ಗುವಾಹಟಿ : ತಾನು ಭಾರತದ ಪ್ರಜೆ ಎಂದು ಸಾಬೀತುಪಡಿಸಲು ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬರೋಬ್ಬರಿ 16 ಪ್ರಮುಖ ದಾಖಲೆಗಳನ್ನೂ ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದೆ. ಅಸ್ಸಾಂ ನಿವಾಸಿಯೊಬ್ಬರನ್ನು ‘ವಿದೇಶಿಗ’ ಎಂದು ಘೋಷಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಅರ್ಜಿದಾರರು ಸಲ್ಲಿಸಿದ ಯಾವುದೇ ದಾಖಲೆಗಳು ಅವರು ಭಾರತೀಯ ಪ್ರಜೆ ಎಂಬುದನ್ನು ದೃಢೀಕರಿಸುತ್ತಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ನ್ಯಾ. ಕಲ್ಯಾಣ್ ರೈ ಸುರಾನಾ ಮತ್ತು ನ್ಯಾ. ಶಮೀಮಾ ಜಹಾನ್ ಅವರನ್ನೊಳಗೊಂಡ ನ್ಯಾಯಪೀಠವು ಜೂನ್ 30 ರಂದು ಈ ಆದೇಶವನ್ನು ಪ್ರಕಟಿಸಿದೆ. ವಿದೇಶಿಯರ ಕಾಯ್ದೆ 1964ರ ಸೆಕ್ಷನ್ 9 ರ ಅಡಿಯಲ್ಲಿ, ಒಬ್ಬ ವ್ಯಕ್ತಿಯ ಪೌರತ್ವದ ಕುರಿತು ಪ್ರಶ್ನೆ ಎದ್ದಾಗ, ತಾನು ವಿದೇಶಿಗನಲ್ಲ ಬದಲಿಗೆ ಭಾರತೀಯ ಪ್ರಜೆ ಎಂಬುದನ್ನು ಸಾಬೀತುಪಡಿಸುವ ಸಂಪೂರ್ಣ ಜವಾಬ್ದಾರಿ ಆಯಾ ವ್ಯಕ್ತಿಯ ಮೇಲೆಯೇ ಇರುತ್ತದೆ. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರು ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿದ್ದ ಹಕ್
ಈ ಪ್ರಕರಣವು ಗುವಾಹಟಿಯ ವಿದೇಶಿಗರ ನ್ಯಾಯಾಧಿಕರಣ 2019ರ ಫೆಬ್ರವರಿ 28 ರಂದು ನೀಡಿದ್ದ ಆದೇಶಕ್ಕೆ ಸಂಬಂಧಿಸಿದ್ದಾಗಿದೆ. ನ್ಯಾಯಾಧಿಕರಣವು ತನ್ನನ್ನು ವಿದೇಶಿಗ ಎಂದು ಘೋಷಿಸಿರುವುದನ್ನು ಪ್ರಶ್ನಿಸಿ ಅಮೀನುಲ್ ಹಕ್ ಎಂಬವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ತಮ್ಮ ಕುಟುಂಬವು ತಲೆಮಾರುಗಳಿಂದ ಅಸ್ಸಾಂನಲ್ಲಿಯೇ ವಾಸಿಸುತ್ತಿದೆ ಎಂದು ವಾದಿಸಿದ್ದ ಹಕ್, ಅದಕ್ಕೆ ಪೂರಕವಾಗಿ ದಾಖಲೆಗಳ ಸುರಿಮಳೆಯನ್ನೇ ನ್ಯಾಯಾಲಯದ ಮುಂದೆ ಇಟ್ಟಿದ್ದರು.
ಅರ್ಜಿದಾರರು ತಮ್ಮ ಅಜ್ಜ ಮತ್ತು ತಂದೆಯ ಹೆಸರು ಒಳಗೊಂಡಿರುವ 1951ರ ರಾಷ್ಟ್ರೀಯ ಪೌರತ್ವ ನೋಂದಣಿ (NRC) ನಕಲು ಪ್ರತಿಗಳು, 1966 ರಿಂದ 2017 ರವರೆಗಿನ ವಿವಿಧ ವರ್ಷಗಳ ಮತದಾರರ ಪಟ್ಟಿಗಳು, 1973ರ ಭೂಮಿ ಖರೀದಿ ಪತ್ರಗಳು, ಪ್ಯಾನ್ ಕಾರ್ಡ್, ವೋಟರ್ ಐಡಿ ಮತ್ತು ಶಾಲಾ ವರ್ಗಾವಣೆ ಪ್ರಮಾಣಪತ್ರ ಸೇರಿದಂತೆ ಒಟ್ಟು 16 ದಾಖಲೆಗಳನ್ನು ನ್ಯಾಯಾಲಯಕ್ಕೆ ಪ್ರದರ್ಶಿಸಿದ್ದರು.
