ಬೆಂಗಳೂರು ; ನಗರದ ಪ್ರಮುಖ ಪ್ರದೇಶದಲ್ಲಿರುವ ಬೆಂಗಳೂರು ಗಾಲ್ಫ್ ಕ್ಲಬ್ ಜಾಗದ ಬಗ್ಗೆ ಹಲವು ವರ್ಷಗಳಿಂದ ಮುಂದುವರಿದಿದ್ದ ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಕಂದಾಯ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಗಾಲ್ಫ್ ಕ್ಲಬ್ ವ್ಯಾಪ್ತಿಯಲ್ಲಿರುವ ಸುಮಾರು 60 ಎಕರೆ ಭೂಮಿಯ ಗಡಿ ಗುರುತಿಸಲು ಸರ್ವೇ ನಡೆಸುವಂತೆ ಕಂದಾಯ ಇಲಾಖೆ ಆದೇಶಿಸಿದೆ. ಈ ಮೂಲಕ ಸರ್ಕಾರಿ ಜಮೀನಿನ ನಿಖರ ಅಳತೆ ಮತ್ತು ಗಡಿ ಸ್ಪಷ್ಟೀಕರಣಕ್ಕೆ ಚಾಲನೆ ಸಿಕ್ಕಿದೆ.
ಸರ್ವೇ ಕಾರ್ಯಕ್ಕೆ ಚಾಲನೆ
ಹಲವು ದಿನಗಳ ಬಳಿಕ ಇದೀಗ ಗಾಲ್ಫ್ ಕ್ಲಬ್ ಜಾಗದ ಅಳತೆ ಕಾರ್ಯ ಆರಂಭವಾಗುತ್ತಿದೆ. ಸರ್ವೇ ವೇಳೆ ಭೂಮಿಯ ಮೂಲ ದಾಖಲೆಗಳ ಪರಿಶೀಲನೆ,
ಗಡಿ ಗುರುತುಪಡಿಸುವಿಕೆ, ಅಕ್ರಮ ಹಿಡುವಳಿಗಳ ಪತ್ತೆ, ಈ ಎಲ್ಲಾ ಹಂತಗಳನ್ನು ಕಂದಾಯ ಇಲಾಖೆ ಕೈಗೆತ್ತಿಕೊಂಡಿದೆ.
ಒತ್ತುವರಿ ವಿರುದ್ಧ ಬಿಗಿ ಕ್ರಮ:
ಸರ್ಕಾರದ ಜಮೀನಿನಲ್ಲಿ ಯಾವುದೇ ರೀತಿಯ ಒತ್ತುವರಿ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸೂಚಿಸಿದೆ. ಸರ್ವೇ ವರದಿ ಆಧಾರದಲ್ಲಿ ಅಕ್ರಮಗಳನ್ನು ತೆರವುಗೊಳಿಸುವ ಸಾಧ್ಯತೆಯೂ ಇದೆ.
ಜಿಬಿಎ ಅಧಿಕಾರಿಗಳಿಗೆ ಪತ್ರ:
ಸರ್ವೇ ಕಾರ್ಯ ಸುಗಮವಾಗಿ ನಡೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪೂರ್ವ ವಲಯದ ಆಯುಕ್ತರಿಗೆ ಕಂದಾಯ ಇಲಾಖೆ ಪತ್ರ ಬರೆದಿದೆ. ಸಂಬಂಧಿತ ಅಧಿಕಾರಿಗಳು ಸಹಕಾರ ನೀಡುವಂತೆ ಸೂಚಿಸಲಾಗಿದೆ.
ಗಾಲ್ಫ್ ಅಸೋಸಿಯೇಷನ್ ಆದಾಯ ಪರಿಶೀಲನೆ:
ಗಾಲ್ಫ್ ಅಸೋಸಿಯೇಷನ್ನ ಆದಾಯ ಮತ್ತು ಹಣಕಾಸು ವ್ಯವಹಾರಗಳನ್ನು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಇದು ಭೂಮಿ ಬಳಕೆ ಹಾಗೂ ಆರ್ಥಿಕ ಚಟುವಟಿಕೆಗಳ ಪಾರದರ್ಶಕತೆಯನ್ನು ಖಚಿತಪಡಿಸುವ ಭಾಗವಾಗಿದೆ.
ಸರ್ಕಾರದ ಸ್ಪಷ್ಟ ಸಂದೇಶ
ಈ ಕ್ರಮದ ಮೂಲಕ ಸರ್ಕಾರವು ಸರ್ಕಾರಿ ಭೂಮಿ ರಕ್ಷಣೆಗೆ ಆದ್ಯತೆ ನೀಡಿದೆ. ಅಕ್ರಮ ಹಿಡುವಳಿಗಳ ವಿರುದ್ಧ ಕಟ್ಟುನಿಟ್ಟಿನ ನಿಲುವು ಗುತ್ತಿಗೆ ಹಾಗೂ ಮಂಜೂರಾತಿಗಳ ಪರಿಶೀಲನೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಸರ್ವೇ ಕಾರ್ಯದಿಂದ ಬೆಂಗಳೂರು ನಗರದ ಪ್ರಮುಖ ಸರ್ಕಾರಿ ಜಮೀನಿನ ಮೇಲಿನ ನಿಯಂತ್ರಣ ಬಲಪಡಿಸುವುದು ಹಾಗೂ ಭವಿಷ್ಯದ ಅಕ್ರಮಗಳನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ : ಕಾಫಿನಾಡಲ್ಲಿ ಸಿಎಂ ಪತ್ನಿ ಟೆಂಪಲ್ ರನ್


















