ಚೆನ್ನೈ : ಚಿತ್ರರಂಗದ ಹಲವು ದಿನಗಳ ಬೇಡಿಕೆಗಳಿಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಸ್. ಜೋಸೆಫ್ ವಿಜಯ್ ಅವರು ಸ್ಪಂದಿಸಿದ್ದು, ಸಿನಿ ಪ್ರೇಮಿಗಳು ಹಾಗೂ ಚಿತ್ರೋದ್ಯಮಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಇನ್ಮುಂದೆ ಹೊಸ ತಮಿಳು ಸಿನಿಮಾಗಳು ಬಿಡುಗಡೆಯಾದ ಮೊದಲ ಏಳು ದಿನಗಳ ಕಾಲ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗಷ್ಟೇ ಚಿತ್ರರಂಗದ ಪ್ರಮುಖ ಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ, ಚಿತ್ರಮಂದಿರಗಳ ಆರ್ಥಿಕ ಚೇತರಿಕೆ ಮತ್ತು ಪ್ರೇಕ್ಷಕರ ಬೇಡಿಕೆಯನ್ನು ಪೂರೈಸಲು ದಿನಕ್ಕೆ ಐದು ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಯವರು, ಚಿತ್ರಮಂದಿರ ನಿಯಂತ್ರಣ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಮೂಲಕ ಈ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ.
ನಿಯಮಗಳಿಗೆ ಮಹತ್ವದ ತಿದ್ದುಪಡಿ
ಈ ಹಿಂದೆ ಜಾರಿಯಲ್ಲಿದ್ದ ‘ತಮಿಳುನಾಡು ಸಿನಿಮಾ ನಿಯಂತ್ರಣ ನಿಯಮಗಳು 1957’ ರ ಪ್ರಕಾರ, ಚಿತ್ರಮಂದಿರಗಳಲ್ಲಿ ದಿನಕ್ಕೆ ಕೇವಲ 4 ಪ್ರದರ್ಶನಗಳಿಗಷ್ಟೇ ಅವಕಾಶವಿತ್ತು. ಸ್ಥಳೀಯ ಹಬ್ಬ ಹರಿದಿನಗಳು ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ವಿಶೇಷ ಅನುಮತಿಯೊಂದಿಗೆ ಐದನೇ ಪ್ರದರ್ಶನವನ್ನು ನಡೆಸಲಾಗುತ್ತಿತ್ತು. ಅದಕ್ಕಾಗಿ ಚಿತ್ರಮಂದಿರಗಳ ಮಾಲೀಕರು ಚೆನ್ನೈನಲ್ಲಿ ಪೊಲೀಸ್ ಕಮಿಷನರ್ ಹಾಗೂ ಇತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಇತ್ತು.
ಆದರೆ ಮುಖ್ಯಮಂತ್ರಿಗಳ ಕಚೇರಿ (CMO) ನೀಡಿರುವ ಹೊಸ ಪ್ರಕಟಣೆಯ ಪ್ರಕಾರ, ಇನ್ಮುಂದೆ ಹೊಸ ತಮಿಳು ಸಿನಿಮಾಗಳು ತೆರೆಕಂಡ ಮೊದಲ ವಾರದ 7 ದಿನಗಳು, ಎಲ್ಲಾ ಶನಿವಾರ-ಭಾನುವಾರಗಳು, ಸಾರ್ವಜನಿಕ ರಜಾದಿನಗಳು ಹಾಗೂ ಸ್ಥಳೀಯ ಹಬ್ಬಗಳ ಸಂದರ್ಭದಲ್ಲಿ ಯಾವುದೇ ಪ್ರತ್ಯೇಕ ಅನುಮತಿ ಇಲ್ಲದೆಯೇ ನೇರವಾಗಿ ಐದು ಪ್ರದರ್ಶನಗಳನ್ನು ಪ್ರದರ್ಶಿಸಬಹುದಾಗಿದೆ. ಇದರಿಂದಾಗಿ ಚಿತ್ರಮಂದಿರಗಳ ಮಾಲೀಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಿದಂತಾಗಿದೆ.
ಚಿತ್ರೋದ್ಯಮಕ್ಕೆ ಆನೆ ಬಲ
ಮುಖ್ಯಮಂತ್ರಿ ವಿಜಯ್ ಅವರ ಈ ನಿರ್ಧಾರದಿಂದಾಗಿ ತಮಿಳು ಚಿತ್ರರಂಗದ ಬಾಕ್ಸ್ ಆಫೀಸ್ ಗಳಿಕೆ ಗಣನೀಯವಾಗಿ ಹೆಚ್ಚಾಗಲಿದ್ದು, ಚಿತ್ರಮಂದಿರಗಳ ಮಾಲೀಕರು, ವಿತರಕರು ಮತ್ತು ನಿರ್ಮಾಪಕರಿಗೆ ದೊಡ್ಡ ಆರ್ಥಿಕ ಲಾಭವಾಗಲಿದೆ. ಇತ್ತೀಚೆಗಷ್ಟೇ ಮೇ 15 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ನಟ ಸೂರ್ಯ ಮತ್ತು ನಟಿ ತ್ರಿಶಾ ಕೃಷ್ಣನ್ ಅಭಿನಯದ ‘ಕರುಪ್ಪು’ ಚಿತ್ರದ ಯಶಸ್ಸಿಗೆ ಮುಖ್ಯಮಂತ್ರಿ ವಿಜಯ್ ಅವರು ಚಿತ್ರತಂಡವನ್ನು ಅಭಿನಂದಿಸಿದ್ದರು. ಚಿತ್ರರಂಗದ ಹಿನ್ನೆಲೆಯಿಂದಲೇ ಬಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್, ಚಿತ್ರೋದ್ಯಮದ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸಿರುವುದು ಕಾಲಿವುಡ್ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ : “ನನಗೆ ವಿಜಯ್ ಕಂಡರೆ ಅಸೂಯೆಯಾಗುತ್ತದೆ” : ಪವನ್ ಕಲ್ಯಾಣ್ ಹೀಗೆ ಹೇಳಿದ್ದೇಕೆ?



















