ಬೆಂಗಳೂರು : ದೇಶದ ಬಹುತೇಕ ಮನೆಗಳಲ್ಲಿ ಚಿನ್ನ, ಚಿನ್ನಾಭರಣಗಳು ಇದ್ದೇ ಇರುತ್ತವೆ. ಅಮ್ಮ ಕೊಡಿಸಿದ್ದು, ಪತಿ ಉಡುಗೊರೆ ಕೊಟ್ಟಿದ್ದು, ಮಗಳ ಮದುವೆಗಾಗಿ ಈಗಲೇ ಖರೀದಿಸಿದ್ದು ಸೇರಿ ಹಲವು ಕಾರಣಗಳಿಗಾಗಿ ಖರೀದಿಸಿದ ಚಿನ್ನ ಇದ್ದೇ ಇರುತ್ತದೆ. ಮನೆಯಲ್ಲಿ ಎಷ್ಟೇ ಚಿನ್ನವಿದ್ದರೂ ಅದು ಕಳ್ಳತನವಾಗುವ ಸಾಧ್ಯತೆ ಇರುತ್ತದೆ. ಬಹುತೇಕ ಬಂದಿಗೆ ಇದೇ ಭಯವೂ ಇರುತ್ತದೆ. ಆದರೆ, ಈ ಚಿನ್ನವನ್ನು ಬ್ಯಾಂಕ್ ಲಾಕರ್ ನಲ್ಲಿ ಇರಿಸಿದರೆ ನಾವೇ ಲಾಕರ್ ಶುಲ್ಕ ಕೊಡಬೇಕು. ಇಂತಹ ಪರಿಸ್ಥಿತಿ ಇರುವ ಮಧ್ಯೆಯೇ, ಕೇಂದ್ರ ಸರ್ಕಾರವು ಚಿನ್ನ ನಗದೀಕರಣ ಯೋಜನೆ (Gold Monetisation Scheme- GMS) ಎಂಬ ಯೋಜನೆ ಜಾರಿಗೆ ತರಲು ಮುಂದಾಗಿದೆ.
ಹೌದು, ಹೊಸ ಯೋಜನೆ ಅನ್ವಯ ದೇಶದ ನಾಗರಿಕರು ವಿಶ್ವಾಸಾರ್ಹ, ಕೇಂದ್ರ ಸರ್ಕಾರದ ಜತೆ ಕೈಜೋಡಿಸಿದ ಚಿನ್ನದ ವ್ಯಾಪಾರಿಗಳಲ್ಲಿ ತಮ್ಮ ಚಿನ್ನವನ್ನು ಸುರಕ್ಷಿತವಾಗಿ ಠೇವಣಿ ಮಾಡಬಹುದಾಗಿದೆ. ಇದಕ್ಕಾಗಿ ಚಿನ್ನದ ಮಳಿಗೆಗಳು ವಾರ್ಷಿಕ ಶೇ.2.25ರಿಂದ ಶೇ.2.5ರವರೆಗೆ ಬಡ್ಡಿ ನೀಡಲಿವೆ. ನಿಗದಿತ ಅವಧಿ ಮುಗಿದ ಬಳಿಕ ಠೇವಣಿ ಇರಿಸಿದ ಚಿನ್ನ ವಾಪಸ್ ಪಡೆಯಬಹುದು ಅಥವಾ ಅಂದಿನ ಚಿನ್ನದ ಮಾರುಕಟ್ಟೆಯ ಬೆಲೆಯನ್ನು ನಗದಾಗಿ ಪರಿವರ್ತನೆ ಮಾಡಿಕೊಳ್ಳಬಹುದು.
ಯೋಜನೆಯ ಉದ್ದೇಶವೇನು?
ಮನೆಯಲ್ಲಿ ಸುರಕ್ಷಿತವಾಗಿ ಬಿದ್ದಿರುವ ಚಿನ್ನವನ್ನು ಉತ್ಪಾದಕ ಉದ್ದೇಶಗಳಿಗಾಗಿ ಬಳಸುವುದು. ಸಾರ್ವಜನಿಕರು ತಮ್ಮ ಚಿನ್ನದ ಮೇಲೆ ನಿಯಮಿತ ಆದಾಯ (ಬಡ್ಡಿ) ಗಳಿಸಲು ಅವಕಾಶ ಮಾಡಿಕೊಡುವುದು. ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣವನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರವು ಚಿನ್ನದ ವ್ಯಾಪಾರಿಗಳೊಂದಿಗೆ ಸಹಭಾಗಿತ್ವ ಸಾಧಿಸಿ, ಸುಮಾರು 1 ಸಾವಿರ ಟನ್ ಚಿನ್ನ ಸಂಗ್ರಹಿಸುವ ಗುರಿ ಹೊಂದಿದೆ ಎಂದು ಹೇಳಲಾಗುತ್ತಿದೆ.
ಗ್ರಾಹಕರು ತಮಗೆ ಪರಿಚಯವಿರುವ ಅಥವಾ ತಮ್ಮ ಹತ್ತಿರದ ವಿಶ್ವಾಸಾರ್ಹ ಜ್ಯುವೆಲ್ಲರಿ ಶಾಪ್ ಗಳಿಗೆ ಹೋಗಿ ತಮ್ಮ ಚಿನ್ನವನ್ನು ಸುಲಭವಾಗಿ ಈ ಯೋಜನೆಯಡಿ ಠೇವಣಿ ಇಡಬಹುದು. ಭಾರತೀಯರ ಮನೆಗಳಲ್ಲಿ ಅಂದಾಜು 25,000 ರಿಂದ 27,000 ಟನ್ ಚಿನ್ನವಿದೆ ಎಂದು ಅಂದಾಜಿಸಲಾಗಿದೆ. ಜ್ಯುವೆಲ್ಲರ್ ಗಳನ್ನು ಸೇರಿಸಿಕೊಳ್ಳುವುದರಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಬ್ಯಾಂಕ್ ಗೆ ನೀಡಲು ಮುಂದೆ ಬರುತ್ತಾರೆ. ದೇಶದ ಒಳಗಿರುವ ಚಿನ್ನವೇ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದರೆ, ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಬಲ ನೀಡುತ್ತದೆ ಎಂದು ಹೇಳಲಾಗುತ್ತಿದೆ.
ಸಂಪೂರ್ಣ ತೆರಿಗೆ ವಿನಾಯಿತಿಯ ಲಾಭವೂ ಇದೆ. ಈ ಯೋಜನೆಯ ಮೂಲಕ ನೀವು ಗಳಿಸುವ ಬಡ್ಡಿಯ ಮೇಲೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಚಿನ್ನದ ಬೆಲೆ ಹೆಚ್ಚಾದರೆ ಸಿಗುವ ಲಾಭದ ಮೇಲೆಯೂ ಬಂಡವಾಳ ಲಾಭದ ತೆರಿಗೆ (Capital Gains Tax) ವಿನಾಯಿತಿ ಇರಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ‘ನಮಗೀಗ ಭಾರತದ ನೆರವು ಬೇಕು’ : ಪಾಕ್ ದೌರ್ಜನ್ಯದ ವಿರುದ್ಧ PoK ನಾಯಕನ ರೋಷಾವೇಷ, ಗಡಿ ತೆರೆಯಲು ಕರೆ!



















