ಪುಣೆ : ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಲ್ಲಿ ತನ್ನ ಭಾವಿ ಪತಿ ಕೇತನ್ ಅಗರ್ವಾಲ್ನನ್ನು ಪ್ರೇಮಿ ಚೇತನ್ ಚೌಧರಿ ಜೊತೆಗೂಡಿ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣದ ಆರೋಪಿ ಸಿಯಾ ಗೋಯಲ್, ಪೊಲೀಸ್ ತನಿಖೆಯ ವೇಳೆ ಹಲವು ಮಹತ್ವದ ಹೇಳಿಕೆ ನೀಡಿದ್ದಾಳೆ. ತನಗೆ ಈ ಮದುವೆ ಇಷ್ಟವಿರಲಿಲ್ಲ ಮತ್ತು ಈ ವಿಷಯವನ್ನು ಕೇತನ್ ಬಳಿ ಹೇಳಿಕೊಂಡಿದ್ದಾಗಿ ಆಕೆ ತಿಳಿಸಿದ್ದಾಳೆ. ಆದರೆ, ತನ್ನ ಕುಟುಂಬವು ಅತ್ಯಂತ ಶ್ರೀಮಂತ ಹಾಗೂ ಪ್ರಭಾವಶಾಲಿಯಾಗಿದ್ದು, ನೀನು ಎಷ್ಟೇ ಪ್ರಯತ್ನಿಸಿದರೂ ಈ ಮದುವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇತನ್ ತನಗೆ ಎಚ್ಚರಿಕೆ ನೀಡಿದ್ದಾಗಿ ಸಿಯಾ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. ಆದಾಗ್ಯೂ, ಈಕೆಯ ಹೇಳಿಕೆಗಳು ಸದ್ಯಕ್ಕೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿವೆ.

ಕೇತನ್ ಮತ್ತು ಸಿಯಾ ಅವರ ನಿಶ್ಚಿತಾರ್ಥ ಕಳೆದ ಫೆಬ್ರವರಿ ತಿಂಗಳಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಮುಂಬರುವ ನವೆಂಬರ್ನಲ್ಲಿ ಇವರಿಬ್ಬರ ವಿವಾಹ ಮಹೋತ್ಸವವನ್ನು ಜೈಪುರದ ಪ್ರಸಿದ್ಧ ಅರಮನೆಯೊಂದರಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಇಷ್ಟು ಮಾತ್ರವಲ್ಲದೆ, ದೇಶದ ವಿವಿಧೆಡೆಯಿಂದ ಬರುವ ಅತಿಥಿಗಳಿಗಾಗಿ ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇಷ್ಟೆಲ್ಲಾ ಸಿದ್ಧತೆಗಳು ನಡೆಯುತ್ತಿದ್ದ ಬೆನ್ನಲ್ಲೇ, ಕಳೆದ 2025ರ ನವೆಂಬರ್ನಿಂದಲೇ ಸಿಯಾ ಮತ್ತು ಚೇತನ್ ನಡುವೆ ಪ್ರೇಮಾಂಕುರವಾಗಿತ್ತು. ಕಳೆದ ಏಳು ತಿಂಗಳಲ್ಲಿ ಇವರಿಬ್ಬರು ಸುಮಾರು 2004 ಬಾರಿ ಫೋನ್ನಲ್ಲಿ ಮಾತನಾಡಿ, ಒಟ್ಟು 238 ಗಂಟೆಗಳ ಕಾಲ ಸಂಭಾಷಣೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೊದಲ ಪ್ರಯತ್ನ ವಿಫಲ, ಎರಡನೇ ಬಾರಿ ಕಂದಕಕ್ಕೆ ತಳ್ಳಿದರು!
