಖಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನರ್ಸಿಂಗ್ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಸ್ವಂತ ಅಥವಾ ಮಾನ್ಯತೆ ಪಡೆದ ಸಂಯೋಜಿತ ಆಸ್ಪತ್ರೆ, ಅಗತ್ಯ ಸಂಖ್ಯೆಯ ಆಸ್ಪತ್ರೆ ಹಾಸಿಗೆಗಳು, ಸುಸಜ್ಜಿತ ಕಟ್ಟಡ, ತರಗತಿ ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್ ಹಾಗೂ ನಿಗದಿತ ಪ್ರಮಾಣದ ಅರ್ಹ ಬೋಧನಾ ಸಿಬ್ಬಂದಿಯನ್ನು ಹೊಂದಿರಬೇಕು. ಆದರೆ, ಕಲಬುರಗಿ ಜಿಲ್ಲೆಯ ಕೆಲವು ಸಂಸ್ಥೆಗಳು ಈ ನಿಯಮಗಳನ್ನು ಪಾಲಿಸದೆ ಕೇವಲ ವಾಣಿಜ್ಯ ಉದ್ದೇಶದಿಂದ ವಾಸದ ಮನೆಗಳು ಅಥವಾ ಹೆಸರಿಗಷ್ಟೇ ಇರುವ ಕಟ್ಟಡಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂಬ ಗಂಭೀರ ಆರೋಪಗಳಿವೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ಸಂಸ್ಥೆಗಳ ಪಟ್ಟಿ ಹೀಗಿದೆ:
- ABU Karnataka School of Nursing
- Annapurna School of Nursing
- Annapurna College of Nursing (B.Sc.)
- Annapurna Para Medical Institute (PMB-271)
- Prabhank School of Nursing
- Shashank School of Nursing
- B.B.C. Trust School of Nursing
- Vivek School of Nursing, Bidapura Colony
ಮೇಲಿನ ಕೆಲವು ಸಂಸ್ಥೆಗಳು ಒಂದೇ ಟ್ರಸ್ಟ್ ಅಥವಾ ಒಂದೇ ಕುಟುಂಬದ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯಿದ್ದು, ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಒಂದೇ ಕಟ್ಟಡದಲ್ಲಿ ಹಲವು ಕೋರ್ಸ್ಗಳನ್ನು ನಡೆಸಲಾಗುತ್ತಿದ್ದು, ಅಗತ್ಯ ಪ್ರಯೋಗಾಲಯ, ತರಗತಿ ಕೊಠಡಿಗಳು ಹಾಗೂ ಆಸ್ಪತ್ರೆ ತರಬೇತಿ ಸೌಲಭ್ಯಗಳ ಕೊರತೆ ಇದೆ ಎಂಬ ಆರೋಪಗಳಿವೆ.

ಕೆಲವು ಸಂಸ್ಥೆಗಳಲ್ಲಿ ಅಗತ್ಯ ಅರ್ಹ ಬೋಧನಾ ಸಿಬ್ಬಂದಿಯ ಕೊರತೆ, ನಿಯಮಿತ ತರಗತಿಗಳಿಲ್ಲದಿರುವುದು, ಕಡ್ಡಾಯ ಕ್ಲಿನಿಕಲ್ ಹಾಗೂ ಪ್ರಾಯೋಗಿಕ ತರಬೇತಿ ನೀಡದಿರುವುದು ಮತ್ತು ಆಸ್ಪತ್ರೆ ಸೌಲಭ್ಯಗಳ ಕೊರತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ವಿದ್ಯಾರ್ಥಿಗಳಿಂದ ಭಾರೀ ಶುಲ್ಕ ಪಡೆದು ಕೇವಲ ಪರೀಕ್ಷೆಗೆ ಹಾಜರುಪಡಿಸುವ ವ್ಯವಸ್ಥೆ ನಡೆಯುತ್ತಿದೆ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಂಘಟಿತ ರೀತಿಯಲ್ಲಿ ನಕಲು (Malpractice) ನಡೆಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಅಕ್ರಮ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.

ಇಂತಹ ಚಟುವಟಿಕೆಗಳು ನರ್ಸಿಂಗ್ ಶಿಕ್ಷಣದ ಗುಣಮಟ್ಟವನ್ನು ಕುಗ್ಗಿಸುವುದರ ಜೊತೆಗೆ ಸಾರ್ವಜನಿಕ ಆರೋಗ್ಯ ಮತ್ತು ರೋಗಿಗಳ ಸುರಕ್ಷತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಕನಿಷ್ಠ ಮೂಲಸೌಕರ್ಯಗಳಿಲ್ಲದ ಕಟ್ಟಡಗಳಿಗೆ ಹೇಗೆ ಮಾನ್ಯತೆ ನೀಡಲಾಗಿದೆ ಎಂಬುದರ ಬಗ್ಗೆಯೂ ತನಿಖೆ ಅಗತ್ಯವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಬಂಧಪಟ್ಟ ಪರಿಶೀಲನಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಅಥವಾ ವಾಸ್ತವಾಂಶಗಳನ್ನು ಕಡೆಗಣಿಸಿ ಅನುಮತಿ ನೀಡಿದ್ದರೆ, ಅಂತಹ ಅಧಿಕಾರಿಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ಆರೋಪಿತ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸಂಸ್ಥೆಗಳ ವಿರುದ್ಧ ಜಂಟಿ ತನಿಖೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಮಾನ್ಯತೆ ರದ್ದುಪಡಿಸುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಹಳ್ಳಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ 32 ಗುಂಟೆ ಭೂಮಿ ಒತ್ತುವರಿ ಆರೋಪ : Chairman Club ವಿರುದ್ಧ ‘ಲೋಕಾ’ಗೆ N.R ರಮೇಶ್ ದೂರು!



















