ನವದೆಹಲಿ : ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಯುಜಿ (NEET-UG 2026) ಮರುಪರೀಕ್ಷೆಗೆ ಮುನ್ನ ಸುಳ್ಳು ಸುದ್ದಿ ಹಬ್ಬುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಮಂಗಳವಾರವಷ್ಟೇ ಟೆಲಿಗ್ರಾಂ ಆ್ಯಪ್ಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿತ್ತು. ಈಗ ಅದನ್ನು ಪ್ರಶ್ನಿಸಿ ಪ್ರಖ್ಯಾತ ಮೆಸೇಜಿಂಗ್ ಪ್ಲಾಟ್ಫಾರ್ಮ್ ಟೆಲಿಗ್ರಾಮ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಜೂನ್ 21 ರಂದು ನಡೆಯಲಿರುವ ಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೇರಿರುವ ಈ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ಸಮ್ಮತಿಸಿದೆ.
ಪರೀಕ್ಷಾ ಅಕ್ರಮ ತಡೆಯಲು ಸರ್ಕಾರದ ‘ಬ್ರಹ್ಮಾಸ್ತ್ರ’
ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಿ ಜೂನ್ 21 ಕ್ಕೆ ಮರುಪರೀಕ್ಷೆ ನಿಗದಿಪಡಿಸಲಾಗಿದೆ. ಈ ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ, ನಕಲಿ ಸಂದೇಶಗಳು ಮತ್ತು ವಂಚನೆ ಜಾಲಗಳಿಗೆ ಬ್ರೇಕ್ ಹಾಕಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸು ಮಾಡಿತ್ತು. ಇದರ ಆಧಾರದ ಮೇಲೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69A ಅಡಿಯಲ್ಲಿ ಜೂನ್ 22 ರವರೆಗೆ ಟೆಲಿಗ್ರಾಮ್ ಆಪ್ ಅನ್ನು ಭಾರತದಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ನಕಲಿ ‘ಪೇಪರ್ ಲೀಕ್’ ಮಾಫಿಯಾಗೆ ಸಾಕ್ಷಿಯಾದ ಟೆಲಿಗ್ರಾಮ್
ಎನ್ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಅವರ ಪ್ರಕಾರ, ಸದ್ಯಕ್ಕೆ ಯಾವುದೇ ನೈಜ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಆದರೆ ಟೆಲಿಗ್ರಾಮ್ನಲ್ಲಿ “ಪೇಪರ್ ಲೀಕ್ಡ್ ನೀಟ್”, “ಪ್ರೈವೇಟ್ ಮಾಫಿಯಾ” ನಂತಹ ನಕಲಿ ಗ್ರೂಪ್ಗಳನ್ನು ಸೃಷ್ಟಿಸಿ, ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳವರೆಗೆ ಹಣ ವಸೂಲಿ ಮಾಡಿ ವಂಚಿಸುತ್ತಿರುವ ಜಾಲ ಸಕ್ರಿಯವಾಗಿದೆ. ಈ ಹಿಂದೆ ಸೈಬರ್ ಕ್ರೈಮ್ ವಿಭಾಗದ ಮೂಲಕ ಇಂತಹ ನೂರಾರು ಚಾನೆಲ್ಗಳನ್ನು ಬ್ಲಾಕ್ ಮಾಡಿದ್ದರೂ, ಪ್ಲಾಟ್ಫಾರ್ಮ್ ಮಟ್ಟದಲ್ಲಿ ಸೂಕ್ತ ಸ್ಪಂದನೆ ಸಿಗದ ಕಾರಣ ಕೊನೆಯ ಅಸ್ತ್ರವಾಗಿ ಇಡೀ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕಾಯಿತು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯಕ್ಕೂ ಜೂನ್ 30 ರವರೆಗೆ ಬ್ರೇಕ್!
ಕೇವಲ ಆ್ಯಪ್ ನಿಷೇಧ ಮಾತ್ರವಲ್ಲದೆ, ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳನ್ನು ಎಡಿಟ್ ಮಾಡುವ ಟೆಲಿಗ್ರಾಮ್ನ ವಿಶೇಷ ವೈಶಿಷ್ಟ್ಯವನ್ನು (ಫೀಚರ್) ಜೂನ್ 30ರವರೆಗೆ ಭಾರತದಲ್ಲಿ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಪರೀಕ್ಷೆ ಮುಗಿದ ನಂತರ ವಂಚಕರು ಹಳೆಯ ಪೋಸ್ಟ್ಗಳನ್ನು ಎಡಿಟ್ ಮಾಡಿ, ಅದಕ್ಕೆ ಅಸಲಿ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಲಗತ್ತಿಸಿ, ಪರೀಕ್ಷೆಗೆ ಮುನ್ನವೇ ಪೇಪರ್ ಲೀಕ್ ಆಗಿತ್ತು ಎಂದು ಸುಳ್ಳು ಸ್ಕ್ರೀನ್ಶಾಟ್ಗಳನ್ನು ಹರಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ತಾಂತ್ರಿಕ ಕುಶಲತೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರದ ನಿರ್ಧಾರಕ್ಕೆ ಸಿಇಒ ಪಾವೆಲ್ ಡುರೊವ್ ತೀವ್ರ ಆಕ್ಷೇಪ
ಕೇಂದ್ರ ಸರ್ಕಾರದ ಈ ತೀವ್ರ ನಡೆಗೆ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರ ಅಸಮಂಜಸ ಕ್ರಮವಾಗಿದ್ದು, ಕೆಲವು ವಂಚಕರನ್ನು ಶಿಕ್ಷಿಸುವ ಬದಲು ಭಾರತದಲ್ಲಿರುವ 15 ಕೋಟಿಗೂ ಹೆಚ್ಚು ಸಾಮಾನ್ಯ ಬಳಕೆದಾರರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಅವರು ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ. ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಕೂಡ ಸರ್ಕಾರದ ಈ ಕ್ರಮವನ್ನು ವಿರೋಧಿಸಿದ್ದು, ಪರೀಕ್ಷಾ ಅಕ್ರಮ ತಡೆಯಲು ಇಡೀ ಪ್ಲಾಟ್ಫಾರ್ಮ್ ಅನ್ನೇ ಬ್ಲಾಕ್ ಮಾಡುವುದು ಸರಿಯಾದ ಪರಿಹಾರವಲ್ಲ ಎಂದು ಹೇಳಿದೆ. ಸದ್ಯ ಜೂನ್ 21ರ ಪರೀಕ್ಷೆ ನಿಗದಿಯಂತೆ ನಡೆಯಲಿದ್ದು, ವಿದ್ಯಾರ್ಥಿಗಳು ಇಂತಹ ವಂಚಕರ ಜಾಲಕ್ಕೆ ಬೀಳದೆ ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಎನ್ಟಿಎ ಮನವಿ ಮಾಡಿದೆ.
ಇದನ್ನೂ ಓದಿ : “ನಾವೇ ಇನ್ಸ್ಟಾಗ್ರಾಮ್ನ ಅತ್ಯಂತ ಫೇಮಸ್ ಜೋಡಿ” : ಜಿ7 ಶೃಂಗದಲ್ಲಿ ಮೋದಿ-ಮೆಲೋನಿ ಮಧುರ ಮಾತುಕತೆ!


















