ಚೆನ್ನೈ : ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆಗೆ ಗೆಲುವು ತಂದುಕೊಡುವ ಮೂಲಕ ಹೊಸ ರಾಜಕೀಯ ಇತಿಹಾಸ ಬರೆದ ತಮಿಳುನಾಡಿನಲ್ಲಿ ಈಗ ಮತ್ತೊಂದು ಭಾರಿ ರಾಜಕೀಯ ಧ್ರುವೀಕರಣದ ಸುಳಿವು ಸಿಕ್ಕಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದಾರೆಯೇ ಎಂಬ ದಟ್ಟ ವದಂತಿಗಳು ಹರಡಲಾರಂಭಿಸಿವೆ. ಕೊಯಮತ್ತೂರು ನಗರದಾದ್ಯಂತ ಅಣ್ಣಾಮಲೈ ಅವರ ಫೋಟೋ ಇರುವ ನಿಗೂಢ ಪೋಸ್ಟರ್ಗಳು ಪ್ರತ್ಯಕ್ಷವಾಗಿರುವುದು ಈ ಅನುಮಾನಗಳಿಗೆ ರೆಕ್ಕೆಪುಕ್ಕ ನೀಡಿದೆ.
ಪ್ರಸ್ತುತ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯ ಕೇಂದ್ರ ಸಮಿತಿಯ ಸಭೆ ನಡೆಯುತ್ತಿರುವಾಗಲೇ, ಅದರಿಂದ ಅಣ್ಣಾಮಲೈ ದೂರ ಉಳಿದಿರುವುದು ಹಾಗೂ ಅವರ ಬೆಂಬಲಿಗರು ಹೊಸ ಸಂಘಟನೆಗೆ ಜನರನ್ನು ಸೇರಿಸುತ್ತಿರುವುದು ತಮಿಳುನಾಡು ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೊಯಮತ್ತೂರಿನ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಣ್ಣಾಮಲೈ ಅವರ ಬೃಹತ್ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಆ ಪೋಸ್ಟರ್ಗಳಲ್ಲಿ “ಭಯವಿಲ್ಲದ ಮನಸ್ಸುಗಳಿಗೆ ಯಾವುದೇ ಮಿತಿಗಳಿರುವುದಿಲ್ಲ” (Fearless minds gave no limits) ಎಂಬ ಒಕ್ಕಣೆಯನ್ನು ಬರೆಯಲಾಗಿದೆ.
ಇದರ ಬೆನ್ನಲ್ಲೇ, ಅಣ್ಣಾಮಲೈ ಅವರ ಅಭಿಮಾನಿಗಳ ಕಲ್ಯಾಣ ಸಂಘಟನೆಯಾದ ‘ಅಣ್ಣಾಮಲೈ ಅನ್ಬು ಕೂಟಂ’ ರಾಜ್ಯಾದ್ಯಂತ ಹೊಸ ಸದಸ್ಯರನ್ನು ಹಾಗೂ ಪದಾಧಿಕಾರಿಗಳನ್ನು ಭರದಿಂದ ದಾಖಲಿಸಿಕೊಳ್ಳಲು ಆರಂಭಿಸಿದೆ. ಈ ಎಲ್ಲ ಬೆಳವಣಿಗೆಗಳು ಹೊಸ ಪಕ್ಷದ ಉದಯಕ್ಕೆ ಮುನ್ನುಡಿಯಾಗಿವೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಟ್ವೀಟ್ ಮಾಡಿ, “ತಮಿಳುನಾಡಿನಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷ ಉದಯಿಸಲು ಸಿದ್ಧವಾಗುತ್ತಿದೆ, ರಾಜಕೀಯ ಮಂಥನ ವೇಗ ಪಡೆದುಕೊಂಡಿದೆ” ಎಂದು ಬರೆಯುವ ಮೂಲಕ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಕೇಂದ್ರ ಸರ್ಕಾರದ ಭಾಷಾ ನೀತಿ ವಿರುದ್ಧ ಬಂಡಾಯ
ಅಣ್ಣಾಮಲೈ ಮತ್ತು ಬಿಜೆಪಿ ಹೈಕಮಾಂಡ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಸಿಬಿಎಸ್ಇ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳನ್ನು ಕಡ್ಡಾಯಗೊಳಿಸಿ ಜುಲೈ 1, 2026ರಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ದಿಢೀರ್ ನಿರ್ಧಾರವನ್ನು ಅಣ್ಣಾಮಲೈ ಬಹಿರಂಗವಾಗಿಯೇ ವಿರೋಧಿಸಿದ್ದರು. ಈ ನಿಯಮದಿಂದ ತಮಿಳುನಾಡಿನ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗಲಿದ್ದು, ಕೇಂದ್ರ ಶಿಕ್ಷಣ ಸಚಿವಾಲಯವು ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕು ಮತ್ತು ಈ ಹಿಂದೆ ನಿರ್ಧರಿಸಿದಂತೆ 2029-30ನೇ ಸಾಲಿನಿಂದ ಇದನ್ನು ಜಾರಿಗೆ ತರಬೇಕು ಎಂದು ಅಣ್ಣಾಮಲೈ ಆಗ್ರಹಿಸಿದ್ದರು. ಕೇಂದ್ರದ ನೀತಿಯ ವಿರುದ್ಧವೇ ಅವರು ಧ್ವನಿ ಎತ್ತಿದ್ದು ಹೈಕಮಾಂಡ್ಗೆ ಮುಜುಗರ ಉಂಟುಮಾಡಿತ್ತು.
