ಚಿಕ್ಕಬಳ್ಳಾಪುರ : ಜನರ ಮೇಲೆ ಕರಗದ ವೀರಕುಮಾರ ಪೌರುಷ ಮೆರೆದಿದ್ದು, ಕರಗದ ವೀರಕುಮಾರ ದೊಡ್ಡ ಚಾಟಿಯಿಂದ ಜನರ ಮೇಲೆ ಬೀಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿಯ 64ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧರ್ಮರಾಯರ ಹೂವಿನ ಕರಗ ಉತ್ಸವದ ವೇಳೆ ನಡೆದಿದೆ.
ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿ ನೆನ್ನೆ ರಾತ್ರಿ ಕರಗ ಮುಗಿದ ಬಳಿಕ, ಕರಗದ ವೀರಕುಮಾರ ಆವೇಶಗೊಂಡು ಜನರ ಮೇಲೆ ದೊಡ್ಡ ಚಾಟಿಯಿಂದ ಹಿಗ್ಗಾಮುಗ್ಗಾ ಬೀಸಿದ್ದಾನೆ. ಮಕ್ಕಳು, ಮಹಿಳೆಯರು ಎಂಬುದನ್ನೂ ಪರಿಗಣಿಸದೆ ಚಾಟಿಯಿಂದ ದಾಳಿ ನಡೆಸಿದ್ದರಿಂದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಘಟನೆ ಸ್ಥಳದಲ್ಲಿದ್ದವರಲ್ಲಿ ಆತಂಕ ಮೂಡಿಸಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕರಗದ ವೀರಕುಮಾರನ ವರ್ತನೆಗೆ ನೆಟ್ಟಿಗರು ಖಂಡನೆ ವ್ಯಕ್ತಪಡಿಸಿದ್ದಾರೆ.
ಮೊನ್ನೆಯಷ್ಟೇ ಕರಗದ ಪೂಜಾರಿ ಧರ್ಮೇಂದ್ರ ನೆರೆದಿದ್ದ ವ್ಯಕ್ತಿಯ ಮೇಲೆ ದಂಡದಿಂದ ಹಲ್ಲೆ ನಡೆಸಿದ ಘಟನೆ ಕೂಡ ನಡೆದಿದ್ದು, ಅದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮತ್ತೆ ಅದೇ ತಂಡದ ವೀರಕುಮಾರನಿಂದ ಇಂತಹ ಘಟನೆ ಸಂಭವಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಕಾಫಿನಾಡಲ್ಲಿ ಸಿಎಂ ಪತ್ನಿ ಟೆಂಪಲ್ ರನ್



















