ನವದೆಹಲಿ : ಬರೋಬ್ಬರಿ ಒಂದು ದಶಕದಿಂದ ನಡೆಯುತ್ತಿದ್ದ ದಂಪತಿಗಳ ನಡುವಿನ “ಮಹಾಭಾರತ” ಸದೃಶ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸುವ ಮೂಲಕ ಇದೀಗ ಅಂತ್ಯ ಹಾಡಿದೆ. ಪರಸ್ಪರರ ವಿರುದ್ಧ ಹೂಡಲಾಗಿದ್ದ ಸುಮಾರು 80ಕ್ಕೂ ಹೆಚ್ಚು ಪ್ರಕರಣಗಳನ್ನು ರದ್ದುಗೊಳಿಸಿದ ನ್ಯಾಯಾಲಯವು, ಪತ್ನಿಗೆ 5 ಕೋಟಿ ರೂಪಾಯಿಗಳ ಏಕಕಾಲದ ಪರಿಹಾರ ನೀಡುವಂತೆ ಪತಿಗೆ ಸೂಚಿಸಿ ವಿಚ್ಛೇದನ ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. “ಈ ಮದುವೆಯು ಪ್ರಾಯೋಗಿಕವಾಗಿ ಎಲ್ಲಾ ಅರ್ಥದಲ್ಲೂ ಅಂತ್ಯಗೊಂಡಿದೆ” ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ಈ ದೀರ್ಘಕಾಲದ ವಿವಾದಕ್ಕೆ ಶಾಶ್ವತ ಪರಿಹಾರ ನೀಡಲು ಮತ್ತು ಪೂರ್ಣ ಪ್ರಮಾಣದ ನ್ಯಾಯ ಒದಗಿಸಲು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿ ತೀರ್ಪು ಪ್ರಕಟಿಸಿತು.
80 ಪ್ರಕರಣಗಳ ಕಾನೂನು ಜಾಲ
2010ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. 2016ರಲ್ಲಿ ಇವರ ನಡುವಿನ ಸಂಬಂಧ ಹದಗೆಟ್ಟು ಪರಸ್ಪರ ದೂರವಾಗಿದ್ದರು. ಅಂದಿನಿಂದ ಇಂದಿನವರೆಗೆ ಪತಿಯು ಪತ್ನಿ, ಆಕೆಯ ಕುಟುಂಬದವರು ಮತ್ತು ಆಕೆಯ ಪರ ವಕೀಲರ ವಿರುದ್ಧವೂ ಸೇರಿ ಒಟ್ಟು 80ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದರು. ಪತಿಯು ವೃತ್ತಿಯಲ್ಲಿ ವಕೀಲರಾಗಿದ್ದು, ಕಾನೂನು ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಪತ್ನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಮತ್ತು ಆರ್ಥಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಂಪನಿಗಳ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪತ್ನಿಯ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.
ಇತ್ತ ಪತಿಯು, ಪತ್ನಿಯು ತನ್ನ ವಿರುದ್ಧ ದಾಖಲಿಸಿದ ಸುಳ್ಳು ಪ್ರಕರಣಗಳಿಂದಾಗಿ ಜೈಲು ವಾಸ ಅನುಭವಿಸಬೇಕಾಯಿತು ಮತ್ತು ಇದರಿಂದ ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಬಂದಿದೆ ಎಂದು ವಾದಿಸಿದ್ದರು. ಪತ್ನಿಯು ಸುಶಿಕ್ಷಿತೆಯಾಗಿದ್ದು, ಆದಾಯವಿದ್ದರೂ ನಿರ್ಗತಿಕಳಂತೆ ನಟಿಸುತ್ತಿದ್ದಾರೆ ಎಂಬ ಅವರ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, “ಪತ್ನಿ ಎಷ್ಟೇ ಸುಶಿಕ್ಷಿತೆಯಾಗಿದ್ದರೂ, ಮಕ್ಕಳನ್ನು ಮತ್ತು ಪತ್ನಿಯನ್ನು ಸಲಹುವ ನೈತಿಕ ಹಾಗೂ ಕಾನೂನಾತ್ಮಕ ಜವಾಬ್ದಾರಿಯಿಂದ ಪತಿ ನುಣುಚಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿತು. ಅಂತಿಮವಾಗಿ ನ್ಯಾಯಾಲಯವು ಈ ದಂಪತಿಯ ವಿಚ್ಛೇದನಕ್ಕೆ ಒಪ್ಪಿಗೆ ನೀಡುವುದರ ಜೊತೆಗೆ ಈ ಕೆಳಗಿನ ಪ್ರಮುಖ ಆದೇಶಗಳನ್ನು ನೀಡಿತು:
- ಪತಿಯು ಒಂದು ವರ್ಷದೊಳಗಾಗಿ ತನ್ನ ಪತ್ನಿಗೆ 5 ಕೋಟಿ ರೂಪಾಯಿಗಳ ಒಟ್ಟು ಮೊತ್ತವನ್ನು ಪಾವತಿಸಬೇಕು.
- ಹಣ ಸಂದಾಯವಾದ ಎರಡು ವಾರಗಳಲ್ಲಿ ಪತ್ನಿಯು ತನ್ನ ಮಾವನ ಹೆಸರಿನಲ್ಲಿರುವ ಮುಂಬೈನ 3 ಬಿಎಚ್ಕೆ ಫ್ಲ್ಯಾಟ್ ಅನ್ನು ತೆರವುಗೊಳಿಸಬೇಕು.
- ಮಕ್ಕಳ ಸಂಪೂರ್ಣ ಪಾಲನೆ ಪತ್ನಿಯ ಬಳಿಯೇ ಇರಲಿದೆ, ಆದರೆ ಪತಿಗೆ ಮಕ್ಕಳನ್ನು ಭೇಟಿಯಾಗುವ ಹಕ್ಕನ್ನು ನೀಡಲಾಗಿದೆ.
- ಇಬ್ಬರೂ ಪರಸ್ಪರರ ವಿರುದ್ಧ ದಾಖಲಿಸಿರುವ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಇಂದೇ ಕೊನೆಗೊಳ್ಳಲಿವೆ.
ಈ ತೀರ್ಪಿನ ಮೂಲಕ ದಶಕದ ಕಾಲ ನಡೆದ ಸಂಕೀರ್ಣ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ ಪೂರ್ಣವಿರಾಮ ಇಟ್ಟಿದೆ.
ಇದನ್ನೂ ಓದಿ : ರಣರಣ ಬಿಸಿಲಿಗೆ ಕಂಗೆಟ್ಟ ಬೆಂಗಳೂರು..!



















