ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಹೇರೋಹಳ್ಳಿ ಗ್ರಾಮದ ಸರ್ವೆ ನಂ.56/1ರಲ್ಲಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಗೆ ಸಂಬಂಧಿಸಿದಂತೆ ಭಾರೀ ಅಕ್ರಮದ ಆರೋಪ ಕೇಳಿಬಂದಿದ್ದು, ಹೇರೋಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯಾಧಿಕಾರಿ (ARO) ಮಂಜುಳಾ ಅವರನ್ನು ತಕ್ಷಣ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಒಳಪಡಿಸಬೇಕೆಂದು ಮಾಜಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ.
ಈ ಕುರಿತು ದಾಖಲೆಗಳ ಸಮೇತ GBA ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು (ಕಂದಾಯ), ವಿಶೇಷ ಆಯುಕ್ತರು (ಆಡಳಿತ) ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ಎನ್.ಆರ್ ರಮೇಶ್ ತಿಳಿಸಿದ್ದಾರೆ.
ಹೇರೋಹಳ್ಳಿ ಗ್ರಾಮದ ಸರ್ವೆ ನಂ.56/1ರ 4.20 ಎಕರೆ ಜಮೀನು ಮೂಲತಃ ದಿವಂಗತ ಗಂಗಯ್ಯ ಅವರ ಹೆಸರಿನಲ್ಲಿದ್ದು, ಬಳಿಕ ಅನುಮಾನಾಸ್ಪದವಾಗಿ ಗಿರಿಜಾಬಾಯಿ ಮತ್ತು ತೇಜಸ್ವಿನಿ ಹೆಸರಿಗೆ ಪಹಣಿ ಬದಲಾಗಿರುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಅದು ವಿಚಾರಣೆಯಲ್ಲಿದೆ ಎಂದು ರಮೇಶ್ ತಿಳಿಸಿದ್ದಾರೆ.
ಇದೇ ಜಮೀನಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅನುಮೋದಿತ ನಕ್ಷೆ ಇಲ್ಲದೇ ವಿಕಾಸ್ ಇನ್ಪೋ ಬಿಲ್ಡರ್ಸ್ ಹೆಸರಿನಲ್ಲಿ ಅಶ್ವಥ್ ಎಂಬವರು ಅನಧಿಕೃತ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಡಾವಣೆಯಲ್ಲಿನ 50ಕ್ಕೂ ಹೆಚ್ಚು ನಿವೇಶನಗಳಿಗೆ ನಿಯಮ ಉಲ್ಲಂಘಿಸಿ ‘ಎ’ ಖಾತಾ ಹಾಗೂ ‘ಇ’ ಖಾತಾಗಳನ್ನು ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿದೆ.
ಪಹಣಿಯಲ್ಲಿ ಎಕರೆಗಳ ಲೆಕ್ಕದಲ್ಲಿ ಇರುವ ಜಮೀನಿಗೆ ಪ್ರತ್ಯೇಕ ನಿವೇಶನಗಳ ಖಾತೆ ಮಾಡಬಾರದು ಎಂಬ ನಿಯಮವಿದ್ದರೂ, e-PID ಸೃಷ್ಟಿಸಿ ಖಾತೆಗಳನ್ನು ನೀಡಲಾಗಿದೆ. ಇದಕ್ಕಾಗಿ ಸುಮಾರು 2 ಕೋಟಿಗೂ ಅಧಿಕ ಲಂಚ ಸ್ವೀಕರಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದಲ್ಲದೆ, ಖಾತೆ ಮಂಜೂರಿಗೆ ಅಗತ್ಯವಿರುವ ಶುದ್ಧ ಕ್ರಯಪತ್ರಗಳಿಲ್ಲದೇ, ಅಭಿವೃದ್ಧಿ ಶುಲ್ಕ ಹಾಗೂ ಸುಧಾರಣಾ ಶುಲ್ಕ ಪಾವತಿಸದೇ ಖಾತೆಗಳನ್ನು ಮಾಡಿಕೊಟ್ಟ ಪರಿಣಾಮ ಪಾಲಿಕೆಗೆ 4 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಈಗಾಗಲೇ ಅಧಿಕಾರಿಗಳು ವಿವರಣೆ ಕೋರಿರುವ ನಡುವೆಯೇ, ಅದೇ ಬಡಾವಣೆಯ ಮತ್ತಷ್ಟು 30ಕ್ಕೂ ಹೆಚ್ಚು ನಿವೇಶನಗಳಿಗೆ ಮತ್ತೆ ‘ಎ’ ಖಾತೆಗಳನ್ನು ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ರಮೇಶ್ ಆರೋಪಿಸಿದ್ದಾರೆ. ನಿರಂತರವಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಕೆಂಗೇರಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವ ಇಂತಹ ಅಕ್ರಮಗಳ ವಿರುದ್ಧ ರಾಜ್ಯ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗುವುದು ಎಂದು ಎನ್.ಆರ್ ರಮೇಶ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಮೇ 31ರಂದು ಹಯಗ್ರೀವ ಕ್ಲಿನಿಕ್, ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ!



















