ಬೆಂಗಳೂರು : ನಗರದಲ್ಲಿ ಬೆಚ್ಚಿಬೀಳಿಸುವಂತಹ ಕಿಡ್ನಾಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ವಂತ ಅಕ್ಕನೇ ತನ್ನ ತಂಗಿಯನ್ನು ಗ್ಯಾಂಗ್ ಜೊತೆಗೂಡಿ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಂಗಿ ಪೃಥ್ವಿ ತನ್ನ ಅಕ್ಕ ಪ್ರಪುಲ್ಲಾ ಬಳಿ 9.5 ಲಕ್ಷ ರೂಪಾಯಿ ಸಾಲ ಪಡೆದಿದ್ದಳು. ಅದರಲ್ಲಿ ಈಗಾಗಲೇ 5 ಲಕ್ಷ ರೂಪಾಯಿ ಹಿಂತಿರುಗಿಸಿದ್ದರೂ, ಇನ್ನೂ 4.5 ಲಕ್ಷ ರೂಪಾಯಿ ಬಾಕಿ ಉಳಿದಿದ್ದ ತಂಗಿಯನ್ನು ಗ್ಯಾಂಗ್ ಜೊತೆಗೂಡಿ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಹೌದು.. ಬಾಕಿ ಹಣಕ್ಕಾಗಿ ಪ್ರಪುಲ್ಲಾ ತನ್ನ ತಂಗಿಯನ್ನೇ ಗ್ಯಾಂಗ್ ಮೂಲಕ ಕಿಡ್ನಾಪ್ ಮಾಡಿಸಿ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಹೆಬ್ಬಗೋಡಿ ಪ್ರದೇಶದಲ್ಲಿರುವ ಪೃಥ್ವಿಯ ಮನೆಗೆ ನುಗ್ಗಿದ ಆರೋಪಿಗಳು ದಂಪತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ.
ಕಿಡ್ನಾಪ್ ಮಾಡಿದ ಬಳಿಕ ದಂಪತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಣ ಕೊಡಬೇಕು ಎಂದು ಒತ್ತಾಯಿಸಿದ್ದು, ಹಣ ಕೊಡದಿದ್ದರೆ ಕೊಲೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೆಳಿಬಂದಿದೆ.
ಈ ಕಿಡ್ನಾಪ್ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆರೋಪಿಗಳು ಮನೆಗೆ ನುಗ್ಗಿ ದಂಪತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳು ಸಾಕ್ಷಿಯಾಗಿ ಪೊಲೀಸರ ಕೈಗೆ ಸಿಕ್ಕಿವೆ.
ಪೃಥ್ವಿ ಕಾಣೆಯಾಗಿರುವ ಮಾಹಿತಿ ತಿಳಿದ ನಂತರ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಕಾರ್ಯಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೆ ಒಳಗಾದ ಪೃಥ್ವಿ ಹಾಗೂ ಆಕೆಯ ಪತಿ ಅಭಿಜೀತ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ತುಮಕೂರಲ್ಲಿ ಹೃದಯಾಘಾತಕ್ಕೆ ನ್ಯಾಯಾಧೀಶೆ ಬಲಿ



















