ಸಿಹೋರಾ : ಮಧ್ಯಪ್ರದೇಶದ ಸಿಹೋರಾ ರೈಲು ನಿಲ್ದಾಣದ ಸಮೀಪ ನಡೆದ ಘಟನೆಯೊಂದು ಎಲ್ಲ ಆ್ಯಕ್ಷನ್ ಸಿನಿಮಾಗಳ ದೃಶ್ಯಗಳನ್ನೂ ಮೀರುವಂತಿದೆ. ರೈಲಿನಲ್ಲಿ ಕಳ್ಳತನಕ್ಕೆ ಯತ್ನಿಸಿ, ಸಿಕ್ಕಿಬೀಳುವ ಭೀತಿಯಿಂದ ತಪ್ಪಿಸಿಕೊಳ್ಳಲು ಕೆರೆಯ ಹಾವಸೆ ಮತ್ತು ಕಮಲದ ಕಡ್ಡಿಯನ್ನೇ ಶ್ವಾಸನಾಳವನ್ನಾಗಿ ಬಳಸಿಕೊಂಡು ಐದು ಗಂಟೆಗಳ ಕಾಲ ನೀರಿನಡಿ ಅವಿತಿದ್ದ ಅಂತಾರಾಜ್ಯ ಖದೀಮನನ್ನು ಪೊಲೀಸರು ರೋಚಕ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಏಪ್ರಿಲ್ 6ರಂದು ನಡೆದ ಈ ಘಟನೆ ಈಗ ಬೆಳಕಿಗೆ ಬಂದಿದೆ. ರೇವಾ-ಇಟ್ವಾರಿ ಎಕ್ಸ್ಪ್ರೆಸ್ ರೈಲಿನ ಎ-2 ಎಸಿ ಕೋಚ್ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಪರ್ಸ್ ಕದಿಯಲು ಹರ್ವಿಂದರ್ ಸಿಂಗ್ ಎಂಬಾತ ಯತ್ನಿಸಿದ್ದ. ಆದರೆ ಮಹಿಳೆ ಎಚ್ಚರಗೊಂಡ ಕಾರಣ ಗಾಬರಿಗೊಂಡ ಆತ, ರೈಲು ಸಿಹೋರಾ ನಿಲ್ದಾಣದ ಬಳಿ ನಿಧಾನವಾಗುತ್ತಿದ್ದಂತೆ ಹಾರಿದ್ದಾನೆ. ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಆತನನ್ನು ಬೆನ್ನಟ್ಟಿದಾಗ, ಸಮೀಪದಲ್ಲಿದ್ದ ದಟ್ಟವಾದ ಹಾವಸೆಯಿಂದ ಕೂಡಿದ ಕೆರೆಗೆ ಆತ ಜಿಗಿದಿದ್ದಾನೆ. ಪೊಲೀಸರು ಕೆರೆಯ ದಂಡೆಗೆ ಬಂದು ನೋಡಿದಾಗ ಆತ ಎಲ್ಲಿಯೂ ಕಾಣಿಸಲಿಲ್ಲ, ನೀರಿನ ಮೇಲೆ ಹಾವಸೆ ಮಾತ್ರ ತೇಲುತ್ತಿತ್ತು.
ಕಮಲದ ಕಡ್ಡಿಯ ಮೂಲಕ ಉಸಿರಾಟ
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಈತ ಕೆರೆಯ ಆಳಕ್ಕೆ ಇಳಿದು, ಕಮಲದ ಹೂವಿನ ಪೊಳ್ಳು ಕಡ್ಡಿಯನ್ನು ನೀರಿನ ಮೇಲ್ಮೈಗೆ ಬರುವಂತೆ ಹಿಡಿದು ಅದರ ಮೂಲಕ ಉಸಿರಾಡುತ್ತಿದ್ದ. ಹೊರಗಿನ ಜಗತ್ತಿಗೆ ಆತ ಕಾಣಿಸದಿದ್ದರೂ, ಸತತ ಐದು ಗಂಟೆಗಳ ಕಾಲ ನೀರಿನ ಅಡಿಯಲ್ಲೇ ಇದ್ದು ಪೊಲೀಸರನ್ನು ಹೈರಾಣಾಗಿಸಿದ್ದಾನೆ. ಕೊನೆಗೆ ಪೊಲೀಸರು ಮುಳುಗುತಜ್ಞರನ್ನು ಕರೆಸಿ ಕೆರೆಯಲ್ಲಿ ಶೋಧ ನಡೆಸಿದಾಗ, ಹಾವಸೆಯ ಕೆಳಗೆ ಅಡಗಿದ್ದ ಈತನನ್ನು ಪತ್ತೆಹಚ್ಚಿ ಹೊರಕ್ಕೆ ಎಳೆದಿದ್ದಾರೆ.
