ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಹೈವೋಲ್ಟೇಜ್ ಪಂದ್ಯವು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಒಂದೆಡೆ ಆರ್ ಸಿಬಿ ಬೃಹತ್ ಮೊತ್ತ ಕಲೆಹಾಕಿದರೆ, ಮತ್ತೊಂದೆಡೆ ತಂಡದ ಆಧಾರಸ್ತಂಭ ವಿರಾಟ್ ಕೊಹ್ಲಿ ತಮ್ಮದೇ ಆಟದ ಬಗ್ಗೆ ತೀವ್ರ ಅಸಮಾಧಾನಗೊಂಡು ಮೈದಾನದಲ್ಲೇ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರೂ, ಅವರ ಸ್ಟ್ರೈಕ್ ರೇಟ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಇದು ಟೀಕೆಗೂ ಗುರಿಯಾಗಿದೆ. ಕ್ರೀಸ್ನಲ್ಲಿ ಪರದಾಡಿದಂತೆ ಕಂಡ ಕೊಹ್ಲಿ, ವಿಕೆಟ್ ಒಪ್ಪಿಸಿದ ಬಳಿಕ ತೀವ್ರ ಹತಾಶರಾಗಿ ಪೆವಿಲಿಯನ್ಗೆ ಮರಳುವಾಗ ತಮ್ಮ ಗ್ಲೌಸ್ ಹಾಗೂ ಹೆಲ್ಮೆಟ್ ಅನ್ನು ಕೋಪದಿಂದ ಬಿಸಾಕಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕೊಹ್ಲಿ ಕೋಪಕ್ಕೆ ಕಾರಣವೇನು?
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಮತ್ತು ರಜತ್ ಪಾಟಿದಾರ್ ಮುಂಬೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಇಬ್ಬರೂ 200ಕ್ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿ ಅರ್ಧಶತಕ ಸಿಡಿಸಿದರು. ಆದರೆ, ಇನ್ನೊಂದೆಡೆ ಕೊಹ್ಲಿ ರನ್ ಕಲೆಹಾಕಲು ಪರದಾಡಿದರು. 38 ಎಸೆತಗಳನ್ನು ಎದುರಿಸಿದ ಕೊಹ್ಲಿ, 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಆದರೆ ಅವರ ಸ್ಟ್ರೈಕ್ ರೇಟ್ ಕೇವಲ 131.58 ರಷ್ಟಿತ್ತು.
ಪರಿಸ್ಥಿತಿಗೆ ತಕ್ಕಂತೆ ವೇಗವಾಗಿ ರನ್ ಗಳಿಸಲು, ಬೌಂಡರಿಗಳನ್ನು ಸಿಡಿಸಲು ಸಾಧ್ಯವಾಗದ ತಮ್ಮದೇ ವೈಫಲ್ಯದ ಬಗ್ಗೆ ಕೊಹ್ಲಿಗೆ ತೀವ್ರ ಅಸಮಾಧಾನವಿತ್ತು. 37ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದ ಬಳಿಕವೂ ಅವರು ಎಂದಿನಂತೆ ಸಂಭ್ರಮಿಸಲಿಲ್ಲ. ಆದರೆ ಗ್ಯಾಲರಿಯಲ್ಲಿದ್ದ ಅವರ ಪತ್ನಿ ಅನುಷ್ಕಾ ಶರ್ಮಾ ಮಾತ್ರ ಪತಿಯ ಮೈಲುಗಲ್ಲಿಗೆ ಹರ್ಷ ವ್ಯಕ್ತಪಡಿಸಿದ್ದರು.
ಹಾರ್ದಿಕ್ಗೆ ವಿಕೆಟ್, ಆಕ್ರೋಶದ ಕಟ್ಟೆ ಒಡೆಯಿತು!
