ಪುಣೆ : ಪತ್ನಿಯ ನಡತೆಯ ಮೇಲೆ ಸಂಶಯದಿಂದ ಪತಿಯೊಬ್ಬ ಆಕೆಯ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಲ್ಲದೆ, ಖಾಸಗಿ ಅಂಗಗಳ ಮೇಲೆ ಆ್ಯಸಿಡ್ ಸುರಿದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ವೆಲ್ಡರ್ ಕೆಲಸ ಮಾಡುವ ವ್ಯಕ್ತಿಯು ತನ್ನ 25 ವರ್ಷದ ಪತ್ನಿ ಬೇರೆ ಬೇರೆ ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇದೇ ವಿಚಾರವಾಗಿ ಕಳೆದ ಏ.20ರಂದು ಕೆಲಸ ಮುಗಿಸಿ ಮನೆಗೆ ಮರಳಿದ ಆತ ಸುಖಾಸುಮ್ಮನೆ ಜಗಳ ತೆಗೆದು, ಕೋಪದ ಭರದಲ್ಲಿ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದ ಆತನ ಕ್ರೌರ್ಯ, ಮನೆಯ ನೆಲ ತೊಳೆಯಲು ಬಳಸುವ ಆ್ಯಸಿಡ್ ಅನ್ನು ಆಕೆಯ ಜನನಾಂಗದ ಮೇಲೆ ಸುರಿದು ವಿಕೃತಿ ಮೆರೆದಿದ್ದಾನೆ.
ಚಿಕಿತ್ಸೆಗೂ ಬಿಡದೆ ಗೃಹಬಂಧನದಲ್ಲಿಟ್ಟು ಬೆದರಿಕೆ ಹಾಕಿದ ಪಾಪಿ
ಆ್ಯಸಿಡ್ ದಾಳಿಯಿಂದಾಗಿ ತೀವ್ರ ಸುಟ್ಟ ಗಾಯಗಳು ಮತ್ತು ನೋವಿನಿಂದ ನರಳುತ್ತಿದ್ದ ಪತ್ನಿ ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಪತಿಯ ಮುಂದೆ ಕೈಮುಗಿದು ಬೇಡಿಕೊಂಡಿದ್ದಾಳೆ. ಆದರೆ, ಕಿಂಚಿತ್ತೂ ಕರುಣೆ ತೋರಿಸದ ಆತ ಆಕೆಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಸಿಗದಂತೆ ಮನೆಯಲ್ಲೇ ಕೂಡಿ ಹಾಕಿದ್ದಾನೆ. ಒಂದು ವೇಳೆ ಈ ಘಟನೆಯನ್ನು ಯಾರಿಗಾದರೂ ತಿಳಿಸಿದರೆ ಅಥವಾ ಪೊಲೀಸರ ಬಳಿ ಹೋದರೆ ಪರಿಣಾಮ ನೆಟ್ಟಗಿರಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಭೀಕರ ಕೃತ್ಯ ನಡೆದು ಸುಮಾರು ಒಂದು ತಿಂಗಳವರೆಗೆ ನರಕಯಾತನೆ ಅನುಭವಿಸಿದ ಮಹಿಳೆ, ಪತಿಯ ಕಣ್ಣು ತಪ್ಪಿಸಿ ಹೇಗೋ ಕಷ್ಟಪಟ್ಟು ಸೊಲ್ಲಾಪುರ ಜಿಲ್ಲೆಯಲ್ಲಿರುವ ತನ್ನ ಪೋಷಕರ ಮನೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ.
ಪೋಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ
ಪೋಷಕರ ಮನೆಗೆ ಬಂದ ನಂತರ ಸಂತ್ರಸ್ತೆ ತನಗೆ ಎದುರಾದ ಅಮಾನವೀಯ ಹಿಂಸೆಯನ್ನು ವಿವರಿಸಿದ್ದು, ಮಗಳ ಸ್ಥಿತಿಯನ್ನು ಕಂಡು ಆಘಾತಕ್ಕೊಳಗಾದ ಪೋಷಕರು ಆಕೆಗೆ ಧೈರ್ಯ ತುಂಬಿದ್ದಾರೆ. ತದನಂತರ ಪುಣೆಯ ಉರುಳಿ ಕಾಂಚನ್ ಪ್ರದೇಶಕ್ಕೆ ಹಿಂತಿರುಗಿದ ಮಹಿಳೆ, ಮೇ 15ರಂದು ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಉರುಳಿ ಕಾಂಚನ್ ಪೊಲೀಸ್ ಠಾಣೆಯ ಹಿರಿಯ ನಿರೀಕ್ಷಕ ಸಚಿನ್ ವಂಗಾಂಡೆ ಅವರು, ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆರೋಪಿ ಪತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಹಲವು ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರದ ನಡುವೆ ಕಳಪೆ ಫೀಲ್ಡಿಂಗ್ : ಮೊಹಮ್ಮದ್ ಕೈಫ್ ಕಳವಳ



















