ಬೆಂಗಳೂರು : ಐಪಿಎಲ್ 2026ರ ಟೂರ್ನಿಯಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅಬ್ಬರ ಮುಂದುವರಿದಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್, ಇದೀಗ ಟೀಮ್ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ವಿಶ್ವದ ಘಟಾನುಘಟಿ ಕ್ರಿಕೆಟಿಗರ ಗಮನ ಸೆಳೆದಿದ್ದಾರೆ.
ವೈಭವ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಪ್ರಬುದ್ಧತೆಯ ಬಗ್ಗೆ ಇದೀಗ ವ್ಯಾಪಕ ಚರ್ಚೆಗಳು ಶುರುವಾಗಿದ್ದು, ಶೀಘ್ರದಲ್ಲೇ ಅವರು ಟೀಮ್ ಇಂಡಿಯಾ ಜರ್ಸಿ ತೊಡುವ ಸಾಧ್ಯತೆಗಳ ಬಗ್ಗೆಯೂ ಲೆಕ್ಕಾಚಾರಗಳು ಗರಿಗೆದರಿವೆ.
“ಭವಿಷ್ಯದ ದೊಡ್ಡ ತಾರೆ”: ಸೂರ್ಯಕುಮಾರ್ ಯಾದವ್ ಪ್ರಶಂಸೆ
ಬುಧವಾರ ಮುಲ್ಲನ್ಪುರದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಅಜೇಯರಾಗಿ ಉಳಿದ ವೈಭವ್, ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಈ ಸ್ಫೋಟಕ ಆಟದ ಬಗ್ಗೆ ಟ್ವೀಟ್ ಮಾಡಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, “ಅದ್ಭುತವಾದ ಇನಿಂಗ್ಸ್, ನಿನ್ನ ಆಟ ಎಲ್ಲರ ಉಸಿರು ಬಿಗಿಹಿಡಿಯುವಂತೆ ಮಾಡಿದೆ. ನೀನೊಬ್ಬ ಭವಿಷ್ಯದ ದೊಡ್ಡ ತಾರೆ (Star in the making)” ಎಂದು ಕೊಂಡಾಡಿದ್ದಾರೆ. ಸೂರ್ಯಕುಮಾರ್ ಮಾತ್ರವಲ್ಲದೆ, ಸಚಿನ್ ತೆಂಡೂಲ್ಕರ್, ಕ್ರಿಸ್ ಗೇಲ್ ಮತ್ತು ಮೈಕಲ್ ವಾನ್ ಅವರಂತಹ ದಿಗ್ಗಜರು ಕೂಡ ಯುವ ಬ್ಯಾಟರ್ ಆಟಕ್ಕೆ ಮಾರುಹೋಗಿದ್ದಾರೆ.
ಹೈದರಾಬಾದ್ ಬೌಲರ್ಗಳನ್ನು ಧೂಳೀಪಟ ಮಾಡಿದ ವೈಭವ್
ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ವೈಭವ್ ಅವರನ್ನು ಕಟ್ಟಿಹಾಕಲು ಎಲ್ಲಾ ರೀತಿಯ ಅಸ್ತ್ರಗಳನ್ನು ಪ್ರಯೋಗಿಸಿದರು. ಬೌನ್ಸರ್, ಯಾರ್ಕರ್, ಸ್ಲೋವರ್ ಬಾಲ್, ಕಟರ್ಸ್ ಸೇರಿದಂತೆ ಫೀಲ್ಡಿಂಗ್ನಲ್ಲಿಯೂ ಸಾಕಷ್ಟು ಬದಲಾವಣೆ ಮಾಡಿದರು. ಆದರೆ, ವೈಭವ್ ಬ್ಯಾಟ್ನಿಂದ ಸಿಡಿಲಬ್ಬರದ ಹೊಡೆತಗಳು ನಿಲ್ಲಲಿಲ್ಲ. ಬುಮ್ರಾ, ರಬಾಡಾ ಅವರಂತಹ ಘಟಾನುಘಟಿ ಬೌಲರ್ಗಳನ್ನೇ ಬೆಂಡೆತ್ತಿದ್ದ ವೈಭವ್, ಕಮಿನ್ಸ್ ಬೌಲಿಂಗ್ಗೂ ಕ್ಯಾರೇ ಎನ್ನಲಿಲ್ಲ.
