ಟೆಹ್ರಾನ್ : ಕಳೆದ 39 ದಿನಗಳಿಂದ ನಡೆಯುತ್ತಿದ್ದ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷಕ್ಕೆ ಇದೀಗ ತಾತ್ಕಾಲಿಕ ವಿರಾಮ ಬಿದ್ದಿದೆ. ಅಮೆರಿಕದೊಂದಿಗೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ತಮ್ಮ ಎಲ್ಲಾ ಸೇನಾ ಘಟಕಗಳಿಗೆ ಗುಂಡಿನ ದಾಳಿ ನಿಲ್ಲಿಸುವಂತೆ ಆದೇಶಿಸಿದ್ದಾರೆ.
ಆದರೆ, ಈ ಕದನ ವಿರಾಮವು ಯುದ್ಧದ ಅಂತ್ಯವಲ್ಲ ಮತ್ತು ಶತ್ರುಗಳು ಯಾವುದೇ ತಪ್ಪು ಹೆಜ್ಜೆ ಇಟ್ಟರೂ ತಕ್ಕ ಪ್ರತ್ಯುತ್ತರ ನೀಡಲು ನಮ್ಮ ಕೈಗಳು ಸದಾ ‘ಟ್ರಿಗರ್’ ಮೇಲಿರುತ್ತವೆ ಎಂದು ಇರಾನ್ ಗಂಭೀರ ಎಚ್ಚರಿಕೆ ನೀಡಿದೆ. ಇರಾನ್ನ ಸರ್ಕಾರಿ ಸ್ವಾಮ್ಯದ ಐಆರ್ಐಬಿ (IRIB) ವಾಹಿನಿಯಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ಮೊಜ್ತಬಾ ಖಮೇನಿ ಅವರು, “ಇದು ಯುದ್ಧದ ಅಂತ್ಯವಲ್ಲ, ಆದರೆ ಸರ್ವೋಚ್ಚ ನಾಯಕನ ಆದೇಶದಂತೆ ಎಲ್ಲಾ ಸೇನಾ ವಿಭಾಗಗಳು ಸದ್ಯಕ್ಕೆ ಗುಂಡಿನ ದಾಳಿ ನಿಲ್ಲಿಸಬೇಕು,” ಎಂದು ತಿಳಿಸಿದ್ದಾರೆ.
ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದು, ಅಮೆರಿಕ ಅಥವಾ ಇಸ್ರೇಲ್ ಕಡೆಯಿಂದ ಸಣ್ಣ ತಪ್ಪು ನಡೆದರೂ ಪೂರ್ಣ ಶಕ್ತಿಯೊಂದಿಗೆ ತಿರುಗೇಟು ನೀಡುವುದಾಗಿ ಸ್ಪಷ್ಟಪಡಿಸಿದೆ.
ಇರಾನ್ನ 10 ಅಂಶಗಳ ಪ್ರಸ್ತಾವನೆ
ಈ ಸಂಘರ್ಷದ ಕೇಂದ್ರಬಿಂದುವಾಗಿದ್ದ ಹೊರ್ಮುಜ್ ಜಲಸಂಧಿಯನ್ನು (Strait of Hormuz) ತಕ್ಷಣವೇ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಷರತ್ತಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ 10 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಪ್ರಸ್ತಾವನೆಯಲ್ಲಿ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಪ್ರಾಬಲ್ಯದ ಸಂರಕ್ಷಣೆ, ಅಮೆರಿಕ ಪಡೆಗಳು ಪ್ರಾಂತ್ಯದಿಂದ ಹೊರಹೋಗುವುದು, ಇರಾನ್ ಮೇಲಿನ ಎಲ್ಲಾ ನಿರ್ಬಂಧಗಳ ತೆರವು ಮತ್ತು ಯುದ್ಧದಿಂದ ಸಂಭವಿಸಿದ ನಷ್ಟಕ್ಕೆ ಪರಿಹಾರದಂತಹ ಕಠಿಣ ಬೇಡಿಕೆಗಳನ್ನು ಇರಾನ್ ಸೇರಿಸಿದೆ.
ಇಸ್ಲಾಮಾಬಾದ್ನಲ್ಲಿ ಶಾಂತಿ ಮಾತುಕತೆ
ಈ ಬಿಕ್ಕಟ್ಟನ್ನು ಶಮನಗೊಳಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದು, ಏ.10ರ ಶುಕ್ರವಾರ ಇಸ್ಲಾಮಾಬಾದ್ನಲ್ಲಿ ಉನ್ನತ ಮಟ್ಟದ ಮಾತುಕತೆಗಳು ಆರಂಭವಾಗಲಿವೆ. ಎರಡು ವಾರಗಳ ಕಾಲ ನಡೆಯಲಿರುವ ಈ ಮಾತುಕತೆಯಲ್ಲಿ 10 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಅಂತಿಮ ಒಪ್ಪಂದಕ್ಕೆ ಬರಲು ಉಭಯ ದೇಶಗಳು ಪ್ರಯತ್ನಿಸಲಿವೆ. ಒಂದು ವೇಳೆ ಈ ಮಾತುಕತೆಗಳು ಯಶಸ್ವಿಯಾಗಿ ಇರಾನ್ನ ಬೇಡಿಕೆಗಳು ಈಡೇರಿದರೆ ಮಾತ್ರ ಶಾಂತಿ ನೆಲೆಸಲಿದೆ, ಇಲ್ಲದಿದ್ದರೆ ಹೋರಾಟ ಮುಂದುವರಿಸುವುದಾಗಿ ಇರಾನ್ ಘೋಷಿಸಿದೆ.
ಟ್ರಂಪ್ ಹೇಳಿದ್ದೇನು?
ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, “ನಾವು ಈಗಾಗಲೇ ಬಹುತೇಕ ಮಿಲಿಟರಿ ಗುರಿಗಳನ್ನು ಸಾಧಿಸಿದ್ದೇವೆ. ಇರಾನ್ ನೀಡಿದ ಪ್ರಸ್ತಾವನೆಯು ಮಾತುಕತೆಗೆ ಸೂಕ್ತವಾಗಿದೆ,” ಎಂದು ಹೇಳಿದ್ದಾರೆ. ದಶಕಗಳ ಕಾಲದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಡಿಕೇರಿ ಬೆನ್ನಲ್ಲೇ ಚಂದ್ರದ್ರೋಣ ಪರ್ವತಕ್ಕೆ ಭೇಟಿ ನೀಡಿದ್ದ ಕೇರಳದ ಮತ್ತೋರ್ವ ಯುವತಿ ನಾಪತ್ತೆ!



