ಲಿಂಕ್ ದಾಖಲೆಗಳ ಕೊರತೆ ಮತ್ತು ಹೆಸರಿನ ಗೊಂದಲ
ವಿಚಾರಣೆಯ ವೇಳೆ ಅರ್ಜಿದಾರರ ತಂದೆ ನ್ಯಾಯಾಲಯಕ್ಕೆ ಹಾಜರಾಗಿ, ಅಮೀನುಲ್ ಹಕ್ ತನ್ನದೇ ಮಗ ಎಂದು ಮೌಖಿಕ ಸಾಕ್ಷಿ ನುಡಿದಿದ್ದರು. ಆದರೆ ಸೂಕ್ತ ಲಿಖಿತ ದಾಖಲೆಗಳ ಬೆಂಬಲವಿಲ್ಲದ ಕೇವಲ ಮೌಖಿಕ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ದಾಖಲೆಗಳ ಸೂಕ್ಷ್ಮ ಪರಿಶೀಲನೆಯ ಸಂದರ್ಭದಲ್ಲಿ ಅರ್ಜಿದಾರರ ತಂದೆ ಮತ್ತು ಅಜ್ಜನ ಹೆಸರುಗಳ ಸ್ಪೆಲ್ಲಿಂಗ್ನಲ್ಲಿ ಗಂಭೀರ ವ್ಯತ್ಯಾಸಗಳಿರುವುದು ಪತ್ತೆಯಾಗಿದೆ.
ತಂದೆಯ ಹೆಸರನ್ನು ಮೊಹಿರುದ್ದೀನ್ ಶೇಖ್, ಮಹ್ರುದ್ದೀನ್ ಶೇಖ್, ಮೊಹಿರುದ್ದೀನ್ ಸೇರಿದಂತೆ ನಾಲ್ಕು ಬೇರೆ ಬೇರೆ ರೀತಿಯಲ್ಲಿ ನಮೂದಿಸಲಾಗಿತ್ತು.
ಇದರೊಂದಿಗೆ, ಮತದಾರರ ಪಟ್ಟಿಯಲ್ಲಿ ಹೆಸರುಗಳು ಹೊಂದಾಣಿಕೆಯಾಗದಿರುವುದಕ್ಕೆ ಕುಟುಂಬವು ದೋಬಾಕುರಾ, ಘುಗುದೋಬಾ ಮತ್ತು ಹಶ್ದೋಬಾ ಎಂಬ ಮೂರು ಹಳ್ಳಿಗಳ ನಡುವೆ ಸ್ಥಳಾಂತರಗೊಂಡಿದ್ದೇ ಕಾರಣ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದರೆ ಈ ಹಳ್ಳಿಗಳ ನಡುವಿನ ಸ್ಥಳಾಂತರಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಕಾರಣ, ಕೇವಲ ಮತದಾರರ ಪಟ್ಟಿಯ ದೋಷಗಳನ್ನು ಮುಚ್ಚಿಹಾಕಲು ಈ ವಾದವನ್ನು ಸೃಷ್ಟಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಾಕ್ಷ್ಯ ನುಡಿಯದ ಶಾಲಾ ಮುಖ್ಯಸ್ಥರು
ಅರ್ಜಿದಾರರು ತಾವು ಓದಿದ್ದ ಶಾಲೆಯಿಂದ 2017ರಲ್ಲಿ ಪಡೆದಿದ್ದ ಪ್ರಮಾಣಪತ್ರವನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಲ್ಲಿ ವಿದ್ಯಾರ್ಥಿಯು 1999 ರಲ್ಲೇ ಶಾಲೆ ಬಿಟ್ಟಿರುವುದಾಗಿ ನಮೂದಿಸಲಾಗಿತ್ತು. ಆದರೆ ಈ ಪ್ರಮಾಣಪತ್ರವನ್ನು ನೀಡಿದ ಹಶ್ದೋಬಾ ಅಂಚಲಿಕ್ ಹೈಸ್ಕೂಲ್ನ ಮುಖ್ಯೋಪಾಧ್ಯಾಯರು ನ್ಯಾಯಾಲಯಕ್ಕೆ ಬಂದು ಪ್ರಮಾಣಪತ್ರದ ಸತ್ಯಾಸತ್ಯತೆಯನ್ನು ದೃಢೀಕರಿಸುವ ಯಾವುದೇ ಸಾಕ್ಷ್ಯವನ್ನು ನೀಡಿರಲಿಲ್ಲ. ಈ ಎಲ್ಲಾ ಗೊಂದಲಗಳು ಮತ್ತು ದಾಖಲೆಗಳ ನಡುವಿನ ಲಿಂಕ್ ಕೊರತೆಯಿಂದಾಗಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ : ವಿಜಯನಗರದಲ್ಲಿ ಪತಿಯಿಂದಲೇ ಪತ್ನಿಯ ಭೀಕರ ಹತ್ಯೆ!



















