ಬೀದರ್ : ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ದೇಶದ ವಿವಿಧ ವಲಯಗಳಿಗೆ ತಟ್ಟುತ್ತಿದ್ದಂತೆ, ಗಡಿ ಜಿಲ್ಲೆ ಬೀದರ್ನಲ್ಲೂ ಅದರ ಪ್ರತಿಫಲ ಕಂಡುಬರುತ್ತಿದೆ. ದೊಡ್ಡ ಉದ್ಯಮಗಳ ಜೊತೆಗೆ ಇದೀಗ ಬೀದಿಬದಿ ಸಣ್ಣ ವ್ಯಾಪಾರಿಗಳು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಪಾನಿಪುರಿ ವ್ಯಾಪಾರ ನಡೆಸುವವರಿಗೆ ಎಲ್ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿ ತಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಗ್ಯಾಸ್ ಸಿಲಿಂಡರ್ ದೊರೆಯದ ಹಿನ್ನೆಲೆ ಅನೇಕ ವ್ಯಾಪಾರಿಗಳು ತಮ್ಮ ಗಾಡಿಗಳನ್ನು ಬಂದ್ ಮಾಡಿ ಕುಳಿತಿದ್ದಾರೆ.
ವ್ಯಾಪಾರಸ್ಥರು ಖಾಲಿ ಸಿಲಿಂಡರ್ಗಳನ್ನು ಹಿಡಿದು ಗ್ಯಾಸ್ ಏಜೆನ್ಸಿಗಳಿಗೆ ತೆರಳಿದರೂ, ಗ್ಯಾಸ್ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇನ್ನೂ ಕಾಳಸಂತೆಯಲ್ಲಿ 4,000 ರಿಂದ 5,000 ರೂ.ವರೆಗೆ ಹಣ ನೀಡಿದರೂ ಸಿಲಿಂಡರ್ ಸಿಗುತ್ತಿಲ್ಲ ಎಂಬುದು ಅಳಲು ತೊಡಿಕೊಂಡಿದ್ದಾರೆ. ಪ್ರತಿದಿನ 2,000 ರಿಂದ 3,000 ರೂ. ಆದಾಯ ಗಳಿಸುತ್ತಿದ್ದ ಪಾನಿಪೂರಿ ವ್ಯಾಪಾರಿಗಳು, ಇದೀಗ ಸಂಪೂರ್ಣವಾಗಿ ಆದಾಯ ಕಳೆದುಕೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮತ್ತು ಕೊರತೆ ಹಿನ್ನೆಲೆ ವ್ಯವಹಾರ ಮುಂದುವರಿಸುವುದು ಅಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
“ಗ್ಯಾಸ್ಗಾಗಿ ಅಲೆದು ಸುಸ್ತಾಗಿದೆ. ಕಾಳಸಂತೆಯಲ್ಲಿ ಹೆಚ್ಚು ಹಣ ನೀಡಿ ಗ್ಯಾಸ್ ತೆಗೆದುಕೊಂಡರೂ ಲಾಭ ಉಳಿಯುವುದಿಲ್ಲ. ಹೀಗಾದರೆ ನಮ್ಮ ಜೀವನ ಹೇಗೆ ಸಾಗಬೇಕು?” ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪಾನಿಪೂರಿ ವ್ಯಾಪಾರ ಸ್ಥಗಿತಗೊಂಡಿದ್ದು, ಸಮಸ್ಯೆ ಶೀಘ್ರ ಪರಿಹರಿಸುವಂತೆ ವ್ಯಾಪಾರಿಗಳು ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ‘ಆಪರೇಷನ್ ಬೀಸ್ಟ್’ನಲ್ಲಿ ಮಹಾ ಎಡವಟ್ಟು : ಪ್ರಜ್ಞೆ ತಪ್ಪಿತೆಂದು ಹಿಡಿಯಲು ಹೋದಾಗ ದಿಢೀರ್ ದಾಳಿ ಮಾಡಿದ ಹುಲಿ!


















