ಬೈಂದೂರು : ಕುಂದಾಪುರ ವಲಯ ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಟರ್ಸ್ ನ ಸಭಾ ಕಾರ್ಯಕ್ರಮ ಹಾಗೂ ಪದಪ್ರದಾನ ಸಮಾರಂಭ ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಶ್ರೀ ಕೋಟಿಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ ಮಾರ್ಕೋಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಕಾರ್ಯವನ್ನು ಕಠಿಣ ಪರಿಶ್ರಮದಿಂದ ಮಾಡಿದಾಗ ಯಶಸ್ಸು ನಿಶ್ಚಿತ. ವೆಲ್ಡಿಂಗ್ ಉದ್ಯಮಕ್ಕೆ ಸರ್ಕಾರದ ಬೆಂಬಲ ಅತೀ ಅಗತ್ಯ ಎಂದರು.
ಮುಖ್ಯ ಅತಿಥಿ, ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಮಾತನಾಡಿ, ಬಹಳಷ್ಟು ಬೆವರು ಸುರಿಸಿ ಸಮಾಜ ಹಾಗು ದೇಶ ಕಟ್ಟುವ ನಿಟ್ಟಿನಲ್ಲಿ ಶ್ರಮಜೀವಿಗಳಾಗಿ ಕೆಲಸ ಕಾರ್ಯ ಮಾಡುತ್ತಿರುವ ವೆಲ್ಡರ್ಗಳ ಉದ್ಯಮವು ಬಹಳಷ್ಟು ಅಪಾಯಕಾರಿ ಸನ್ನಿವೇಶದಿಂದ ಕೂಡಿದೆ. ಅವರ ಬದುಕಿಗೊಂದು ಆಯಾಮ ಸೃಷ್ಟಿಸುವ ನೆಲೆಯಲ್ಲಿ ನಿಧಿ ಸಂಗ್ರಹದ ಯೋಜನೆ ಅತೀ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಚಾರ್ ಕುಂದಾಪುರ ವಲಯ ವೆಲ್ಡಿಂಗ್ ಹಾಗು ಫ್ಯಾಬ್ರಿಕೇಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಅರುಣ್ ಪಿ. ವಹಿಸಿದ್ದರು.
ಉಪ್ಪಳ್ಳಿ ಶ್ರೀ ಕಾಳಿಕಾಂಬ ದೇಗುಲದ ಆಡಳಿತ ಮೊಕ್ತಸರ ಚಂದ್ರಯ್ಯ ಆಚಾರ್ಯ ಕಳಿ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಸಣ್ಣ ಕೈಗಾರಿಕೆ ಅಧಿಕಾರಿ ಸೀತಾರಾಮ ಶೆಟ್ಟಿ, ಕುಂದಾಪುರ ಠಾಣಾಧಿಕಾರಿ ನಂಜ ನಾಯ್ಕ್, ಉದ್ಯಮಿಗಳಾದ ಶ್ರೀಧರ್ ಆಚಾರ್ಯ, ಶರತ್ ರವಿ, ನೂತನ ಅಧ್ಯಕ್ಷ ಗಣೇಶ್ ಆಚಾರ್ಯ ನಾಯ್ಕನಕಟ್ಟೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪಾಧ್ಯಕ್ಷ ಭಾಸ್ಕರ್ ಆಚಾರ್ಯ ಕೋಟೇಶ್ವರ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಗಣಪತಿ ಶ್ರೀಯಾನ್ ತೆಕ್ಕಟ್ಟೆ ಪ್ರಸ್ತಾವಿಸಿದರು. ರಮೇಶ ಆಚಾರ್ಯ ತಲ್ಲೂರು ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಆಚಾರ್ಯ ಮಧುವನ ವಂದಿಸಿದರು.



