ಅರ್ಧಶತಕ ಪೂರೈಸಿದ ಮರು ಎಸೆತದಲ್ಲೇ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಎಸೆದ ಫುಲ್ ಟಾಸ್ ಎಸೆತವನ್ನು ಬೃಹತ್ ಹೊಡೆತಕ್ಕೆ ಯತ್ನಿಸಿದ ಕೊಹ್ಲಿ, ಟೈಮಿಂಗ್ ತಪ್ಪಿ ಬೌಂಡರಿ ಲೈನ್ ಬಳಿ ಸೂರ್ಯಕುಮಾರ್ ಯಾದವ್ಗೆ ಕ್ಯಾಚಿತ್ತು ನಿರ್ಗಮಿಸಿದರು. ವಿಕೆಟ್ ಒಪ್ಪಿಸಿ ಹೊರನಡೆಯುವಾಗ ಅಸಮಾಧಾನದ ಕಟ್ಟೆ ಒಡೆದಿತ್ತು. ಬೌಂಡರಿ ಲೈನ್ ದಾಟುತ್ತಿದ್ದಂತೆಯೇ ಮೊದಲು ತಮ್ಮ ಗ್ಲೌಸ್ಗಳನ್ನು ಕಿತ್ತು ಎಸೆದರು. ನಂತರ ಅದೇ ಕೋಪದಲ್ಲಿ ಹೆಲ್ಮೆಟ್ ಅನ್ನು ಕೂಡ ಬಿಸಾಕಿ ಪೆವಿಲಿಯನ್ ಮೆಟ್ಟಿಲೇರಿದರು.
ಎರಡು ಡಿಆರ್ಎಸ್ (DRS) ಕೂಡ ವ್ಯರ್ಥ
ಕೊಹ್ಲಿ ಅವರ ಹತಾಶೆಗೆ ಮತ್ತೊಂದು ಕಾರಣ ಮೈದಾನದಲ್ಲಿನ ಅಂಪೈರ್ ತೀರ್ಪುಗಳು. ತಮ್ಮ ಬ್ಯಾಟಿಂಗ್ ವೇಳೆ ವೈಡ್ ಬಾಲ್ಗೆ ಸಂಬಂಧಿಸಿದಂತೆ ಅಂಪೈರ್ ತೀರ್ಪನ್ನು ಪ್ರಶ್ನಿಸಿ ಕೊಹ್ಲಿ ಎರಡು ಬಾರಿ ಡಿಆರ್ಎಸ್ (DRS) ಮೊರೆಹೋಗಿದ್ದರು. ಆದರೆ ಎರಡೂ ಬಾರಿಯೂ ತೀರ್ಪು ಅವರ ವಿರುದ್ಧವಾಗಿಯೇ ಬಂದಿದ್ದರಿಂದ ಆರ್ಸಿಬಿಯ ಎರಡು ರಿವ್ಯೂಗಳು ವ್ಯರ್ಥವಾದವು. ಇದು ಕೂಡ ಅವರ ಸಿಟ್ಟನ್ನು ಹೆಚ್ಚಿಸಿತ್ತು. ಇಷ್ಟೆಲ್ಲಾ ಹೈಡ್ರಾಮಾಗಳ ನಡುವೆಯೂ, ಫಿಲ್ ಸಾಲ್ಟ್ (78 ರನ್), ರಜತ್ ಪಾಟಿದಾರ್ (53 ರನ್) ಹಾಗೂ ಕೊಹ್ಲಿ (50 ರನ್) ಅವರ ನೆರವಿನಿಂದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 240 ರನ್ಗಳ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ : ಡಗೌಟ್ನಲ್ಲಿ ಮೊಬೈಲ್ ಫೋನ್ ಬಳಸಿ ಸಿಕ್ಕಿಬಿದ್ದ ರಾಜಸ್ಥಾನ್ ರಾಯಲ್ಸ್ ಮ್ಯಾನೇಜರ್ – ಬಿಸಿಸಿಐ ತನಿಖೆ!



