ಅಧ್ಯಕ್ಷ ಸ್ಥಾನದಿಂದ ಮುಕ್ತಿ
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷವಾದ ಎಐಎಡಿಎಂಕೆ (AIADMK) ಜೊತೆಗಿನ ಮೈತ್ರಿ ಮುರಿಯಲು ಅಣ್ಣಾಮಲೈ ಅವರೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ತಮಿಳುನಾಡಿನ ದ್ರಾವಿಡ ನಾಯಕರಾದ ಸಿ.ಎನ್. ಅಣ್ಣಾದೊರೈ ಮತ್ತು ಜೆ. ಜಯಲಲಿತಾ ಅವರ ಕುರಿತು ಅಣ್ಣಾಮಲೈ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದ್ದವು. ಅಂತಿಮವಾಗಿ ಎಐಎಡಿಎಂಕೆ ನಾಯಕರ ಕಠಿಣ ಒತ್ತಾಯಕ್ಕೆ ಮಣಿದ ಕೇಂದ್ರ ಬಿಜೆಪಿ ನಾಯಕರು, ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಈ ನಿರ್ಧಾರದಿಂದ ಅಣ್ಣಾಮಲೈ ಮತ್ತು ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ವರಿಷ್ಠರ ಭೇಟಿ ನಂತರ ಅಂತಿಮ ನಿರ್ಧಾರ?
ಬಿಜೆಪಿಯ ಪ್ರಮುಖ ಎರಡು ರಾಜ್ಯ ಮಟ್ಟದ ಸಭೆಗಳಿಗೆ ಗೈರುಹಾಜರಾಗಿ ವಿದೇಶ ಪ್ರವಾಸದಲ್ಲಿರುವ ಅಣ್ಣಾಮಲೈ, ಈ ಹೊಸ ಪಕ್ಷದ ವದಂತಿಗಳ ಕುರಿತು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಅವರು ಶೀಘ್ರದಲ್ಲೇ ದೆಹಲಿಗೆ ಆಗಮಿಸಲಿದ್ದು, ಬಿಜೆಪಿ ಉಸ್ತುವಾರಿ ನಿತಿನ್ ನಬೀನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯ ನಂತರವೇ ಅಣ್ಣಾಮಲೈ ಬಿಜೆಪಿಯಲ್ಲೇ ಮುಂದುವರಿಯುತ್ತಾರೋ ಅಥವಾ ತಮ್ಮ ಬೆಂಬಲಿಗರ ಆಸೆಯಂತೆ ಹೊಸ ರಾಜಕೀಯ ವೇದಿಕೆ ಸೃಷ್ಟಿಸುತ್ತಾರೋ ಎಂಬುದು ಸ್ಪಷ್ಟವಾಗಲಿದೆ.
ಇದನ್ನೂ ಓದಿ : RCB ಕಪ್ ಗೆದ್ದ ಖುಷಿಯಲ್ಲಿ ಅನಾಹುತ ; ಸಂಭ್ರಮಾಚರಣೆ ಮುಗಿಸಿ ಮನೆಗೆ ಬರ್ತಿದ್ದ ಅಭಿಮಾನಿ ಸಾವು!


















