ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹಲವು ರೋಚಕ ತಿರುವುಗಳನ್ನು ಪಡೆಯುತ್ತಿರುವ ರಾಜಕೀಯ ಭೂಮಿಕೆಯಲ್ಲಿ ಈಗ ಮತ್ತೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಕಳೆದ ಒಂದು ವರ್ಷದಿಂದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರದ ವಿರುದ್ಧ ತೀವ್ರವಾಗಿ ಗುಡುಗುತ್ತಿದ್ದ ತೃಣಮೂಲ ಕಾಂಗ್ರೆಸ್ನ (TMC) ಉಚ್ಚಾಟಿತ ಮುಸ್ಲಿಂ ನಾಯಕರೊಬ್ಬರು, ಈಗ ಮಮತಾ ಅವರು ಮತ್ತೆ ವಿಧಾನಸಭೆ ಪ್ರವೇಶಿಸಲು ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ. ಮುರ್ಷಿದಾಬಾದ್ ಭಾಗದ ಅತ್ಯಂತ ಪ್ರಭಾವಿ ಅಲ್ಪಸಂಖ್ಯಾತ ನಾಯಕ ಎಂದೇ ಗುರುತಿಸಿಕೊಂಡಿರುವ ಹುಮಾಯೂನ್ ಕಬೀರ್, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆಗೆ ಈ ಅನಿರೀಕ್ಷಿತ ಆಫರ್ ನೀಡಿದ್ದಾರೆ.
ದೀದಿಗೆ ಮರುಜನ್ಮ ನೀಡಲು ಮುಂದಾದ ಕಬೀರ್
ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯಿಂದ ಉಚ್ಚಾಟನೆಗೊಂಡಿದ್ದ ಹುಮಾಯೂನ್ ಕಬೀರ್ ಅವರು ತಾವು ಸ್ಥಾಪಿಸಿದ ‘ಆಮ್ ಜನತಾ ಉನ್ನಯನ್ ಪಾರ್ಟಿ’ (AJUP) ವತಿಯಿಂದ ಮುರ್ಷಿದಾಬಾದ್ ಜಿಲ್ಲೆಯ ನೌಡಾ ಮತ್ತು ರೆಜಿನಗರ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಭರ್ಜರಿ ಜಯ ಸಾಧಿಸಿದ್ದರು. ನಿಯಮಗಳ ಪ್ರಕಾರ ಅವರು ಯಾವುದಾದರೂ ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡು ಮತ್ತೊಂದಕ್ಕೆ ರಾಜೀನಾಮೆ ನೀಡಬೇಕಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಮಾತನಾಡಿರುವ ಕಬೀರ್, “ಮಮತಾ ಬ್ಯಾನರ್ಜಿ ಅವರು ನನ್ನ ಬಳಿ ಬಂದರೆ, ನಾನು ರೆಜಿನಗರ ವಿಧಾನಸಭಾ ಕ್ಷೇತ್ರದಿಂದ ಅವರನ್ನು ಸ್ಪರ್ಧಿಸುವಂತೆ ಮಾಡಿ ವಿಧಾನಸಭೆಗೆ ಕಳುಹಿಸಲು ಸಿದ್ಧನಿದ್ದೇನೆ. ಒಂದು ವೇಳೆ ಅವರು ನಂದಿಗ್ರಾಮದಿಂದ ಸ್ಪರ್ಧಿಸಿದರೆ ಗೆಲ್ಲುವುದು ಕಷ್ಟ. ಆದರೆ ಅವರು ಬಯಸಿದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ಕ್ಷೇತ್ರದಿಂದ ಅವರ ಗೆಲುವನ್ನು ಖಾತ್ರಿಪಡಿಸುತ್ತೇನೆ” ಎಂದು ಪತ್ರಕರ್ತರ ಮುಂದೆ ಹೇಳಿದ್ದಾರೆ.
