ಬೆಂಗಳೂರು : ಮಹಾನಗರದಲ್ಲಿ ಕಳೆದ 16 ವರ್ಷಗಳಲ್ಲಿ ನಿರ್ಮಾಣಗೊಂಡಿರುವ ಬೃಹತ್ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಶೇ.95 ಕ್ಕೂ ಹೆಚ್ಚು ಕಟ್ಟಡಗಳಿಗೆ ನಕಲಿ CC ಮತ್ತು OC ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ 40 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಮತ್ತು ಸುಮಾರು 22 ಲಕ್ಷ ಗ್ರಾಹಕರ ವಂಚನೆಯಾಗಿದೆ ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಲೋಕಯುಕ್ತ ಹಾಗೂ ಇಡಿಗೆ ದೂರು ನೀಡಿದ್ದಾರೆ.
ಪಾಲಿಕೆಯ ನಗರ ಯೋಜನೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ 16 ವರ್ಷಗಳಲ್ಲಿ ಕೇವಲ 4,381 ಸಿಸಿ ಹಾಗೂ 4,587ಕಟ್ಟಡಗಳಿಗೆ ಓಸಿ ಮಾತ್ರ ನೀಡಲಾಗಿದೆ. ಆದರೆ ಇದೇ ಅವಧಿಯಲ್ಲಿ 71,169 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆ ಎಂದು ಹೇಳಲಾಗಿದೆ.
ಇದಕ್ಕೆ ವಿರುದ್ಧವಾಗಿ, CREDAI ಮತ್ತು BRAI ಸದಸ್ಯರಾಗಿರುವ 437 ಬಿಲ್ಡರ್ ಸಂಸ್ಥೆಗಳು ಮಾತ್ರವೇ 50 ಕ್ಕೂ ಹೆಚ್ಚು ಯೂನಿಟ್ಗಳನ್ನು ಹೊಂದಿರುವ ಸುಮಾರು 25 ಸಾವಿರಕ್ಕೂ ಅಧಿಕ ವಸತಿ ಸಂಕೀರ್ಣಗಳನ್ನು ನಿರ್ಮಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಸತಿ ಸಂಕೀರ್ಣಗಳಲ್ಲಿ ಅಂದಾಜು 22 ಲಕ್ಷ ಫ್ಲಾಟ್ಗಳಿದ್ದು, ಬಹುತೇಕ ಗ್ರಾಹಕರು ನಕಲಿ ದಾಖಲೆಗಳ ಆಧಾರದಲ್ಲಿ ಫ್ಲಾಟ್ ಖರೀದಿಸಿ ಮೋಸಕ್ಕೊಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ 98 ಟೆಕ್ ಪಾರ್ಕ್ಗಳು, 3,876 IT ಕಂಪನಿಗಳು, 103 BT ಕಂಪನಿಗಳು, 4,500 ಕ್ಕೂ ಹೆಚ್ಚು ವಾಣಿಜ್ಯ ಸಂಕೀರ್ಣಗಳು, 217 ಮಾಲ್ ಮತ್ತು ಮಲ್ಟಿಪ್ಲೆಕ್ಸ್ಗಳು, 1.10 ಲಕ್ಷ ಕೈಗಾರಿಕಾ ಕಟ್ಟಡಗಳು, 540 ಸ್ಟಾರ್ ಹೋಟೆಲ್ಗಳು, 2,850 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ 1,350 ಕಲ್ಯಾಣ ಮಂಟಪಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿಯೂ ಬಹುಪಾಲು ಕಟ್ಟಡಗಳಿಗೆ ನಕಲಿ OC-CC ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ನಗರ ಯೋಜನೆ ಇಲಾಖೆಯ ಅಧಿಕಾರಿಗಳು ಹಾಗೂ ಬಿಲ್ಡರ್ ಮಾಫಿಯಾ ನಡುವೆ ಶಾಮೀಲಾತಿ ನಡೆದು, ಕಾನೂನುಬದ್ಧ ಶುಲ್ಕದ ಬದಲು ಅದರ ಶೇ.25 ರಷ್ಟು ಹಣವನ್ನು ಲಂಚ ರೂಪದಲ್ಲಿ ಪಡೆದು ನಕಲಿ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ BBMP/GBA ಗೆ ಕಳೆದ 16 ವರ್ಷಗಳಲ್ಲಿ 40 ಸಾವಿರ ಕೋಟಿ ಕ್ಕೂ ಹೆಚ್ಚು ಆದಾಯ ನಷ್ಟವಾಗಿದೆ ಎಂದು ಹೇಳಲಾಗಿದೆ.
2017-18 ರಲ್ಲಿ ರಾಜರಾಜೇಶ್ವರಿ ನಗರ ವಲಯದಲ್ಲಿ ನಕಲಿ OC-CC ಮುದ್ರಣ ಪ್ರಕರಣದಲ್ಲಿ ಆರು ಮಂದಿ ಪಾಲಿಕೆ ನೌಕರರನ್ನು BMTF ಪೊಲೀಸರು ಬಂಧಿಸಿದ್ದರು ಎಂಬುದನ್ನೂ ಉಲ್ಲೇಖಿಸಲಾಗಿದೆ. ನಗರ ಯೋಜನೆ ಇಲಾಖೆಯಲ್ಲಿ ಹುದ್ದೆಗಳಿಗೆ ಲಕ್ಷಾಂತರದಿಂದ ಕೋಟ್ಯಂತರ ರೂಪಾಯಿ ಲಂಚ ನೀಡಿ ನೇಮಕವಾಗುವ ಅಧಿಕಾರಿಗಳು ಬಳಿಕ ಅಕ್ರಮ ಮಾರ್ಗದಲ್ಲಿ ಅಪಾರ ಆಸ್ತಿ ಸಂಪಾದಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ
ಈ ಸಂಬಂಧ 255 ಮಂದಿ ಅಧಿಕಾರಿಗಳು ಹಾಗೂ CREDAI ಮತ್ತು BRAIಗೆ ಸೇರಿದ 437 ಬಿಲ್ಡರ್ಗಳ ವಿರುದ್ಧ 9,700 ಪುಟಗಳ ದಾಖಲೆಗಳೊಂದಿಗೆ ಜಾರಿ ನಿರ್ದೇಶನಾಲಯ (ED) ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಜೊತೆಗೆ, ಈ ಸಂಪೂರ್ಣ ಹಗರಣವನ್ನು CBI ಅಥವಾ CID ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ.
ಇದನ್ನೂ ಓದಿ : ‘ನನ್ನ ಇ-ಖಾತಾ ನನ್ನ ಹಕ್ಕು’ ಅಭಿಯಾನಕ್ಕೆ ಇಂದು ಚಾಲನೆ



















