ಭುವನೇಶ್ವರ : ಒನ್-ಸೈಡೆಡ್ ಲವ್ (ಏಕಪಕ್ಷೀಯ ಪ್ರೀತಿ) ಮತ್ತು ಹುಚ್ಚು ಹಠದಿಂದಾಗಿ ಯುವತಿಯೊಬ್ಬಳು ಇದೀಗ ಸಾವು-ಬದುಕಿನ ನಡುವೆ ಹೋರಾಡಬೇಕಾದ ಸ್ಥಿತಿ ಎದುರಾಗಿದೆ. ಒಡಿಶಾದ ಸುಂದರಗಢ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನ್ನ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದಳು ಎಂಬ ದ್ವೇಷದಿಂದ ದುಷ್ಕರ್ಮಿಯೊಬ್ಬ ಯುವತಿ ಮಲಗಿದ್ದ ಕೋಣೆಗೆ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆಯಲ್ಲಿ 26 ವರ್ಷದ ಯುವತಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯರಾತ್ರಿ ನಡೆದ ಕ್ರೂರ ಕೃತ್ಯ
ಸುಂದರಗಢ್ ಜಿಲ್ಲೆಯ ಬಿಸ್ರಾ ಬ್ಲಾಕ್ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಶುಕ್ರವಾರ ತಡರಾತ್ರಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಸಂತ್ರಸ್ತ ಯುವತಿ ತನ್ನ ಕೋಣೆಯಲ್ಲಿ ಗಾಢ ನಿದ್ರೆಯಲ್ಲಿದ್ದಾಗ ಸಂಚು ರೂಪಿಸಿ ಬಂದಿದ್ದ ಆರೋಪಿ ರಜತ್ ಕಿರೋ ಎಂಬಾತ, ಕಿಟಕಿಯ ಮೂಲಕ ಕೋಣೆಯೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಜ್ವಾಲೆಗೆ ಸಿಲುಕಿದ ಯುವತಿ ಜೋರಾಗಿ ಕಿರುಚಾಡಲು ತೊಡಗಿದಾಗ ಎಚ್ಚರಗೊಂಡ ಕುಟುಂಬಸ್ಥರು ಮತ್ತು ನೆರೆಹೊರೆಯವರು ತಕ್ಷಣ ಸ್ಥಳಕ್ಕೆ ಧಾವಿಸಿ, ಆಕೆಯನ್ನು ಉರಿಯುತ್ತಿದ್ದ ಕೋಣೆಯಿಂದ ರಕ್ಷಿಸಿದ್ದಾರೆ. ತಕ್ಷಣವೇ ಆಕೆಯನ್ನು ರೂರ್ಕೆಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿಯ ಸ್ಥಿತಿ ಗಂಭೀರ
ಆಸ್ಪತ್ರೆಯ ಮೂಲಗಳ ಪ್ರಕಾರ, ಬೆಂಕಿಯ ತೀವ್ರತೆಗೆ ಯುವತಿಯ ದೇಹದ ಶೇ.40ರಷ್ಟು ಭಾಗ ಸುಟ್ಟುಹೋಗಿದ್ದು, ಆಕೆಯ ಪರಿಸ್ಥಿತಿ ಇನ್ನು ಕೂಡ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯುವತಿಯ ತಂದೆ ಜೇನಾ ಟೊಪ್ಪೊ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಬೆಂಕಿ ಕಾಣಿಸಿಕೊಳ್ಳುವ ಕೆಲವೇ ಕ್ಷಣಗಳ ಮುನ್ನ ತನ್ನ ತಮ್ಮನ ಪತ್ನಿ ಆರೋಪಿ ರಜತ್ ಕಿರೋ ಕಿಟಕಿಯ ಬಳಿ ನಿಂತಿರುವುದನ್ನು ನೋಡಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ, ಮದುವೆ ಪ್ರಸ್ತಾಪ ನಿರಾಕರಿಸಿದಾಗಿನಿಂದಲೂ ಆರೋಪಿ ತನ್ನ ಮಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ವೈಜ್ಞಾನಿಕ ತನಿಖಾ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಮುಖ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಯುವತಿಯ ಮೇಲಿನ ಅತಿಯಾದ ಗೀಳು ಮತ್ತು ಆಕೆ ಪ್ರಸ್ತಾಪ ತಿರಸ್ಕರಿಸಿದ ಸಿಟ್ಟೇ ಈ ಕೃತ್ಯಕ್ಕೆ ಪ್ರೇರಣೆ ಎಂಬುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಘಟನೆಯ ಹಿಂದಿನ ಸಂಪೂರ್ಣ ಸತ್ಯಾಸತ್ಯತೆಗಳನ್ನು ಹೊರತರಲು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ತನಿಖಾಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಗೂಗಲ್ನಲ್ಲಿ ಹತ್ಯೆ ಯೋಜನೆ ಸರ್ಚ್ ಮಾಡಿದ್ದ ಸಿಯಾ-ಚೇತನ್ : ಸಿಕ್ಕಿಬಿದ್ರೆ ನೀಡಬೇಕಾದ ಹೇಳಿಕೆಗಳ ಬಗ್ಗೆಯೂ ರಿಹರ್ಸಲ್!



















