ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಶಶಾಂಕ್ ಸಿಂಗ್ ಅವರಿಗೆ ಫೀಲ್ಡಿಂಗ್ ವಿಭಾಗದಲ್ಲಿ ಅಕ್ಷರಶಃ ದುಃಸ್ವಪ್ನ ಕಾಡುತ್ತಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ಮುಂದುವರಿಸಿದ ಅವರನ್ನು ಮೈದಾನದಿಂದ ಹೊರಗಿಡುವ ಕಠಿಣ ನಿರ್ಧಾರವನ್ನು ಪಂಜಾಬ್ ಕಿಂಗ್ಸ್ ತಂಡದ ಆಡಳಿತ ಮಂಡಳಿ ತೆಗೆದುಕೊಂಡಿದೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಮೂರು ಕ್ಯಾಚ್ಗಳನ್ನು ಕೈಚೆಲ್ಲಿದ್ದ ಶಶಾಂಕ್, ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಕೆ.ಎಲ್. ರಾಹುಲ್ ಅವರ ಸುಲಭ ಕ್ಯಾಚ್ ಸೇರಿದಂತೆ ಮಹತ್ವದ ತಪ್ಪುಗಳನ್ನು ಎಸಗಿ ತಂಡದ ಕೋಚ್ ರಿಕಿ ಪಾಂಟಿಂಗ್ ಅವರ ಅಸಮಾಧಾನಕ್ಕೆ ಗುರಿಯಾದರು.
ಕೆ.ಎಲ್. ರಾಹುಲ್ ಕ್ಯಾಚ್ ಡ್ರಾಪ್ ಹಾಗೂ ಕಳಪೆ ಫೀಲ್ಡಿಂಗ್
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿಯೇ ಶಶಾಂಕ್ ಸಿಂಗ್ ಅವರ ಕಳಪೆ ಫೀಲ್ಡಿಂಗ್ ಪ್ರದರ್ಶನ ಶುರುವಾಯಿತು. ಅರ್ಷದೀಪ್ ಸಿಂಗ್ ಅವರ ಬೌಲಿಂಗ್ನಲ್ಲಿ ಕೆ.ಎಲ್. ರಾಹುಲ್ ಲೆಗ್ ಸೈಡ್ನತ್ತ ಬಾರಿಸಿದ ಚೆಂಡನ್ನು ಮಿಡ್-ವಿಕೆಟ್ನಲ್ಲಿ ನಿಂತಿದ್ದ ಶಶಾಂಕ್, ಆಸ್ಟ್ರೇಲಿಯನ್ ರಿವರ್ಸ್-ಕಪ್ ತಂತ್ರವನ್ನು ಬಳಸಿ ಹಿಡಿಯಲು ಯತ್ನಿಸಿ ವಿಫಲರಾದರು. ಈ ಸುಲಭ ಕ್ಯಾಚ್ ಕೈಚೆಲ್ಲಿದ್ದಷ್ಟೇ ಅಲ್ಲದೆ, ಬೌಂಡರಿ ಲೈನ್ ಬಳಿ ಬಲಬದಿಗೆ ಓಡುತ್ತಾ ಚೆಂಡನ್ನು ತಡೆಯುವ ಪ್ರಯತ್ನದಲ್ಲೂ ಎಡವಿದರು. ಅವರ ಕೈಯಿಂದ ಜಾರಿದ ಚೆಂಡು ಸುಲಭವಾಗಿ ಬೌಂಡರಿ ಗೆರೆ ದಾಟಿತು. ಸತತ ತಪ್ಪುಗಳಿಂದಾಗಿ ಕೋಚ್ ರಿಕಿ ಪಾಂಟಿಂಗ್ ಅವರ ಸಹನೆ ಮೀರಿತು. ಪರಿಣಾಮವಾಗಿ, ತಕ್ಷಣವೇ ಶಶಾಂಕ್ ಅವರನ್ನು ಮೈದಾನದಿಂದ ಹಿಂದಕ್ಕೆ ಕರೆಸಿಕೊಂಡು, ಅವರ ಸ್ಥಾನದಲ್ಲಿ ಯುವ ಆಟಗಾರ ಸೂರ್ಯನ್ಶ್ ಶೆಡ್ಗೆ ಅವರನ್ನು ಬದಲಿ ಫೀಲ್ಡರ್ ಆಗಿ ಕಣಕ್ಕಿಳಿಸಲಾಯಿತು.
ರಿಕಿ ಪಾಂಟಿಂಗ್ ಅಸಮಾಧಾನ ಮತ್ತು ಅಭಿಮಾನಿಗಳ ಟ್ರೋಲ್
ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ತಂಡದ ಕಳಪೆ ಫೀಲ್ಡಿಂಗ್ ಬಗ್ಗೆ ಪ್ರಸಾರಕರು ಕೋಚ್ ರಿಕಿ ಪಾಂಟಿಂಗ್ ಅವರನ್ನು ಪ್ರಶ್ನಿಸಿದಾಗ, ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದರು. “ನಾವು ಫೀಲ್ಡಿಂಗ್ನಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ. ಹಿಂದಿನ ಪಂದ್ಯದ ಕೊನೆಯ ಹಂತದಲ್ಲಿ ಹಾಗೂ ಇಂದಿನ ಪಂದ್ಯದ ಆರಂಭದಲ್ಲಿ ನಾವು ಫೀಲ್ಡಿಂಗ್ನಲ್ಲಿ ಎಡವಿದ್ದೇವೆ” ಎಂದು ಪಾಂಟಿಂಗ್ ಒಪ್ಪಿಕೊಂಡರು. ಲಕ್ನೋ ವಿರುದ್ಧದ ಪಂದ್ಯದಲ್ಲಿ ತಂಡ ಭರ್ಜರಿ ಜಯ ಸಾಧಿಸಿದ್ದರೂ, ಶಶಾಂಕ್ ಅವರ ಸತತ ಮೂರು ಕ್ಯಾಚ್ ಡ್ರಾಪ್ಗಳಿಂದ ಪಾಂಟಿಂಗ್ ತೀವ್ರ ಕೋಪಗೊಂಡಿದ್ದರು ಎಂಬುದು ಈಗ ಸ್ಪಷ್ಟವಾಗಿದೆ. ಇತ್ತ, ಸಾಮಾಜಿಕ ಜಾಲತಾಣಗಳಲ್ಲಿ ಪಂಜಾಬ್ ಅಭಿಮಾನಿಗಳು ಶಶಾಂಕ್ ಸಿಂಗ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ. “ಶಶಾಂಕ್, ಕೆಲವು ದಿನಗಳ ಕಾಲ ಪಾಂಟಿಂಗ್ ಅವರ ಕಣ್ಣಿಗೆ ಬೀಳದಂತೆ ಅಡಗಿಕೋ” ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ಸನ್ರೈಸರ್ಸ್ ವಿರುದ್ಧ ಸೇಡು ತೀರಿಸಿಕೊಂಡ 15 ವರ್ಷದ ಪೋರ : 36 ಎಸೆತಗಳಲ್ಲೇ ಸಿಡಿಯಿತು ಶತಕ ‘ವೈಭವ’



















