ಗಾಜಿಯಾಬಾದ್ : ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಇತ್ತೀಚೆಗೆ 17 ವರ್ಷದ ಬಾಲಕ ಸೂರ್ಯ ಪ್ರತಾಪ್ ಚೌಹಾಣ್ ಎಂಬಾತನಿಗೆ ಚಾಕು ಇರಿದು ಭೀಕರವಾಗಿ ಹತ್ಯೆಗೈದ ಪ್ರಕರಣದ ಮುಖ್ಯ ಆರೋಪಿ ಅಸದ್, ಶನಿವಾರ ತಡರಾತ್ರಿ ನಡೆದ ಪೋಲೀಸ್ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ಮೇ 28ರಂದು ಬಕ್ರೀದ್ ಹಬ್ಬದ ದಿನದಂದೇ ನಡೆದಿದ್ದ ಈ ಹತ್ಯೆ ಇಡೀ ನಗರದಲ್ಲಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಹಂತಕ ಅಸದ್ ತಲೆಯ ಮೇಲೆ ಪೊಲೀಸರು 50,000 ರೂಪಾಯಿಗಳ ಬಹುಮಾನ ಘೋಷಿಸಿದ್ದರು.
ಗಾಜಿಯಾಬಾದ್ನ ಖೋಡಾ ಮತ್ತು ಇಂದಿರಾಪುರಂ ಪೊಲೀಸ್ ತಂಡಗಳು ಜಂಟಿಯಾಗಿ ನಡೆಸಿದ ಈ ತಡರಾತ್ರಿಯ ಕಾರ್ಯಾಚರಣೆಯಲ್ಲಿ ಅಸದ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆರೋಪಿ ಅಸದ್ ತನ್ನ ಸಹಚರರಿಂದ ಹಣವನ್ನು ಪಡೆದು ನಗರದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವು ಕಡೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ತೀವ್ರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮೋಟಾರ್ ಸೈಕಲ್ನಲ್ಲಿ ಬರುತ್ತಿದ್ದ ಅಸದ್ನನ್ನು ತಡೆಯಲು ಯತ್ನಿಸಿದಾಗ, ಆತ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಅಸದ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಕ್ರೀದ್ ದಿನದಂದು ನಡೆದಿದ್ದ ಭೀಕರ ಹತ್ಯೆ
ಮೇ 28ರಂದು ಖೋಡಾ ಪ್ರದೇಶದಲ್ಲಿ ಅಸದ್ ಮತ್ತು ಆತನ ಸಹಚರರು ಸೂರ್ಯ ಪ್ರತಾಪ್ ಚೌಹಾಣ್ ಮೇಲೆ ಚಾಕುವಿನಿಂದ ಮನಸೋಇಚ್ಛೆ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸೂರ್ಯ ಪ್ರತಾಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಒಟ್ಟು ಐವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.
ಘಟನೆ ನಡೆದ ತಕ್ಷಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರಾದರೂ, ಮುಖ್ಯ ಆರೋಪಿ ಅಸದ್ ತಲೆಮರೆಸಿಕೊಂಡಿದ್ದ. ಎನ್ಕೌಂಟರ್ ನಡೆದ ಸ್ಥಳದಿಂದ ಒಂದು ಮೋಟಾರ್ ಸೈಕಲ್ ಮತ್ತು ಮಾರಕಾಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತಪ್ಪಿಸಿಕೊಂಡಿರುವ ಅಸದ್ನ ಮತ್ತೊಬ್ಬ ಸಹಚರನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಸಿಪಿ ಧವಳ್ ಜೈಸ್ವಾಲ್ ತಿಳಿಸಿದ್ದಾರೆ.
ಬುಲ್ಡೋಜರ್ ಕ್ರಮಕ್ಕೆ ಮೃತನ ತಾಯಿ ಆಗ್ರಹ
ಪೊಲೀಸ್ ಎನ್ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆ ಪ್ರತಿಕ್ರಿಯಿಸಿರುವ ಮೃತ ಸೂರ್ಯ ಪ್ರತಾಪ್ನ ತಾಯಿ, “ನನಗೆ ಕೇವಲ ಒಬ್ಬನ ಎನ್ಕೌಂಟರ್ ಆಗಿರುವುದು ತಿಳಿದಿದೆ. ಆದರೆ ನನ್ನ ಮಗನ ಸಾವಿಗೆ ಕಾರಣರಾದ ಉಳಿದ ಎಲ್ಲರಿಗೂ ಇದೇ ಶಿಕ್ಷೆಯಾಗಬೇಕು. ಏಳು ಜನರು ಸೇರಿ ನನ್ನ ಮಗನನ್ನು ಕೊಂದಿದ್ದಾರೆ. ಆ ಎಲ್ಲಾ ಅಪರಾಧಿಗಳ ಮನೆಗಳ ಮೇಲೆ ಬುಲ್ಡೋಜರ್ ಹರಿಸಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಹಂತಕರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರೆ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಈ ಘಟನೆಯನ್ನು ಅತ್ಯಂತ ಆತಂಕಕಾರಿ ಎಂದು ಕರೆದು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಅಮೆರಿಕ ಆಗಸದಲ್ಲಿ 300 ಟನ್ ಟಿಎನ್ಟಿ ತೀವ್ರತೆಯ ಉಲ್ಕೆ ಸ್ಫೋಟ : ನಡುಗಿದ ಮನೆಗಳು!



















