ಬೆಂಗಳೂರು : ನಗರದ ಬ್ರೂಕ್ಫೀಲ್ಡ್ನಲ್ಲಿರುವ ಸೊಸೈಟಿ ಜನರಲ್ ಬೇಬಿ ಡೇ ಕೇರ್ ಸೆಂಟರ್ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಎಎಲ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ :
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯ ಆವರಣದಲ್ಲಿದ್ದ ಡೇ ಕೇರ್ ಸೆಂಟರ್ನಲ್ಲಿ ಎರಡು ವರ್ಷದ ಪುಟ್ಟ ಮಕ್ಕಳ ಮೇಲೆ ನಡೆದಿರುವ ಕ್ರೌರ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಳುವ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗೆ ಕೂರಿಸಿ ವಾಟರ್ ಜೆಟ್ ಸ್ಪ್ರೇ ಮಾಡುವುದು ಹಾಗೂ ಬಾತ್ರೂಮ್ನಲ್ಲಿ ಕೂಡಿಹಾಕಿ ವಿಕೃತ ಆನಂದ ಪಡುವಂತಹ ಅಮಾನವೀಯ ದೌರ್ಜನ್ಯ ಇಲ್ಲಿ ದೀರ್ಘಕಾಲದಿಂದ ನಡೆಯುತ್ತಿತ್ತು.
ಈ ಬಗ್ಗೆ ಈ ಹಿಂದೆ ಧ್ವನಿ ಎತ್ತಿದ್ದ ಸಿಬ್ಬಂದಿಯನ್ನೇ ಕೆಲಸದಿಂದ ವಜಾಗೊಳಿಸಿ ಸತ್ಯ ಮುಚ್ಚಿಹಾಕಲು ಯತ್ನಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತನಿಖೆಯಿಂದ ಬಯಲಾಗಿದೆ. ಸದ್ಯ ಮಂಜುಳ, ವಿಜಯಲಕ್ಷ್ಮೀ, ಭವಾನಿ, ಸಿಂಧು, ಬಿಂದು ಸೇರಿ ಐದು ಮಂದಿ ಕೇರ್ಟೇಕರ್ಗಳ ವಿರುದ್ಧ ಕೇಸ್ ದಾಖಲಾಗಿದ್ದು, ಸೆಂಟರ್ ಅನ್ನು ಮುಚ್ಚಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಕುರಿತು ಸಿಎಂಗೆ ಪತ್ರ ಬರೆದು ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಈ ಅಮಾನವೀಯ ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವರು, ಡೇ ಕೇರ್ ಸೆಂಟರ್ಗಳ ನಿರ್ವಹಣೆ ಹಾಗೂ ಸುರಕ್ಷತೆಗೆ ಕಟ್ಟುನಿಟ್ಟಾದ ನಿಯಮ ಮತ್ತು ಮಾರ್ಗಸೂಚಿಗಳಿವೆ. ಆದರೆ ಈ ಸೆಂಟರ್ನಲ್ಲಿ ಅದನ್ನು ಪಾಲಿಸಿಲ್ಲ. ಇಂತಹ ಘಟನೆಗಳು ಕೇವಲ ಆಯಾ ಕಂಪನಿಯ ಶ್ರೇಯಸ್ಸಿಗೆ ಮಾತ್ರವಲ್ಲ, ಇಡೀ ‘ಬ್ರ್ಯಾಂಡ್ ಬೆಂಗಳೂರು’ ಹೆಸರಿಗೂ ಧಕ್ಕೆ ತರುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಪೊಲೀಸರ ಕಣ್ತಪ್ಪಿಸಿ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!



















