ಬೆಂಗಳೂರು : ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ತಂಡದ ವೇಗದ ಬೌಲರ್ ಶಿವಂ ಮಾವಿ ಅವರು ತೊಡೆಸಂದು (ಗ್ರಾಯಿನ್) ಗಾಯದ ಸಮಸ್ಯೆಯಿಂದಾಗಿ ಪ್ರಸಕ್ತ 2026ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಈ ಬಾರಿಯ ಹರಾಜಿನಲ್ಲಿ 75 ಲಕ್ಷ ರೂಪಾಯಿ ಮೂಲಬೆಲೆಗೆ ಎಸ್ಆರ್ಹೆಚ್ ಪಾಲಾಗಿದ್ದ ಮಾವಿ, ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ. ಅಚ್ಚರಿಯೆಂದರೆ, 2022ರ ಬಳಿಕ ಅವರು ಯಾವುದೇ ಐಪಿಎಲ್ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.
ಪದೇಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದು ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಈ ಹಿಂದೆ 2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಮಾವಿ, ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಬಳಿಕ ಭಾರತ ತಂಡದ ಪರ ಟಿ20 ಸರಣಿಗೂ ಪದಾರ್ಪಣೆ ಮಾಡಿ 4 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಆದರೆ ಇದೀಗ ಮತ್ತೆ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ದೂರ ಉಳಿಯುವಂತಾಗಿದೆ.
ಬದಲಿ ಆಟಗಾರನಾಗಿ ಅಂಬರೀಶ್ ಸೇರ್ಪಡೆ
ಶಿವಂ ಮಾವಿ ಅವರ ಜಾಗಕ್ಕೆ ಬದಲಿ ಆಟಗಾರನಾಗಿ ತಮಿಳುನಾಡಿನ ಯುವ ಪ್ರತಿಭೆ, ಬೌಲಿಂಗ್ ಆಲ್ರೌಂಡರ್ ಆರ್.ಎಸ್. ಅಂಬರೀಶ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಒಪ್ಪಂದ ಮಾಡಿಕೊಂಡಿದೆ. ಅಂಬರೀಶ್ ಎಡಗೈ ಬ್ಯಾಟರ್ ಹಾಗೂ ಬಲಗೈ ಮಧ್ಯಮ ವೇಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಐಸಿಸಿ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಅಂಬರೀಶ್ ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ 7 ಪಂದ್ಯಗಳಿಂದ 11 ವಿಕೆಟ್ ಕಬಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇದೇ ವರ್ಷ ರಣಜಿ ಟ್ರೋಫಿಯಲ್ಲೂ ತಮಿಳುನಾಡು ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಈ ಉದಯೋನ್ಮುಖ ಆಟಗಾರ, ಇದೀಗ 30 ಲಕ್ಷ ರೂಪಾಯಿ ಮೂಲಬೆಲೆಯೊಂದಿಗೆ ಎಸ್ಆರ್ಹೆಚ್ ತಂಡವನ್ನು ಸೇರಿಕೊಂಡಿದ್ದಾರೆ.
ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿ ಎಸ್ಆರ್ಹೆಚ್
ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವು ಪ್ರಸಕ್ತ ಟೂರ್ನಿಯಲ್ಲಿ ಅತ್ಯುತ್ತಮ ಲಯದಲ್ಲಿದ್ದು, ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ತಂಡವು ತನ್ನ ಮುಂದಿನ ಪಂದ್ಯವನ್ನು ಮೇ 3ರಂದು ತವರಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಕೆಕೆಆರ್ ತಂಡವನ್ನು ಮಣಿಸಿ, ಸತತ 6ನೇ ಗೆಲುವು ದಾಖಲಿಸುವ ವಿಶ್ವಾಸದಲ್ಲಿ ಹೈದರಾಬಾದ್ ಪಡೆ ಇದೆ. ಯುವ ಆಟಗಾರ ಅಂಬರೀಶ್ ಅವರ ಸೇರ್ಪಡೆಯು ತಂಡದ ಬೌಲಿಂಗ್ ವಿಭಾಗಕ್ಕೆ ಇನ್ನಷ್ಟು ಬಲ ತುಂಬುವ ನಿರೀಕ್ಷೆಯಿದೆ.
ಇದನ್ನೂ ಓದಿ : CSK ಪಂದ್ಯಗಳ ವೇಳೆ ಕ್ರೀಡಾಂಗಣದಿಂದ ಧೋನಿ ದೂರ ಉಳಿಯಲು ಕಾರಣವೇನು?



















