ಕೊಪ್ಪಳ : ಅಂಬೇಡ್ಕರ್ ಸೇರಿದಂತೆ ಮಹಾನ್ ನಾಯಕರ ಭಾವಚಿತ್ರಗಳಿಗೆ ಸೆಗಣಿ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಕನೂರ ತಾಲೂಕಿನ ವೀರಾಪೂರ ಗ್ರಾಮದ ಶಿವಕುಮಾರ್ ಬಂಧಿತ ಆರೋಪಿ.
ಕಳೆದ ಏಪ್ರಿಲ್ 16ರಂದು ಈ ಘಟನೆ ನಡೆದಿತ್ತು. ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ದೇಣಿಗೆ ಸಂಗ್ರಹ ಮಾಡಲಾಗಿದ್ದು, ಸುಮಾರು 14 ಸಾವಿರ ರೂಪಾಯಿ ಸಂಗ್ರಹವಾಗಿತ್ತು. ಅದರಲ್ಲಿ 7 ಸಾವಿರ ರೂಪಾಯಿಯನ್ನು ಶಿವಕುಮಾರ್ ಸ್ವಂತ ಬಳಕೆಗೆ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ನಂತರ ಹಣವನ್ನು ಮರಳಿ ನೀಡಲು ಸಾಧ್ಯವಾಗದೇ, ಜಯಂತಿ ಕಾರ್ಯಕ್ರಮ ಮುಂದೂಡಲು ಯತ್ನಿಸಿ, ಅಂಬೇಡ್ಕರ್ ಸೇರಿದಂತೆ ಗಣ್ಯರ ಭಾವಚಿತ್ರಗಳಿಗೆ ಸೆಗಣಿ ಎರಚಿದ ಎಂಬ ಆರೋಪ ಕೇಳಿಬಂದಿದೆ.
ಏಪ್ರಿಲ್ 20ರಂದು ನಡೆಯಬೇಕಿದ್ದ ಜಯಂತಿ ಕಾರ್ಯಕ್ರಮದ ಹಿನ್ನೆಲೆ ಈ ದುಷ್ಕೃತ್ಯ ನಡೆದಿತ್ತು. ಘಟನೆಗೆ ಆಕ್ರೋಶಗೊಂಡ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಕರಣ ದಾಖಲಿಸಿಕೊಂಡ ಕುಕನೂರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬ್ಯಾಂಕಿಂಗ್ ವಲಯಕ್ಕೆ ‘ಕ್ಲೌಡ್ ಮೈಥೋಸ್’ AI ಕಂಟಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಮಹತ್ವದ ಸಭೆ



















