ವಾಷಿಂಗ್ಟನ್ : ಇಡೀ ಜಗತ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಇರಾನ್ ವಿರುದ್ಧದ ಯುದ್ಧದ ಭವಿಷ್ಯದ ಕುರಿತು ಅಮೆರಿಕ ಮತ್ತು ಇಸ್ರೇಲ್ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಸೇನಾ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಕೊನೆಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತ್ರ “ಭಯೋತ್ಪಾದಕ ಆಡಳಿತವನ್ನು ಹತ್ತಿಕ್ಕುವವರೆಗೆ ಯುದ್ಧ ಮುಂದುವರಿಯಲಿದೆ” ಎಂದು ಘೋಷಿಸಿದ್ದಾರೆ.
2 ವಾರಗಳಲ್ಲಿ ಅಮೆರಿಕ ನಿರ್ಗಮನ?
ಶ್ವೇತಭವನದಲ್ಲಿ ಬುಧವಾರ ಮಾತನಾಡಿದ ಅಧ್ಯಕ್ಷ ಟ್ರಂಪ್, “ಆಪರೇಷನ್ ಎಪಿಕ್ ಫ್ಯೂರಿ” ಹೆಸರಿನಲ್ಲಿ ನಡೆಯುತ್ತಿರುವ ಇರಾನ್ ಮೇಲಿನ ದಾಳಿಯನ್ನು ಅಮೆರಿಕ ಶೀಘ್ರದಲ್ಲೇ ನಿಲ್ಲಿಸಲಿದೆ ಎಂದು ತಿಳಿಸಿದ್ದಾರೆ. “ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ನಾವು ಅಲ್ಲಿಂದ ನಿರ್ಗಮಿಸಲಿದ್ದೇವೆ. ಯುದ್ಧ ನಿಲ್ಲಿಸಲು ಇರಾನ್ ನಮ್ಮೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ” ಎಂದು ಅವರು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಇರಾನ್ ಮೇಲೆ ಕಠಿಣ ಷರತ್ತುಗಳನ್ನು ಹೇರಿದ್ದ ಟ್ರಂಪ್, ಈಗ ದಿಢೀರ್ ಆಗಿ ಯುದ್ಧದಿಂದ ಹಿಂದೆ ಸರಿಯುವ ಮಾತನಾಡುತ್ತಿರುವುದು ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ, ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಜವಾಬ್ದಾರಿಯನ್ನು ಆ ಮಾರ್ಗವನ್ನು ಬಳಸುವ ದೇಶಗಳೇ ಹೊರಬೇಕು, ಅಮೆರಿಕವೊಂದೇ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಮಿತ್ರರಾಷ್ಟ್ರಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪಟ್ಟು ಸಡಿಲಿಸದ ಇಸ್ರೇಲ್
ಟ್ರಂಪ್ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ತಮ್ಮ ಸೇನಾ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಸೋವರ್ ಹಬ್ಬದ ಮುನ್ನಾದಿನ ದೂರದರ್ಶನದ ಮೂಲಕ ಭಾಷಣ ಮಾಡಿದ ಅವರು, “ನಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ, ಇರಾನ್ನ ಭಯೋತ್ಪಾದಕ ಆಡಳಿತವನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೂ ನಾವು ವಿಶ್ರಮಿಸುವುದಿಲ್ಲ” ಎಂದು ಗುಡುಗಿದ್ದಾರೆ. ಈ ಯುದ್ಧದ ಮೂಲಕ ಮಧ್ಯಪ್ರಾಚ್ಯದ ಚಿತ್ರಣವನ್ನೇ ಬದಲಿಸಿದ್ದೇವೆ ಮತ್ತು ಇಸ್ರೇಲ್ ಪ್ರಾದೇಶಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಫೆಬ್ರವರಿ 28 ರಂದು ಟ್ರಂಪ್ ಮತ್ತು ನೆತನ್ಯಾಹು ಜಂಟಿಯಾಗಿ ಇರಾನ್ ಮೇಲೆ ದಾಳಿ ಆರಂಭಿಸಿದ್ದರು. ಈ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಆದರೆ, ಈ ಯುದ್ಧಕ್ಕೆ ಟ್ರಂಪ್ ಅವರನ್ನು ಒಪ್ಪಿಸಿದ್ದು ನೆತನ್ಯಾಹು ಅವರೇ ಎಂಬ ವರದಿಗಳು ಈಗ ಹರಿದಾಡುತ್ತಿವೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಈ ವಿಚಾರವಾಗಿ ನೆತನ್ಯಾಹು ಅವರ ಮೇಲೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇರಾನ್ನಲ್ಲಿ ಆಡಳಿತ ಬದಲಾವಣೆ ಸುಲಭ ಎಂದು ನೆತನ್ಯಾಹು ಅಮೆರಿಕಕ್ಕೆ ತಪ್ಪು ಮಾಹಿತಿ ನೀಡಿದ್ದರು ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಇದು ಅಮೆರಿಕ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಬಿರುಕನ್ನು ಎತ್ತಿ ತೋರಿಸಿದೆ.
ಇದನ್ನೂ ಓದಿ : ವಾಯವ್ಯ ಸಾರಿಗೆ ಹುದ್ದೆ ನೇಮಕಾತಿ ಪರೀಕ್ಷೆ ಮುಂದೂಡಿಕೆ.. ಹೊಸ ದಿನಾಂಕ ಇಲ್ಲಿದೆ!



















