ನವದೆಹಲಿ: ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಬಿಕ್ಕಟ್ಟು ಹಾಗೂ ಜಾಗತಿಕ ಆರ್ಥಿಕ ಅಸ್ಥಿರತೆಯನ್ನು ಸಮರ್ಥವಾಗಿ ಎದುರಿಸಲು ದೇಶವಾಸಿಗಳು ಒಗ್ಗೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಂಧನ ಮತ್ತು ವಿದೇಶಿ ವಿನಿಮಯ ಮೀಸಲು ಉಳಿಸುವ ನಿಟ್ಟಿನಲ್ಲಿ ಅನಗತ್ಯ ವಿದೇಶ ಪ್ರವಾಸ ಕೈಬಿಡುವುದು ಹಾಗೂ ಸಾರ್ವಜನಿಕ ಸಾರಿಗೆಯ ಬಳಕೆಯಂತಹ ‘ಕೋವಿಡ್-19 ಕಾಲದ ಕ್ರಮ’ಗಳನ್ನು ಮೈಗೂಡಿಸಿಕೊಳ್ಳುವಂತೆ ಅವರು ದೇಶದ ಜನತೆಗೆ ಮನವಿ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಗಡಿಯಲ್ಲಿ ಪ್ರಾಣತೆರಲು ಸಿದ್ಧರಿರುವುದು ಮಾತ್ರವೇ ದೇಶಪ್ರೇಮವಲ್ಲ; ದೈನಂದಿನ ಬದುಕಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ತಗ್ಗಿಸಲು ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಬೇಕು, ಕಾರ್-ಪೂಲಿಂಗ್ ಪದ್ಧತಿ ಅಳವಡಿಸಿಕೊಳ್ಳಬೇಕು ಮತ್ತು ಸರಕು ಸಾಗಣೆಗೆ ರೈಲ್ವೆಯನ್ನು ಅವಲಂಬಿಸಬೇಕು ಎಂದು ಅವರು ಸಲಹೆ ನೀಡಿದರು. ಜೊತೆಗೆ, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಿದ ಅವರು, ಕೋವಿಡ್ ಸಮಯದಲ್ಲಿ ಚಾಲ್ತಿಯಲ್ಲಿದ್ದ ‘ವರ್ಕ್ ಫ್ರಮ್ ಹೋಮ್’ (ಮನೆಯಿಂದಲೇ ಕೆಲಸ), ಆನ್ಲೈನ್ ಸಮ್ಮೇಳನಗಳು ಹಾಗೂ ವರ್ಚುವಲ್ ಸಭೆಗಳನ್ನು ಪುನರಾರಂಭಿಸುವಂತೆ ಸೂಚಿಸಿದರು. ಇದರ ಜೊತೆಗೆ ದೈನಂದಿನ ಬಳಕೆಯ ವಸ್ತುಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಅವರು ಕೋರಿದರು.
ಚಿನ್ನದ ಖರೀದಿ, ವಿದೇಶಿ ವಿವಾಹಗಳಿಗೆ ಬ್ರೇಕ್
ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸಾರ್ವಜನಿಕರು ವಿದೇಶಿ ಪ್ರವಾಸ ಕೈಗೊಳ್ಳುವುದನ್ನು ಹಾಗೂ ವಿದೇಶಗಳಲ್ಲಿ ವಿವಾಹವಾಗುವುದನ್ನು ಕೈಬಿಡಬೇಕು. ಹಾಗೆಯೇ, ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ಅತ್ಯಗತ್ಯವಲ್ಲದ ಚಿನ್ನದ ಖರೀದಿಗೆ ಕಡಿವಾಣ ಹಾಕಬೇಕು ಎಂದು ಪ್ರಧಾನಿ ಮೋದಿ ವಿನಂತಿಸಿದರು. ಆರ್ಥಿಕ ಹಾಗೂ ವೈಯಕ್ತಿಕ ಆರೋಗ್ಯದ ದೃಷ್ಟಿಯಿಂದ ಅಡುಗೆ ಎಣ್ಣೆಯ ಬಳಕೆಯನ್ನು ಮಿತಗೊಳಿಸುವುದು ಸೂಕ್ತ ಎಂದ ಅವರು, ದೇಶೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಗ್ರಹಿಸಿದರು. ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಶೇಕಡಾ 50೦ರಷ್ಟು ತಗ್ಗಿಸಬೇಕು ಮತ್ತು ಡೀಸೆಲ್ ಪಂಪ್ಗಳ ಬದಲಿಗೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್ಗಳನ್ನು ಬಳಸುವಂತೆ ಕಿವಿಮಾತು ಹೇಳಿದರು.
