ಬಳ್ಳಾರಿ: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಈ ಸಲ ರಾಜ್ಯದಲ್ಲಿ ದಾಖಲೆಯ ರಿಸಲ್ಟ್ ಬಂದಿದ್ದು, ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ವಿಶೇಷ ಎಂಬಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಓರ್ವ ಕೈದಿ 80.1% ಅಂಕಗಳನ್ನು ಗಳಿಸುವ ಮೂಲಕ ಸದ್ಯ ರಾಜ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಶಿಕ್ಷಾಬಂಧಿ ಅಶೋಕ್ ಕುಮಾರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಿದ್ದಾರೆ. ಜೈಲಿನ ಪ್ರತ್ಯೇಕ ಸೆಲ್ನಲ್ಲಿಯೇ ಅಭ್ಯಾಸ ಮಾಡುತ್ತಿದ್ದರು. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ ಅಶೋಕ್ ಕುಮಾರ್ 600ಕ್ಕೆ 481 ಅಂಕ ಪಡೆದುಕೊಂಡಿದ್ದಾರೆ. ಕನ್ನಡ 82, ಇಂಗ್ಲಿಷ್ 69, ಇತಿಹಾಸ 94, ಅರ್ಥಶಾಸ್ತ್ರ 84, ಸಮಾಜಶಾಸ್ತ್ರ 77, ರಾಜ್ಯಶಾಸ್ತ್ರ 75 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಶಿಕ್ಷಾಬಂಧಿ ಅಶೋಕ್ ಕುಮಾರ್ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಯಾಗಿದ್ದು, ಹೀಗಾಗಿ ಕಳೆದ 7 ವರ್ಷಗಳಿಂದ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇವರು ಓದುವ ಅಭ್ಯಾಸ ರೂಢಿಸಿಕೊಂಡಿದ್ದರು. ಹೀಗಾಗಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಇದೀಗ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ಕೈದಿ ಸಾಧನೆ
ಇನ್ನು ಈ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೀವಾವಧಿ ಶಿಕ್ಷೆಗೊಳಗಾದ ಕೈದಿಗಳಲ್ಲಿ ಒಬ್ಬರಾದ ಅಶೋಕ್, ಪಿಯುಸಿ ಪರೀಕ್ಷೆಯಲ್ಲಿ 80.1% ಅಂಕಗಳನ್ನು ಪಡೆದಿರುವುದು ಹೃದಯಸ್ಪರ್ಶಿಯಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಜೈಲು ಬೆಂಗಾವಲಿನೊಂದಿಗೆ ಪರೀಕ್ಷೆಗೆ ಹಾಜರಾಗಿದ್ದರು. ಮುಂದಿನ ಉತ್ತಮ ಭವಿಷ್ಯದ ಬಗ್ಗೆಗಿನ ಅವರ ಭರವಸೆಯನ್ನು ಜೈಲಿನ ಗೋಡೆಗಳು ಇನ್ನೂ ಹುಸಿಗೊಳಿಸಿಲ್ಲ ಎಂಬುವುದನ್ನು ಕಂಡು ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹುಲಿಕಲ್ ಘಾಟಿ ದುರಸ್ತಿ ವೇಳೆ ಮಣ್ಣು ಕುಸಿತ – ಮೂವರು ಕಾರ್ಮಿಕರು ಸಾವು, ನಾಲ್ವರಿಗೆ ಗಂಭೀರ ಗಾಯ



















