ಮೌಗಂಜ್ (ಮಧ್ಯಪ್ರದೇಶ) : ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್’ (NEET) ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಪ್ರಕರಣವು ಈಗ ಮತ್ತೊಂದು ಬಡ ವಿದ್ಯಾರ್ಥಿನಿಯ ಜೀವವನ್ನು ಬಲಿಪಡೆದಿದೆ. ಪರೀಕ್ಷೆ ರದ್ದತಿಯಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಆಕಾಂಕ್ಷಾ ಚತುರ್ವೇದಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. “ನನಗೆ ಮತ್ತೊಮ್ಮೆ ಪರೀಕ್ಷೆ ಎದುರಿಸುವ ಧೈರ್ಯವಿಲ್ಲ” ಎಂದು ಡೆತ್ನೋಟ್ ಬರೆದಿಟ್ಟು ಈಕೆ ಇಹಲೋಕ ತ್ಯಜಿಸಿದ್ದು, ಇಡೀ ದೇಶದ ಶಿಕ್ಷಣ ವ್ಯವಸ್ಥೆ ತಲೆತಗ್ಗಿಸುವಂತೆ ಮಾಡಿದೆ.
ಅಡುಗೆ ಭಟ್ಟನಾಗಿದ್ದ ಅಪ್ಪ ಕಂಡ ಕನಸು ಭಗ್ನ
ಆಕಾಂಕ್ಷಾ ಮೇ 3ರಂದು ನೀಟ್ ಪರೀಕ್ಷೆಯನ್ನು ಬರೆದಿದ್ದರು. ಕಡು ಬಡತನದ ನಡುವೆಯೂ ಆಕೆಯನ್ನು ವೈದ್ಯೆಯನ್ನಾಗಿ ಮಾಡಲು ತಂದೆ ಕೃಷ್ಣಕುಮಾರ್ ಚತುರ್ವೇದಿ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿ ಸಾಲ ಪಡೆದು ನಾಗ್ಪುರದ ಕೋಚಿಂಗ್ ಸೆಂಟರ್ಗೆ ಸೇರಿಸಿದ್ದರು. ಮಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಕೃಷಿಕರಾಗಿದ್ದ ತಂದೆ ತಾವೂ ನಾಗ್ಪುರಕ್ಕೆ ಬಂದು ಅಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಾ ಮಗಳ ಕನಸಿಗೆ ಹೆಗಲಾಗಿ ನಿಂತಿದ್ದರು. ಪರೀಕ್ಷೆ ಬರೆದಿದ್ದ ಆಕಾಂಕ್ಷಾ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸುತ್ತಿದ್ದಳು ಮತ್ತು ಈ ಬಾರಿ ವೈದ್ಯಕೀಯ ಸೀಟು ಸಿಗುವುದು ಖಚಿತ ಎಂಬ ಭರವಸೆಯಲ್ಲಿ ಕುಟುಂಬವಿತ್ತು.
ವ್ಯವಸ್ಥೆಯ ಭ್ರಷ್ಟಾಚಾರಕ್ಕೆ ಬಲಿಯಾದ ಪ್ರತಿಭೆ
ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮೇ 12ರಂದು ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21ಕ್ಕೆ ಮರುಪರೀಕ್ಷೆ ಪ್ರಕಟಿಸಿತು. ತಿಂಗಳುಗಟ್ಟಲೆ ಕಷ್ಟಪಟ್ಟು ಓದಿದ್ದ ಪರೀಕ್ಷೆ ರದ್ದಾದ ಸುದ್ದಿ ಆಕಾಂಕ್ಷಾಳನ್ನು ತೀವ್ರ ಆಘಾತಕ್ಕೆ ದೂಡಿತ್ತು. ಮರುಪರೀಕ್ಷೆಯ ಅನಿಶ್ಚಿತತೆ ಮತ್ತು ಮಾನಸಿಕ ಒತ್ತಡ ಆಕೆಯನ್ನು ಖಿನ್ನತೆಯ ಸುಳಿಗೆ ತಳ್ಳಿತ್ತು. ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟಿರುವ ಪತ್ರ ಕಣ್ಣೀರು ತರಿಸುವಂತಿದೆ. “ಅಮ್ಮ-ಅಪ್ಪ, ನಿಮ್ಮ ಮಗಳು ಓದಿ ವೈದ್ಯೆಯಾಗುತ್ತಾಳೆ ಎಂದು ನೀವು ನಂಬಿದ್ದಿರಿ. ಆದರೆ ನನಗೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ. ನಾನು ನಿಮ್ಮಿಬ್ಬರನ್ನೂ ಹಾಳು ಮಾಡಿದೆ. ಮುಂದಿನ ಬಾರಿ ಪರೀಕ್ಷೆ ಬರೆದರೆ ನಾನು ಚೆನ್ನಾಗಿ ಪ್ರದರ್ಶನ ನೀಡುತ್ತೇನೆ ಎಂಬ ಯಾವುದೇ ಗ್ಯಾರಂಟಿ ಇಲ್ಲ” ಎಂದು ಆಕೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾಳೆ.
ದೇಶವ್ಯಾಪಿ ವಿದ್ಯಾರ್ಥಿಗಳ ಆಕ್ರೋಶ, ಆತಂಕ
ನೀಟ್ ಪತ್ರಿಕೆ ಸೋರಿಕೆ ಹಗರಣವು ಕೇವಲ ಆಕಾಂಕ್ಷಾ ಮಾತ್ರವಲ್ಲದೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಹಾಗೂ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಮೂಡಿಸಿದೆ. ಇತ್ತೀಚೆಗಷ್ಟೇ ಜಾರ್ಖಂಡ್ನಲ್ಲೂ ಇಂತಹುದೇ ಪ್ರಕರಣವೊಂದು ವರದಿಯಾಗಿದ್ದು, ದಿಲ್ಲಿಯಲ್ಲಿ ಕೋಚಿಂಗ್ ಪಡೆದು ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಇದೇ ನೀಟ್ ವಿವಾದದ ಆಘಾತ ತಡೆಯಲಾರದೆ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವ್ಯವಸ್ಥೆಯ ತಪ್ಪುಗಳಿಗೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ದೇಶಾದ್ಯಂತ ಪೋಷಕರು ಮತ್ತು ವಿದ್ಯಾರ್ಥಿ ಸಮೂಹದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ದಿಲ್ಲಿ ಹೋಟೆಲ್ ಅಗ್ನಿ ದುರಂತ : ICUನಲ್ಲಿದ್ದ ತಂದೆಯ ನೋಡಲು ಬಂದ ಒಂದೇ ಕುಟುಂಬದ 8 ಮಂದಿ ಸುಟ್ಟು ಕರಕಲು!



