400ಕ್ಕೂ ಹೆಚ್ಚು ಕಳ್ಳತನ ಮಾಡಿರುವ ಮಾಜಿ ಕೌನ್ಸಿಲರ್!
ಬಂಧನದ ನಂತರ ಈತ ತನ್ನನ್ನು ತಾನು ‘ಬಬ್ಲು’ ಎಂದು ಹೇಳಿಕೊಳ್ಳುವ ಮೂಲಕ ನೈಜ ಗುರುತು ಮರೆಮಾಚಿದ್ದ. ಆದರೆ ಆರ್ಪಿಎಫ್ ಇನ್ಸ್ಪೆಕ್ಟರ್ ರಾಜೀವ್ ಖರಾಬ್ ಅವರಿಗೆ ಆತನ ಮುಖ ಪರಿಚಿತವೆನಿಸಿ ‘ಸನ್ನಿ’ ಎಂದು ಕರೆದಾಗ ಆತ ಬೆಚ್ಚಿಬಿದ್ದಿದ್ದಾನೆ. ತನಿಖೆಯ ವೇಳೆ ಈತನ ಅಸಲಿ ಹೆಸರು ಹರ್ವಿಂದರ್ ಸಿಂಗ್ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿಯಾದ ಈತ ಕೇರಳದಿಂದ ಜಮ್ಮುವಿನವರೆಗೆ ದೇಶಾದ್ಯಂತ 400ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅಚ್ಚರಿಯ ವಿಷಯವೆಂದರೆ ಈತ 2017ರಲ್ಲಿ ಸ್ವತಂತ್ರ ವಾರ್ಡ್ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದಾನೆ.
ಡಿಜಿಟಲ್ ಹೆಜ್ಜೆ ಬಿಡದ ಚಾಣಾಕ್ಷ
ಹರ್ವಿಂದರ್ ಅತ್ಯಂತ ಚಾಣಾಕ್ಷತನದಿಂದ ಅಪರಾಧ ಎಸಗುತ್ತಿದ್ದ. ಸಿಸಿಟಿವಿ ಕ್ಯಾಮೆರಾಗಳು ಅಳವಡಿಕೆಯಾದ ನಂತರ ಈತ ಟಿಕೆಟ್ ಕಾಯ್ದಿರಿಸುವುದನ್ನೇ ನಿಲ್ಲಿಸಿದ್ದ. ಟಿಕೆಟ್ ಪಡೆದರೆ ಅಥವಾ ಆನ್ಲೈನ್ ಬುಕಿಂಗ್ ಮಾಡಿದರೆ ತನ್ನ ಗುರುತು ಸಿಗುತ್ತದೆ ಎಂಬ ಕಾರಣಕ್ಕೆ ಟಿಕೆಟ್ ರಹಿತವಾಗಿ ಎಸಿ ಕೋಚ್ಗಳಲ್ಲಿ ಸಂಚರಿಸುತ್ತಿದ್ದ. ರೈಲ್ವೆ ಶೌಚಾಲಯಗಳಲ್ಲಿ ಅವಿತುಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ. ಈತನ ಮೇಲೆ ಈಗಾಗಲೇ ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ 21ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸದ್ಯ ಈ ‘ಲೋಟಸ್ ಹೈಸ್ಟ್’ ಖದೀಮ ಜೈಲು ಪಾಲಾಗಿ ಕಂಬಿ ಎಣಿಸುತ್ತಿದ್ದಾನೆ.
ಇದನ್ನೂ ಓದಿ : ಸುಬ್ರಹ್ಮಣ್ಯ : ಮನೆಯಂಗಳದಲ್ಲಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ



















