ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನವದೆಹಲಿಯ ‘ಸೇವಾ ತೀರ್ಥ’ದಲ್ಲಿ ಕೇಂದ್ರ ಸಚಿವರ ಮಂಡಳಿಯ ಅತ್ಯಂತ ಪ್ರಮುಖ ಹಾಗೂ ತುರ್ತು ಸಭೆ ಕರೆಯಲಾಗಿದೆ. ಕೇಂದ್ರ ಸರ್ಕಾರದ ಎಲ್ಲ ಸಚಿವರು ಕಡ್ಡಾಯವಾಗಿ ರಾಜಧಾನಿ ದೆಹಲಿಯಲ್ಲೇ ಉಳಿಯುವಂತೆ ಖಡಕ್ ಸೂಚನೆ ನೀಡಲಾಗಿದ್ದು, ರಾಜಕೀಯ ಹಾಗೂ ಆರ್ಥಿಕ ವಲಯದಲ್ಲಿ ಭಾರಿ ಸಂಚಲನ ಹಾಗೂ ಕುತೂಹಲ ಮೂಡಿಸಿದೆ.
5 ದೇಶಗಳ ತಮ್ಮ ಯಶಸ್ವಿ ವಿದೇಶಿ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಅವರು ಭಾರತಕ್ಕೆ ಮರಳಿದ ತಕ್ಷಣವೇ ಈ ಸಭೆ ಆಯೋಜನೆಗೊಂಡಿರುವುದು ವಿಶೇಷ. ಈ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಸಂಪುಟ ದರ್ಜೆ ಸಚಿವರು, ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಹಾಗೂ ರಾಜ್ಯ ಖಾತೆಸಚಿವರು ಸೇರಿದಂತೆ ಇಡೀ ಸಚಿವರ ಮಂಡಳಿ ಭಾಗವಹಿಸಲಿದೆ.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿರುವ ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಸಂಘರ್ಷ ಮತ್ತು ಅದರಿಂದ ಭಾರತದ ಆರ್ಥಿಕತೆಯ ಮೇಲಾಗಬಹುದಾದ ನಕಾರಾತ್ಮಕ ಪರಿಣಾಮಗಳ ಕುರಿತು ಈ ಸಭೆಯಲ್ಲಿ ಪ್ರಧಾನವಾಗಿ ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಜಾಗತಿಕ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆ, ಇಂಧನ ಪೂರೈಕೆ ಸರಪಳಿಯಲ್ಲಿ ಉಂಟಾಗಬಹುದಾದ ವ್ಯತ್ಯಯ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಹಣದುಬ್ಬರ ನಿಯಂತ್ರಣದಂತಹ ಸೂಕ್ಷ್ಮ ವಿಷಯಗಳ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಿದೆ. ಈ ಅಂತಾರಾಷ್ಟ್ರೀಯ ಬಿಕ್ಕಟ್ಟಿನಿಂದ ಭಾರತವನ್ನು ರಕ್ಷಿಸಲು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಈಗಾಗಲೇ ಉನ್ನತ ಮಟ್ಟದ ಅನೌಪಚಾರಿಕ ಸಚಿವರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರಿದ್ದಾರೆ.
ಇತ್ತೀಚೆಗಷ್ಟೇ ಮಾತನಾಡಿದ್ದ ರಾಜನಾಥ್ ಸಿಂಗ್ ಅವರು, ಸರ್ಕಾರವು ಪರಿಸ್ಥಿತಿಯನ್ನು 24 ಗಂಟೆಯೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯಕ್ಕೆ ದೇಶದಲ್ಲಿ ಕಚ್ಚಾ ತೈಲ, ಇಂಧನ ಮತ್ತು ಎಲ್ಪಿಜಿ ಗ್ಯಾಸ್ನ ಸಮರ್ಪಕ ದಾಸ್ತಾನು ಇದ್ದು, ಯಾವುದೇ ಆತಂಕವಿಲ್ಲ ಎಂದು ಭರವಸೆ ನೀಡಿದ್ದರು. ಆದಾಗ್ಯೂ, ಪ್ರಧಾನಿ ಮೋದಿ ಅವರು ಈ ಸಮಿತಿಯಿಂದ ಇತ್ತೀಚಿನ ವಿದ್ಯಮಾನಗಳ ಸಂಪೂರ್ಣ ವರದಿಯನ್ನು ಪಡೆದು ಪರಾಮರ್ಶಿಸಲಿದ್ದಾರೆ.
ಮೋದಿ 3.0 ಸರ್ಕಾರದ ಸಂಪುಟ ಪುನಾರಚನೆ ಕಸರತ್ತು?
ಈ ಸಭೆಯು ಕೇವಲ ಜಾಗತಿಕ ವಿದ್ಯಮಾನಗಳಿಗಷ್ಟೇ ಸೀಮಿತವಾಗಿರದೆ, ತೀವ್ರ ರಾಜಕೀಯ ಪ್ರಾಮುಖ್ಯತೆಯನ್ನೂ ಪಡೆದುಕೊಂಡಿದೆ. ಜೂ.10ರಂದು ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ ಬಂದು 1 ವರ್ಷ ಪೂರೈಸಲಿದ್ದು, ಇದಕ್ಕೂ ಮುನ್ನವೇ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಆಗಲಿದೆ ಎಂಬ ವದಂತಿಗಳೂ ದಟ್ಟವಾಗಿವೆ. ಜೂನ್ ಎರಡನೇ ವಾರದಲ್ಲಿ ಕೇಂದ್ರ ಸಚಿವರ ಮಂಡಳಿಯಲ್ಲಿ ಪ್ರಮುಖ ಬದಲಾವಣೆಗಳು ನಡೆಯಬಹುದು ಎಂದು ಅಧಿಕೃತ ಮೂಲಗಳು ಸೂಚಿಸಿವೆ. ಕಳೆದ ಕೆಲವು ದಿನಗಳಿಂದ ಸರ್ಕಾರದ ಉನ್ನತ ನಾಯಕತ್ವವು ವಿವಿಧ ಸಚಿವಾಲಯಗಳ ಸಾಧನೆ, ಪ್ರಗತಿ ಪರಿಶೀಲನೆ ಹಾಗೂ ಸಾಂಸ್ಥಿಕ ಕಾರ್ಯವೈಖರಿಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯು ಸಚಿವರ ಕಾರ್ಯಕ್ಷಮತೆಯ ಮೌಲ್ಯಮಾಪನದ ಪ್ರಮುಖ ವೇದಿಕೆಯಾಗಲಿದ್ದು, ಮುಂಬರುವ ಸಂಪುಟ ಪುನಾರಚನೆಗೆ ದಿಕ್ಸೂಚಿಯಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಇದನ್ನೂ ಓದಿ : ಹಾಸನದಲ್ಲಿ ಭೀಕರ ಅಪಘಾತ ; ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ದುರ್ಮರಣ!


