ಕೇತನ್ನನ್ನು ಕೊಲೆ ಮಾಡಲು ಇವರಿಬ್ಬರೂ ಮೊದಲೇ ಸ್ಕೆಚ್ ಹಾಕಿದ್ದರು. ಅದರಂತೆ ಜೂನ್ 14ರಂದು ಸಿಯಾ, ಕೇತನ್ನನ್ನು ಲೋಹಗಢ ಕೋಟೆಗೆ ಕರೆದೊಯ್ದು ಅಲ್ಲಿಂದ ಕೆಳಗೆ ತಳ್ಳಿದ್ದಳು. ಆದರೆ, ಆತ ಅದೃಷ್ಟವಶಾತ್ ಬಂಡೆಯ ಮೇಲಿದ್ದ ಪೊದೆಯೊಂದನ್ನು ಹಿಡಿದು ಆತ ಬದುಕುಳಿದಿದ್ದ. ಆ ಸಮಯದಲ್ಲಿ ತನ್ನ ಕೃತ್ಯವನ್ನು ಮುಚ್ಚಿಹಾಕಲು ಸಿಯಾ, ಹಾವು, ಹಾವು ಎಂದು ಜೋರಾಗಿ ಕಿರುಚಾಡಿ ನಾಟಕವಾಡಿ, ಕೇತನ್ನನ್ನು ಅಪ್ಪಿಕೊಂಡು ವಿಷಯವನ್ನು ಮರೆಮಾಚಿದ್ದಳು. ಬಳಿಕ ಜೂನ್ 21ರಂದು ಮತ್ತೊಮ್ಮೆ ಅದೇ ಕೋಟೆಗೆ ಕೇತನ್ನನ್ನು ನಂಬಿಸಿ ಕರೆದೊಯ್ದಿದ್ದಳು. ಈ ಬಾರಿ ತನ್ನ ಪ್ರೇಮಿ ಚೇತನ್ನನ್ನೂ ಅಲ್ಲಿಗೆ ಕರೆಸಿಕೊಂಡಿದ್ದ ಸಿಯಾ, ಇಬ್ಬರೂ ಸೇರಿ ಕೇತನ್ನನ್ನು ಹಿಂದಿನಿಂದ ಪ್ರಪಾತಕ್ಕೆ ತಳ್ಳಿ ಕೃತ್ಯ ಎಸಗಿದ್ದಾರೆ. ಒಂದು ವೇಳೆ ಈ ಯೋಜನೆಯೂ ವಿಫಲವಾದರೆ ‘ಪ್ಲಾನ್ ಸಿ’ ಎಂಬ ಮತ್ತೊಂದು ಯೋಜನೆಯನ್ನೂ ಈ ಜೋಡಿ ಸಿದ್ಧಪಡಿಸಿತ್ತು ಎಂದು ತಿಳಿದುಬಂದಿದೆ.
ಪ್ರೇಮಿಗಳ ನಡುವೆ ಬ್ಲೇಮ್ ಗೇಮ್!
ಆರಂಭದಲ್ಲಿ ತೀವ್ರ ಗಾಳಿ ಬೀಸುತ್ತಿದ್ದರಿಂದ ಫೋಟೋ ತೆಗೆಯುವಾಗ ಕೇತನ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ಲೋನಾವಾಲಾ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಭಾವಿ ಪತಿ ಮೃತಪಟ್ಟಿದ್ದರೂ ಸಿಯಾಳ ಹಾವಭಾವದಲ್ಲಿ ಯಾವುದೇ ರೀತಿಯ ದುಃಖದ ಲಕ್ಷಣಗಳು ಕಾಣಿಸದಿದ್ದಾಗ ಪೊಲೀಸರಿಗೆ ಅನುಮಾನ ಮೂಡಿತ್ತು. ತೀವ್ರ ವಿಚಾರಣೆ ನಡೆಸಿದಾಗ ಇಬ್ಬರ ಪ್ರೇಮ ಪುರಾಣ ಮತ್ತು ಕೊಲೆಯ ರಹಸ್ಯ ಬಯಲಾಗಿದೆ. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಈಗ ಇಬ್ಬರೂ ಕೊಲೆಯ ಮಾಸ್ಟರ್ಮೈಂಡ್ ಯಾರು ಎಂಬ ವಿಷಯದಲ್ಲಿ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ. ತಾನು ಕೇವಲ ಓಡಿಹೋಗಿ ಮದುವೆಯಾಗಲು ಬಯಸಿದ್ದೆ, ಕೊಲೆ ಮಾಡಲು ಸಿಯಾಳೇ ಒತ್ತಾಯಿಸಿದಳು ಎಂದು ಚೇತನ್ ಹೇಳುತ್ತಿದ್ದರೆ, ಕೊಲೆಯ ಯೋಜನೆ ಚೇತನ್ನದ್ದೇ ಆಗಿತ್ತು ಎಂದು ಸಿಯಾ ಪ್ರತ್ಯಾರೋಪ ಮಾಡುತ್ತಿದ್ದಾಳೆ.
ಇದನ್ನೂ ಓದಿ : ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂ. ಲೂಟಿ : ಚಾಲಕ ಸೇರಿ 8 ಮಂದಿ ಅರೆಸ್ಟ್!



