ಭವಾನಿಪುರದಲ್ಲಿ ಮಮತಾಗೆ ಎದುರಾಗಿದ್ದ ಸೋಲು
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜಕೀಯ ಜೀವನದ ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಕ್ಷೇತ್ರವನ್ನು ತ್ಯಜಿಸಿ ಭವಾನಿಪುರದಿಂದ ಸ್ಪರ್ಧಿಸಿದ್ದರು. ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಅವರು ಸೋಲು ಅನುಭವಿಸಿದ್ದಾರೆ. ಸದ್ಯ ಸದನದ ಹೊರಗಿರುವ ಮಮತಾ ಬ್ಯಾನರ್ಜಿ ಅವರು ಮತ್ತೆ ಶಾಸಕಿಯಾಗಬೇಕಾದರೆ ಉಪಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಬೀರ್ ಅವರ ಈ ಹೇಳಿಕೆ ಬಂಗಾಳ ರಾಜಕಾರಣದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ.
ದ್ವೇಷ ಮರೆತು ಮರುಕ ವ್ಯಕ್ತಪಡಿಸಿದ ಕಬೀರ್
ಕಳೆದ ವರ್ಷ ಟಿಎಂಸಿ ನಾಯಕತ್ವದೊಂದಿಗೆ ಸುದೀರ್ಘ ಸಂಘರ್ಷ ನಡೆಸಿದ್ದ ಹುಮಾಯೂನ್ ಕಬೀರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದಾದ ಬಳಿಕ ಅವರು ಎಜೆಯುಪಿ ಪಕ್ಷ ಕಟ್ಟಿ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ, ಮಮತಾ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಬಹಿರಂಗವಾಗಿಯೇ ಪ್ರಚಾರ ಮಾಡಿದ್ದರು. ಆದರೆ ಈಗ ಮಮತಾ ಬ್ಯಾನರ್ಜಿ ಅವರ ಸ್ಥಿತಿ ಕಂಡು ಕಬೀರ್ ಮನಸ್ಸು ಕರಗಿದಂತಿದೆ. ಈ ಕುರಿತು ಭಾವನಾತ್ಮಕವಾಗಿ ಮಾತನಾಡಿರುವ ಅವರು, “ಇಂದು ಮಮತಾ ಬ್ಯಾನರ್ಜಿ ಅವರು ಇರುವ ಪರಿಸ್ಥಿತಿಯನ್ನು ನೋಡಿ ನನಗೆ ನೋವಾಗುತ್ತಿದೆ. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ. ಈಗ ಅವರ ಮಾತನ್ನು ಯಾರೂ ಕೇಳದೇ ಇರಬಹುದು, ಆದರೆ ರೆಜಿನಗರ ಕ್ಷೇತ್ರದಲ್ಲಿ ಹುಮಾಯೂನ್ ಕಬೀರ್ ಹೇಳಿದ್ದೇ ಅಂತಿಮ ಮಾತು” ಎಂದು ತಮ್ಮ ಪ್ರಭಾವವನ್ನು ನೆನಪಿಸಿದ್ದಾರೆ.
ಕಳೆದ ಮೂರು ದಶಕಗಳ ಹಿಂದೆ ಮಮತಾ ಬ್ಯಾನರ್ಜಿ ಅವರು ಕಟ್ಟಿದ ಪಕ್ಷದಲ್ಲಿ ಈಗ ಆಂತರಿಕ ಬಂಡಾಯ ಮತ್ತು ರಾಜಕೀಯ ಹಿನ್ನಡೆಗಳು ಉಂಟಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಅವರು ಈ ಆಫರ್ ಅನ್ನು ಸ್ವೀಕರಿಸುತ್ತಾರೆಯೇ ಇಲ್ಲವೇ ಎಂಬುದು ಸದ್ಯಕ್ಕೆ ಕುತೂಹಲದ ಸಂಗತಿಯಾಗಿದೆ.



















