ಪುಣೆ : ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಸೋಮವಾರ ಮುಂಜಾನೆ ಪುಣೆಯಲ್ಲಿ ಭೀಕರ ಗುಡ್ಡ ಕುಸಿತ ಘಟನೆ ಸಂಭವಿಸಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಟ್ಟದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಸುಮಾರು ಐದು ಮನೆಗಳು ಸಂಪೂರ್ಣವಾಗಿ ಮಣ್ಣಿನಡಿಯಲ್ಲಿ ಹೂತುಹೋಗಿವೆ. ದುರಂತದಲ್ಲಿ ಹಲವು ಕುಟುಂಬಗಳು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಾವಲ್ ತಾಲೂಕಿನ ಹಳ್ಳಿಯೊಂದರಲ್ಲಿ ಭಾರೀ ಮಳೆಗೆ ಮೂರು ಕಡೆ ಗುಡ್ಡ ಕುಸಿದಿದೆ ಎಂದು ಲೋನಾವಾಲಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಗಜಾನನ್ ತೋಂಪೆ ತಿಳಿಸಿದ್ದಾರೆ. ಘಟನೆಯಲ್ಲಿ ಒಂದು ಮನೆ ಮಣ್ಣಿನಡಿ ಹೂತುಹೋಗಿದ್ದು, ಆ ಸಮಯದಲ್ಲಿ ಮನೆಯಲ್ಲಿದ್ದ ಒಂದೇ ಕುಟುಂಬದ ಮೂವರು ಸದಸ್ಯರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ
ದುರಂತದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಮಾಹಿತಿ ಕಚೇರಿಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ ಸಹಾಯವನ್ನು ಕೋರಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪುಣೆಯ 5ನೇ ಬೆಟಾಲಿಯನ್ನ 30 ಸದಸ್ಯರ ವಿಶೇಷ ಎನ್ಡಿಆರ್ಎಫ್ ತಂಡವು ಪುಣೆಯ ಪಟಾನ್ ಗ್ರಾಮಕ್ಕೆ ಧಾವಿಸಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಇದರೊಂದಿಗೆ, ಮಾವಲ್ನ ಘೋರಾವಾಡಿ ರೈಲ್ವೆ ನಿಲ್ದಾಣದ ಬಳಿ ನೀರು ನುಗ್ಗಿ ಸಿಲುಕಿಕೊಂಡಿದ್ದ ಖಾಸಗಿ ಬಸ್ಸಿನ 37 ಪ್ರಯಾಣಿಕರನ್ನು ಎನ್ಡಿಆರ್ಎಫ್ ತಂಡ ರಕ್ಷಿಸಿದೆ.
ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತ
ಈ ಭೀಕರ ಗುಡ್ಡ ಕುಸಿತವು ಮುಂಬೈ ಮತ್ತು ಪುಣೆ ನಡುವಿನ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಖಂಡಾಲಾ ಎಕ್ಸಿಟ್ ಬಳಿ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯ ‘ಮಿಸ್ಸಿಂಗ್ ಲಿಂಕ್’ ವಿಭಾಗದಲ್ಲಿ ದೊಡ್ಡ ಪ್ರಮಾಣದ ಮಣ್ಣು ಕುಸಿದು ಬಿದ್ದ ಕಾರಣ ಮುಂಬೈ ಕಡೆಗೆ ಹೋಗುವ ರಸ್ತೆಯನ್ನು ಪೂರ್ಣವಾಗಿ ಮುಚ್ಚಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ರಸ್ತೆ ತೆರವು ಕಾರ್ಯ ಸುಗಮವಾಗಿ ನಡೆಯಲು ಹಳೆಯ ಪುಣೆ-ಮುಂಬೈ ಹೆದ್ದಾರಿ ಮತ್ತು ಯಶವಂತರಾವ್ ಚವಾಣ್ ಎಕ್ಸ್ಪ್ರೆಸ್ವೇ ಎರಡನ್ನೂ ಸದ್ಯಕ್ಕೆ ಬಂದ್ ಮಾಡಲಾಗಿದ್ದು, ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ.
ಮುಂಬೈನಲ್ಲಿ ಮಳೆಗೆ 8 ಸಾವು
ಮತ್ತೊಂದೆಡೆ, ರಾಜಧಾನಿ ಮುಂಬೈ ಮತ್ತು ಅದರ ಉಪನಗರಗಳಲ್ಲೂ ನಿರಂತರ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಈಗಾಗಲೇ ನಗರದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ಮುನ್ನೆಚ್ಚರಿಕೆ ನೀಡಿದೆ. ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ವಿವಿಧ ಮಳೆ ಸಂಬಂಧಿತ ಅವಘಡಗಳಲ್ಲಿ ಮುಂಬೈನಲ್ಲಿ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಮಂಖುರ್ದ್ ಪ್ರದೇಶದಲ್ಲಿ ಹಳೆಯ ಕಟ್ಟಡ ಕುಸಿದು ಆರು ಮಂದಿ ಸಾವನ್ನಪ್ಪಿದ್ದರೆ, ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
ಇದನ್ನ ಓದಿ : ‘ದೇಶವಿರೋಧಿ ಶಕ್ತಿಗಳಿಂದ ದುರುಪಯೋಗದ ಭೀತಿ’ : OTTಯಿಂದ ‘ಸತ್ಲುಜ್’ ಸಿನಿಮಾ ದಿಢೀರ್ ವಾಪಸ್!


