ಕೇವಲ 29 ಎಸೆತಗಳನ್ನು ಎದುರಿಸಿದ ಅವರು 334ಕ್ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಬರೋಬ್ಬರಿ 12 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಸಿದರು. ಕೇವಲ 3 ರನ್ಗಳ ಅಂತರದಲ್ಲಿ ಐಪಿಎಲ್ ಇತಿಹಾಸದ ಅತಿ ವೇಗದ ಶತಕ ಕೈತಪ್ಪಿದರೂ, 65 ಸಿಕ್ಸರ್ಗಳೊಂದಿಗೆ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ (59 ಸಿಕ್ಸರ್) ಅವರ ದೀರ್ಘಕಾಲದ ದಾಖಲೆಯನ್ನು ವೈಭವ್ ಮುರಿದರು. ಗೇಲ್ ಈ ಸಾಧನೆ ಮಾಡಲು 456 ಎಸೆತಗಳನ್ನು ತೆಗೆದುಕೊಂಡಿದ್ದರೆ, ವೈಭವ್ ಕೇವಲ 266 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿರುವುದು ಅವರ ಬ್ಯಾಟಿಂಗ್ ವೈಖರಿಗೆ ಸಾಕ್ಷಿಯಾಗಿದೆ.
ಟೀಮ್ ಇಂಡಿಯಾಗೆ ಎಂಟ್ರಿ ಕೊಡುತ್ತಾರಾ ವೈಭವ್?
ವೈಭವ್ ಸೂರ್ಯವಂಶಿ ಅವರ ಈ ಅಸಾಧಾರಣ ಪ್ರದರ್ಶನದ ನಂತರ, ಅವರನ್ನು ಶೀಘ್ರದಲ್ಲೇ ಭಾರತೀಯ ಹಿರಿಯರ ತಂಡಕ್ಕೆ ಆಯ್ಕೆ ಮಾಡಬೇಕು ಎಂಬ ಕೂಗು ಜೋರಾಗಿದೆ. ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಈಗಾಗಲೇ ವೈಭವ್ ಅವರನ್ನು ಬೆಂಬಲಿಸಿದ್ದಾರೆ. ಐಪಿಎಲ್ ಟೂರ್ನಿಯ ಬಳಿಕ ಶ್ರೀಲಂಕಾ ತ್ರಿಕೋನ ಸರಣಿಗಾಗಿ ಇಂಡಿಯಾ ಎ ತಂಡವನ್ನು ಸೇರಿಕೊಳ್ಳಲಿರುವ ವೈಭವ್, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿದರೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವ ಸಾಧ್ಯತೆಗಳಿವೆ.
ಆದರೆ, ಕೆಲವು ಮಾಜಿ ಕ್ರಿಕೆಟಿಗರು ಆತುರಪಡದಂತೆ ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಹಿರಿಯರ ತಂಡಕ್ಕೆ ತಂದು ಒತ್ತಡ ಹೇರುವ ಬದಲು, ಅವರ ಆಟದ ಶೈಲಿ ಮತ್ತು ಮಾನಸಿಕತೆಯ ಬೆಳವಣಿಗೆಗೆ ಇನ್ನಷ್ಟು ಸಮಯ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಸದ್ಯ ವೈಭವ್ ಸೂರ್ಯವಂಶಿ ತಮ್ಮ ವೈಯಕ್ತಿಕ ಮೈಲಿಗಲ್ಲುಗಳಿಗಿಂತ, ಮೇ 29ರ ಶುಕ್ರವಾರ ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸುವತ್ತ ಮಾತ್ರ ಗಮನಹರಿಸಿದ್ದಾರೆ.
ಇದನ್ನೂ ಓದಿ : ‘ಕ್ರಿಕೆಟ್ ದೇವರ’ ಮೆಚ್ಚುಗೆಗೆ ಮೂಕವಿಸ್ಮಿತನಾದ ವೈಭವ್ ಸೂರ್ಯವಂಶಿ!


















