ದಾವಣಗೆರೆ : ಹರಿಹರ ತಾಲೂಕಿನ ಹಣಗವಾಡಿ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹಣಕಾಸು ಅವ್ಯವಹಾರ ಆರೋಪಗಳ ಹಿನ್ನೆಲೆ, ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ಉಚ್ಛಾಟನೆ ಮಾಡುವ ನಿರ್ಧಾರವನ್ನು ಧರ್ಮದರ್ಶಿ ಸಮಿತಿ ಕೈಗೊಂಡಿದೆ.
ಒಟ್ಟು 15 ಸದಸ್ಯರಿರುವ ಧರ್ಮದರ್ಶಿ ಸಮಿತಿಯಲ್ಲಿ ನಡೆದ ಸಭೆಯಲ್ಲಿ 12 ಮಂದಿ ಸ್ವಾಮೀಜಿಗಳ ಉಚ್ಛಾಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಮಿತಿ ಸದಸ್ಯರಾದ ಬಸವರಾಜ್ ದಿಂಡೂರ ಮತ್ತು ಬಾವಿ ಬೆಟ್ಟಪ್ಪ ತಿಳಿಸಿದ್ದಾರೆ.
ಕಳೆದ 12 ದಿನಗಳಿಂದ ಮಠದಲ್ಲಿ ಸಮಿತಿಯ ಸಭೆ ನಡೆಯುತ್ತಿದ್ದು, ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು ಹಾಗೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಭಕ್ತರು ಮತ್ತು ಆಡಳಿತ ಮಂಡಳಿಯ ಒಂದು ವಲಯ ಹಲವು ತಿಂಗಳುಗಳಿಂದ ‘ಲೆಕ್ಕ ಕೊಡಿ’ ಅಭಿಯಾನ ನಡೆಸುತ್ತಿದ್ದರು.
ಇಂದು ಪರಿಸ್ಥಿತಿ ತೀವ್ರಗೊಂಡು, ಆಕ್ರೋಶಗೊಂಡ ಭಕ್ತರು ಮಠದ ಆವರಣಕ್ಕೆ ನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಸಮಿತಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಇನ್ನೊಂದೆಡೆ, ಸಂಸ್ಥಾಪಕ ಟ್ರಸ್ಟಿ ಎಚ್.ಪಿ. ಬಸವರಾಜ್ ಸಮಿತಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಭೆ ನಡೆಸುವ ಮುನ್ನ ನಿಯಮಾನುಸಾರ ನೋಟಿಸ್ ನೀಡಲಾಗಿಲ್ಲ ಹಾಗೂ ಸ್ವಾಮೀಜಿ ವಿರುದ್ಧದ ಆರೋಪಗಳ ಪಟ್ಟಿಯನ್ನೂ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಠದ ಆಸ್ತಿ ರಕ್ಷಣೆ ಮತ್ತು ಮುಂದಿನ ಪೀಠಾಧಿಪತಿ ನೇಮಕದ ಬಗ್ಗೆ ಸಮಿತಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಇದಲ್ಲದೆ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು 3 ಕೋಟಿ ರೂ. ನೀಡುವಂತೆ ಬ್ಲ್ಯಾಕ್ಮೇಲ್ ಮಾಡಿದ ಆರೋಪದಲ್ಲಿ ಮಹಿಳೆ ಸೇರಿ ನಾಲ್ವರ ವಿರುದ್ಧ ದೂರು ನೀಡಿರುವುದೂ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ : ಜನರ ಮೇಲೆ ಕರಗದ ವೀರಕುಮಾರನ ಪೌರುಷ


