ಮಧ್ಯಪ್ರಾಚ್ಯದ ಬಿಕ್ಕಟ್ಟು ಮತ್ತು ತೈಲ ಸಂಕಷ್ಟ
ಅಮೆರಿಕ-ಇಸ್ರೇಲ್ ಪಡೆಗಳು ಮತ್ತು ಇರಾನ್ ನಡುವಿನ ತೀವ್ರಗೊಂಡ ಯುದ್ಧದ ಪರಿಣಾಮವಾಗಿ, ಮಧ್ಯಪ್ರಾಚ್ಯದಿಂದ ತೈಲ ಪೂರೈಕೆಗೆ ಅತ್ಯಂತ ಪ್ರಮುಖವಾದ ‘ಹೊರ್ಮುಜ್ ಜಲಸಂಧಿ’ಯು (Strait of Hormuz) ಕಳೆದ ಎರಡು ತಿಂಗಳುಗಳಿಂದ ನಿರ್ಬಂಧಕ್ಕೊಳಗಾಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಗಗನಕ್ಕೇರಿವೆ. ತೈಲ ಬೆಲೆ ಏರಿಕೆಯ ಪರಿಣಾಮವಾಗಿ, ಇತರ ಆಮದು ವಸ್ತುಗಳ ಬೆಲೆಯೂ ಹೆಚ್ಚಾಗಿ ದೇಶದ ವಿದೇಶಿ ವಿನಿಮಯ ಮೀಸಲು ಕರಗುತ್ತಿದೆ.
ಜಲಸಂಧಿ ಮೂಲಕ ಹಾದುಹೋಗುವ ಹಡಗುಗಳಿಂದ ಸುಂಕ ವಸೂಲಿ ಮಾಡುವುದಾಗಿ ಇರಾನ್ ಪ್ರಕಟಿಸಿದ್ದರೆ, ಇರಾನ್ಗೆ ಸುಂಕ ಪಾವತಿಸುವ ಯಾವುದೇ ಹಡಗನ್ನು ತಡೆಯುವುದಾಗಿ ಅಮೆರಿಕ ಎಚ್ಚರಿಸಿದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಡಲ ಸಂಸ್ಥೆಯ (IMO) ವರದಿಯ ಪ್ರಕಾರ, ಇರಾನ್ನ ಈ ದಿಗ್ಬಂಧನದಿಂದಾಗಿ ಕೊಲ್ಲಿಯಲ್ಲಿ ಸುಮಾರು 1500 ಹಡಗುಗಳು ಮತ್ತು ಸಿಬ್ಬಂದಿ ಸಿಲುಕಿಕೊಂಡಿದ್ದಾರೆ. ಈ ಜಲಸಂಧಿಯ ಭದ್ರತೆಗಾಗಿ ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ಒಕ್ಕೂಟ ರಚಿಸಲು ಮುಂದಾಗಿದ್ದರೂ, ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ತಕ್ಷಣದ ಮತ್ತು ನಿರ್ಣಾಯಕ ತಿರುಗೇಟು ನೀಡುವುದಾಗಿ ಇರಾನ್ ಎಚ್ಚರಿಸಿದೆ. ಇದು ಬಿಕ್ಕಟ್ಟು ಸದ್ಯಕ್ಕೆ ಅಂತ್ಯಗೊಳ್ಳುವ ಲಕ್ಷಣಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.



















