ನವದೆಹಲಿ : ಇಂದು ನಿಮ್ಮ ಮೊಬೈಲ್ ಫೋನ್ನಲ್ಲಿ ಜೋರಾದ ಸದ್ದು ಕೇಳಿ, ವಿಚಿತ್ರವಾದ ಎಚ್ಚರಿಕೆ ಸಂದೇಶ ಬಂದರೆ ಗಾಬರಿಪಡಬೇಕಾದ ಅಗತ್ಯವಿಲ್ಲ. ಇದು ಭಾರತ ಸರ್ಕಾರವು ವಿಪತ್ತು ನಿರ್ವಹಣೆಗಾಗಿ ರೂಪಿಸಿರುವ ದೇಶೀಯ ತಂತ್ರಜ್ಞಾನದ ಸಾಮರ್ಥ್ಯ ಪರೀಕ್ಷೆಯ ಒಂದು ಭಾಗವಾಗಿದೆ. ಮೇ 2ರ ಶನಿವಾರ ಭಾರತ ಸರ್ಕಾರವು ‘ಸಚೇತ್’ (SACHET) ವೇದಿಕೆಯ ಮೂಲಕ ಸಮಗ್ರ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಅಧಿಕೃತವಾಗಿ ಕಾರ್ಯಗತಗೊಳಿಸಿದೆ.
ಗೃಹ ಸಚಿವರಿಂದ ಅಧಿಕೃತ ಚಾಲನೆ
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಶನಿವಾರ ಈ ಮಹತ್ವಾಕಾಂಕ್ಷಿ ಯೋಜನೆಗೆ ಜಂಟಿಯಾಗಿ ಚಾಲನೆ ನೀಡಿದರು. ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ (C-DOT) ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ಅಂತರರಾಷ್ಟ್ರೀಯ ಟೆಲಿಕಮ್ಯುನಿಕೇಶನ್ ಯೂನಿಯನ್ ಶಿಫಾರಸು ಮಾಡಿರುವ ‘ಕಾಮನ್ ಅಲರ್ಟಿಂಗ್ ಪ್ರೊಟೊಕಾಲ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ದೇಶದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆಯು ಲಭ್ಯವಿದ್ದು, ತುರ್ತು ಸಂದರ್ಭಗಳಲ್ಲಿ ನಾಗರಿಕರನ್ನು ತಲುಪಲು ಇದು ಪ್ರಬಲ ಅಸ್ತ್ರವಾಗಲಿದೆ.
ಸೈಲೆಂಟ್ ಮೋಡ್ನಲ್ಲೂ ಮೊಳಗಲಿದೆ ಎಚ್ಚರಿಕೆ
ಈ ಹೊಸ ‘ಸೆಲ್ ಬ್ರಾಡ್ಕಾಸ್ಟ್’ ತಂತ್ರಜ್ಞಾನವು ಸಾಮಾನ್ಯ ಎಸ್ಎಮ್ಎಸ್ (SMS) ಸಂದೇಶಗಳಿಗಿಂತ ಹೆಚ್ಚು ಸುಧಾರಿತವಾಗಿದೆ. ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿರುವ ಎಲ್ಲಾ ಮೊಬೈಲ್ ಸಾಧನಗಳಿಗೆ ಏಕಕಾಲದಲ್ಲಿ ಸಂದೇಶ ರವಾನಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ವಿಶೇಷವೆಂದರೆ, ನಿಮ್ಮ ಫೋನ್ ಸೈಲೆಂಟ್ ಮೋಡ್ ಅಥವಾ ‘ಡು ನಾಟ್ ಡಿಸ್ಟರ್ಬ್’ ಮೋಡ್ನಲ್ಲಿದ್ದರೂ ಸಹ, ಈ ವ್ಯವಸ್ಥೆಯು ಅದನ್ನು ಮೀರಿ ಜೋರಾದ ಶಬ್ದದೊಂದಿಗೆ ಎಚ್ಚರಿಕೆ ಸಂದೇಶವನ್ನು ಪರದೆಯ ಮೇಲೆ ಪ್ರದರ್ಶಿಸುತ್ತದೆ. ಇದು ಬಳಕೆದಾರರ ಗಮನವನ್ನು ತಕ್ಷಣ ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ.
ವಿಪತ್ತು ನಿರ್ವಹಣೆಯಲ್ಲಿ ಹೊಸ ಮೈಲಿಗಲ್ಲು
ಭೂಕಂಪ, ಸುನಾಮಿ, ಗುಡುಗು ಮಿಂಚುಗಳಂತಹ ನೈಸರ್ಗಿಕ ವಿಕೋಪಗಳು ಮಾತ್ರವಲ್ಲದೆ, ಅನಿಲ ಸೋರಿಕೆ ಅಥವಾ ರಾಸಾಯನಿಕ ದುರಂತಗಳಂತಹ ಮಾನವನಿರ್ಮಿತ ತುರ್ತು ಪರಿಸ್ಥಿತಿಗಳಲ್ಲೂ ಈ ವ್ಯವಸ್ಥೆ ಜನರಿಗೆ ಸಹಕಾರಿಯಾಗಲಿದೆ. ಈಗಾಗಲೇ ವಿವಿಧ ವಿಪತ್ತುಗಳ ಸಂದರ್ಭದಲ್ಲಿ 19ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುಮಾರು 134 ಬಿಲಿಯನ್ ಎಸ್ಎಂಎಸ್ ಅಲರ್ಟ್ಗಳನ್ನು ಕಳುಹಿಸುವ ಮೂಲಕ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗ ಜಾರಿಗೆ ಬಂದಿರುವ ಹೊಸ ವ್ಯವಸ್ಥೆಯು ಯಾವುದೇ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬ ಮೊಬೈಲ್ ಬಳಕೆದಾರರನ್ನು ತಲುಪುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : IPLನಿಂದ ಶಿವಂ ಮಾವಿ ಔಟ್.. ಬದಲಿ ಆಟಗಾರನಾಗಿ SRH ಪಡೆ ಸೇರಿದ ಅಂಬರೀಶ್!



















