ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಶಕೆ ಎಂಬಂತೆ ಸತತ 60 ವರ್ಷಗಳ ಕಾಲ ತಮಿಳುನಾಡಿನಲ್ಲಿ ಪ್ರಾಬಲ್ಯ ಮೆರೆದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಏಕಸ್ವಾಮ್ಯವನ್ನು ಮುರಿದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ಅವರು ಇಂದು(ಭಾನುವಾರ) ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇತರೆ ಹಿರಿಯ ರಾಜಕಾರಣಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ 51 ವರ್ಷದ ವಿಜಯ್ ಅಧಿಕಾರದ ಚುಕ್ಕಾಣಿ ಹಿಡಿದರು.
ಸಚಿವ ಸಂಪುಟಕ್ಕೆ 9 ನಾಯಕರ ಸೇರ್ಪಡೆ
ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಟಿವಿಕೆ ಪಕ್ಷದ 9 ಪ್ರಮುಖ ನಾಯಕರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡು ಟಿವಿಕೆ ಸೇರಿದ್ದ ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್, ವಿಜಯ್ ಅವರ ಆಪ್ತ ತಂತ್ರಜ್ಞ ಆದವ್ ಅರ್ಜುನ, ಮಾಜಿ ಬಿಜೆಪಿ ಮುಖಂಡ ಹಾಗೂ ಮಧುರೈನ ತಿರುಪರಂಕುಂಡ್ರಂ ಶಾಸಕ ಸಿ.ಟಿ.ಆರ್. ನಿರ್ಮಲ್ ಕುಮಾರ್ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಇವರೊಂದಿಗೆ ಟಿವಿಕೆ ಪ್ರಧಾನ ಕಾರ್ಯದರ್ಶಿ ‘ಬಸ್ಸಿ’ ಆನಂದ್, ಸಿನಿಮಾ ಹಾಗೂ ಕಿರುತೆರೆ ನಟ ರಾಜ್ಮೋಹನ್, ಕಾರೈಕುಡಿಯಿಂದ ಗೆದ್ದಿರುವ ದಂತ ವೈದ್ಯ ಕೆ.ಟಿ. ಪ್ರಭು, ಐಆರ್ಎಸ್ ಮಾಜಿ ಅಧಿಕಾರಿ ಅರುಣ್ರಾಜ್, ಮೈಲಾಪುರ ಶಾಸಕ ಪಿ. ವೆಂಕಟರಮಣನ್ ಹಾಗೂ ಸಂಪುಟದ ಅತ್ಯಂತ ಕಿರಿಯ, 28 ವರ್ಷದ ಎಸ್. ಕೀರ್ತನಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮೈತ್ರಿ ಸರ್ಕಾರದ ಸಂಕಷ್ಟದ ಹಾದಿ
ಕೇವಲ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ, ವಿಧಾನಸಭೆ ಚುನಾವಣೆಯಲ್ಲಿ 234 ಕ್ಷೇತ್ರಗಳ ಪೈಕಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಪ್ರವೇಶ ಮಾಡಿತ್ತು. ಆದರೆ ಸರಳ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದ ಕಾರಣ, ಸರ್ಕಾರ ರಚನೆಗೆ ಕಸರತ್ತು ನಡೆಸಬೇಕಾಯಿತು. ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಾಗಿದ್ದು, ಮೈತ್ರಿ ಬಲ 116ಕ್ಕೆ ಇಳಿದಿತ್ತು. ಡಿಎಂಕೆ ಮಿತ್ರಪಕ್ಷಗಳಾದ 5 ಶಾಸಕರಿರುವ ಕಾಂಗ್ರೆಸ್, ತಲಾ 2 ಶಾಸಕರಿರುವ ಸಿಪಿಐ ಹಾಗೂ ಸಿಪಿಐ-ಎಂ ಪಕ್ಷಗಳು ಬೆಂಬಲ ಸೂಚಿಸಿದ್ದವು. ಆದರೂ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಸತತ ನಾಲ್ಕು ಬಾರಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ವಿಜಯ್ ಭೇಟಿಯಾಗಿದ್ದರು. ಅಂತಿಮವಾಗಿ ಶನಿವಾರ ಡಿಎಂಕೆ ಮಿತ್ರಪಕ್ಷಗಳಾದ ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಎಂ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಟಿವಿಕೆಗೆ ಬೆಂಬಲ ಘೋಷಿಸುವ ಮೂಲಕ ಒಟ್ಟು ಬಲ 120ಕ್ಕೆ ಏರಿಕೆಯಾಗಿ, ವಿಜಯ್ ಮುಖ್ಯಮಂತ್ರಿ ಗಾದಿಗೇರುವುದು ಸುಲಭವಾಯಿತು.
ಸಿನಿಮಾದಿಂದ ರಾಜಕೀಯದವರೆಗಿನ ದಳಪತಿಯ ಪಯಣ
1974ರ ಜೂನ್ 22ರಂದು ಚೆನ್ನೈನಲ್ಲಿ ಜನಿಸಿದ ವಿಜಯ್, 1984ರಲ್ಲಿ ತಂದೆ ಎಸ್.ಎ. ಚಂದ್ರಶೇಖರ್ ನಿರ್ದೇಶನದ ‘ವೆಟ್ರಿ’ ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. 1992ರಲ್ಲಿ 18ನೇ ವಯಸ್ಸಿನಲ್ಲಿ ‘ನಾಲೈಯ ತೀರ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿಪರದೆಗೆ ಪರಿಚಯವಾದರು. 1994ರಲ್ಲಿ ಬಿಡುಗಡೆಯಾದ ‘ರಸಿಗನ್’ ಚಿತ್ರದ ಪ್ರಚಾರದ ವೇಳೆ ಅವರಿಗೆ ‘ಇಳಯ ದಳಪತಿ’ (ಯುವ ದಂಡನಾಯಕ) ಎಂಬ ಬಿರುದು ನೀಡಲಾಯಿತು. ಆ ಬಳಿಕ ‘ತುಪ್ಪಾಕಿ’, ‘ಕತ್ತಿ’, ‘ಮರ್ಸಲ್’, ‘ಬಿಗಿಲ್’ ಹಾಗೂ ‘ಲಿಯೋ’ ಮುಂತಾದ ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡುವ ಮೂಲಕ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಬೆಳೆದರು. 2024ರಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳಿದ ವಿಜಯ್, ಟಿವಿಕೆ ಪಕ್ಷವನ್ನು ಸ್ಥಾಪಿಸಿ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಹೊಸ ಇತಿಹಾಸ ಬರೆದಿದ್ದಾರೆ.
ಇದನ್ನೂ ಓದಿ : ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ನೀಲಿ ರೇಷ್ಮೆ ಸೀರೆಯಲ್ಲಿ ಮಿಂಚಿದ ತ್ರಿಷಾ!



















