ಬೆಳಗಾವಿ : ಹಣಕಾಸಿನ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ 16 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ಗೋಕಾಕ್ ನಗರದ ಲಕ್ಷ್ಮೀ ಬಡಾವಣೆಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಮಾರಕಾಸ್ತ್ರಗಳೊಂದಿಗೆ ಪರಸ್ಪರ ದಾಳಿ ನಡೆಸಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಾಹಿತಿಯ ಪ್ರಕಾರ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ ಕೆಲವೇ ಕ್ಷಣಗಳಲ್ಲಿ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಎರಡೂ ಕಡೆಯವರು ರಾಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಪರಸ್ಪರ ಹಲ್ಲೆ ನಡೆಸಿದ್ದು, ರಸ್ತೆಯಲ್ಲೇ ಭಾರೀ ಗಲಾಟೆ ನಡೆದಿದೆ.
ಈ ಘರ್ಷಣೆಯಲ್ಲಿ ವರುಣ್ ಸಂತೋಷ್ ಗೊಲ್ಲರ್ (16) ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರಾಮಾರಿಯ ವೇಳೆ ದುಷ್ಕರ್ಮಿಗಳು ಒಂದು ಕಾರು, ಬುಲೇರೋ ವಾಹನ ಹಾಗೂ ಮನೆಯ ಕಿಟಕಿಗಳನ್ನು ಜಖಂಗೊಳಿಸಿದ್ದು, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೈಯಲ್ಲಿ ರಾಡ್ ಹಿಡಿದು ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೋಕಾಕ್ ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಲಾಟೆಯ ನಿಖರ ಕಾರಣ ಹಾಗೂ ಭಾಗಿಯಾಗಿರುವವರ ಬಗ್ಗೆ ತನಿಖೆ ಮುಂದುವರಿಸಿದ್ದು, ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ : ‘ಕೈ’ ಸಂಸದ-ಶಾಸಕಿಯ ಕ್ಷೇತ್ರದಲ್ಲೇ ಆರೋಗ್ಯ ಸೇವೆಯ ನಿರ್ಲಕ್ಷ್ಯ? 1 ಕೋಟಿ ವೆಚ್ಚದ ಆಸ್ಪತ್ರೆ 4 ವರ್ಷಗಳಿಂದ ಬಂದ್!



















